ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಬಿರುಸು ಹೆಚ್ಚಾಗಿದೆ. ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಬೇಕೆಂಬ ಆಗ್ರಹ ಬಲವಾಗುತ್ತಿದೆ. ಈ ನಿಟ್ಟಿನಲ್ಲಿ ಮತದಾರರು ಸ್ಥಳೀಯ ಅಭ್ಯರ್ಥಿ ಆಯ್ಕೆಗೆ ಒತ್ತು ನೀಡಬೇಕು ಎಂದು ಟಿಕೆಟ್ ಆಕಾಂಕ್ಷಿ ಬೇತೂರುಪಾಳ್ಯ ಜೆ.ರಾಜು ಮನವಿ ಮಾಡಿದರು.
ಜೆ.ಜೆ ಹಳ್ಳಿ ಹೋಬಳಿಯ ಲಕ್ಕೇನಹಳ್ಳಿ ಬೂತಪ್ಪ ದೇವಸ್ಥಾನದ ಆವರಣದಲ್ಲಿ ‘ಸ್ಥಳೀಯರ ಸ್ವಾಭಿಮಾನ ವೇದಿಕೆ’ ವತಿಯಿಂದ ನಡೆದ ಜನಭಿಪ್ರಾಯ ಸಂಗ್ರಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನದ ಆಕಾಂಕ್ಷಿ ಬೆತೂರುಪಾಳ್ಯ ರಾಜು ಅವರು ಹೊರಗಿನಿಂದ ಬಂದು ಗೆದ್ದವರು ತಾಲ್ಲೂಕಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಜೆ.ಜೆ ಹಳ್ಳಿ ಹೋಬಳಿಯಲ್ಲಿ ಕುಡಿಯುವ ನೀರಿನ ಶಾಶ್ವತ ಸಮಸ್ಯೆಯಾಗಿದ್ದರೂ, ದಶಕಗಳಿಂದ ಹೊರಗಿನಿಂದ ಬಂದು ಗೆದ್ದವರು ಈ ಬಗ್ಗೆ ಗಂಭೀರವಾಗಿ ಗಮನಿಸದೇ ಕೇವಲ ರಾಜಕಾರಣ ಮಾಡುತ್ತಿದ್ದಾರೆ ಎಂದಿದ್ದಾರೆ.
ಟಿಕೆಟ್ ನೀಡಿ ಸ್ಥಳೀಯರ ಸಮಸ್ಯೆಗಳಿಗೆ ಪರಿಹಾರ ನೀಡಬೇಕಾದ್ದು ಪಕ್ಷಗಳ ಕರ್ತವ್ಯ. ಹಣದ ಪ್ರಭಾವ ಬಳಸಿ ಬಂದ ಹೊರಗಿನ ವ್ಯಕ್ತಿಗಳು ಕಳೆದ ಹಣದ ಕ್ರೂಢೀಕರಣದಲ್ಲಿಯೇ ಸಮಯ ಕಳೆಯುತ್ತಿದ್ದಾರೆ.
ಇದರಿಂದ ತಾಲ್ಲೂಕಿನ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ. ಅದೇ ಸ್ಥಳೀಯ ಅಭ್ಯರ್ಥಿಗಳಾದರೆ, ತಾಲ್ಲೂಕಿನ ಜನರ ಸಂಕಷ್ಟದ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತದೆ. ಸ್ಥಳೀಯರು ಗೆದ್ದರೆ ತಾಲ್ಲೂಕಿನ ಅಭಿವೃದ್ಧಿ ವೇಗ ಪಡೆದುಕೊಳ್ಳಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 'ಸ್ಥಳೀಯರ ಸ್ವಾಭಿಮಾನ ವೇದಿಕೆ'ಯ ನೂರಾರು ಮುಖಂಡರು ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಒಕ್ಕೊರಲಿನಿಂದ ಆಗ್ರಹಿಸಿದರು ಮತ್ತು ಜೆ. ರಾಜು ಅವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು.
ಈ ಕಾರ್ಯಕ್ರಮದಲ್ಲಿ ದಿಂಡಾವರ ಗೋವಿಂದ ರಾಜು, ಗ್ರಾಮಾಂತರ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ಮಾಜಿ ಸದಸ್ಯ ವಿರೂಪಾಕ್ಷಪ್ಪ, ರೈತ ಮುಖಂಡ ಚಂದ್ರಗಿರಿ, ಸುರೇಶ್ ಗೌಡ, ಲಕ್ಕೇನಹಳ್ಳಿ ರಮೇಶ್, ಭೂತೇಶ್, ಈರೇಗೌಡ, ಕರಿಯಣ್ಣ ತಿಮ್ಮಣ್ಣ, ಕರೇಗೌಡ, ಮಂಜುನಾಥ್, ಯಲ್ಲದಕೆರೆ ಪ್ರದೀಪ್, ಶಿವಕುಮಾರ್, ಗೌಡ ಪಿಲಾಲ ಮೊದಲಾದವರು ಉಪಸ್ಥಿತರಿದ್ದರು.



