ಚಂದ್ರವಳ್ಳಿ ನ್ಯೂಸ್, ಕೊಡಗು:
ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣವಾದ ದುಬಾರೆ ಆನೆ ಶಿಬಿರದಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಎರಡು ಸಾಕಾನೆಗಳ ನಡುವೆ ನಡೆದ ದಿಢೀರ್ ಕಾದಾಟದ ವೇಳೆ ಆನೆಯೊಂದು ಆಯತಪ್ಪಿ ಬಿದ್ದ ಪರಿಣಾಮ, ಅದರ ಕೆಳಗೆ ಸಿಲುಕಿ ತಮಿಳುನಾಡು ಮೂಲದ ಮಹಿಳಾ ಪ್ರವಾಸಿಗರೊಬ್ಬರು ದುರಾದೃಷ್ಟವಶಾತ್ ಸಾವನ್ನಪ್ಪಿದ್ದಾರೆ.
ಈ ದುರಂತದ ಸಂಪೂರ್ಣ ವಿವರ ಹಾಗೂ ಇದರ ಬೆನ್ನಲ್ಲೇ ಅರಣ್ಯ ಇಲಾಖೆ ತೆಗೆದುಕೊಂಡಿರುವ ಮಹತ್ವದ ನಿರ್ಧಾರ.
ನಡೆದಿದ್ದೇನು?
ಸೋಮವಾರ ದುಬಾರೆ ಶಿಬಿರದಲ್ಲಿ ಸಾಕಾನೆಗಳಾದ ಕಂಚನ್ ಮತ್ತು ಮಾರ್ತಾಂಡಗೆ ಕಾವೇರಿ ನದಿಯಲ್ಲಿ ಸ್ನಾನ ಮಾಡಿಸಲಾಗುತ್ತಿತ್ತು. ಈ ವೇಳೆ ತಮಿಳುನಾಡಿನಿಂದ ಬಂದಿದ್ದ ಪ್ರವಾಸಿ ಮಹಿಳೆ ಝಾನ್ಸಿ(33) ಎಂಬುವವರು ನದಿಯ ದಂಡೆಯ ಮೇಲೆ ನಿಂತು ಇದನ್ನು ವೀಕ್ಷಿಸುತ್ತಿದ್ದರು.
ಸ್ನಾನದ ವೇಳೆಯಲ್ಲಿ ಕಂಚನ್ ಮತ್ತು ಮಾರ್ತಾಂಡ ಆನೆಗಳ ನಡುವೆ ಇದ್ದಕ್ಕಿದ್ದಂತೆ ಜಗಳ ಆರಂಭವಾಗಿದೆ. ಮಾವುತರು ಅವುಗಳನ್ನು ನಿಯಂತ್ರಿಸಲು ಹರಸಾಹಸ ಪಟ್ಟರೂ ಸಾಧ್ಯವಾಗಿಲ್ಲ. ಈ ವೇಳೆ ಕಂಚನ್ ಆನೆಯು ಮಾರ್ತಾಂಡಗೆ ಜೋರಾಗಿ ಗುದ್ದಿದೆ. ಈ ಮುಖಾಮುಖಿ ಡಿಕ್ಕಿಯಿಂದಾಗಿ ಮಾರ್ತಾಂಡ ಆನೆ ಆಯತಪ್ಪಿ ನದಿಯ ದಂಡೆಯ ಕಡೆಗೆ ಉರುಳಿ ಬಿದ್ದಿದೆ. ದುರದೃಷ್ಟವಶಾತ್, ಅಲ್ಲಿಯೇ ನಿಂತಿದ್ದ ಝಾನ್ಸಿ ಅವರು ಆನೆಯ ಕೆಳಗೆ ಸಿಲುಕಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಸಮಗ್ರ ತನಿಖೆಗೆ ಸಚಿವರ ಆದೇಶ-
ಘಟನೆಯ ಬಗ್ಗೆ ತೀವ್ರ ದಿಗ್ಭ್ರಮೆ ಹಾಗೂ ಕಳವಳ ವ್ಯಕ್ತಪಡಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ, ಇದೊಂದು ಅತ್ಯಂತ ದುರದೃಷ್ಟಕರ ಮತ್ತು ಯಾರೂ ಊಹಿಸದ ಅಚಾತುರ್ಯ ಎಂದಿದ್ದಾರೆ.
"ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಈ ಅಪಾರ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ" ಎಂದು ಸಂತಾಪ ಸೂಚಿಸಿರುವ ಸಚಿವರು, ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಪ್ರವಾಸಿಗರಿಗೆ ಇನ್ಮುಂದೆ ಕಠಿಣ ನಿಯಮಗಳು!
ಈ ದುರಂತದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ, ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ದುಬಾರೆ ಸೇರಿದಂತೆ ರಾಜ್ಯದ ಎಲ್ಲಾ ಆನೆ ಶಿಬಿರಗಳಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ.
ವನ್ಯಜೀವಿಗಳನ್ನು ಎಷ್ಟೇ ಪಳಗಿಸಿದ್ದರೂ ಅವುಗಳ ನೈಸರ್ಗಿಕ ಸ್ವಭಾವವನ್ನು ಊಹಿಸಲು ಸಾಧ್ಯವಿಲ್ಲದ ಕಾರಣ, ಸಚಿವ ಈಶ್ವರ್ ಖಂಡ್ರೆ ಅವರು ಈ ಕೆಳಗಿನ ಕಟ್ಟುನಿಟ್ಟಿನ ಕ್ರಮಗಳಿಗೆ ಆದೇಶಿಸಿದ್ದಾರೆ.
ಅಂತರ ಕಾಯ್ದುಕೊಳ್ಳುವುದು ಕಡ್ಡಾಯ: ಪ್ರವಾಸಿಗರು ಇನ್ಮುಂದೆ ಆನೆಗಳಿಂದ ನಿರ್ದಿಷ್ಟ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲೇಬೇಕು.
ಸ್ಪರ್ಶಿಸುವಂತಿಲ್ಲ: ಆನೆಗಳ ಸೊಂಡಿಲು ಮುಟ್ಟುವುದು ಅಥವಾ ಅವುಗಳ ತೀರಾ ಹತ್ತಿರ ನಿಂತು ಫೋಟೋ/ಸೆಲ್ಫಿ ತೆಗೆದುಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು.
ಸ್ನಾನ ಮಾಡಿಸುವಂತಿಲ್ಲ: ಪ್ರವಾಸಿಗರು ಆನೆಗಳ ಮೈ ತೊಳೆಯುವ ಮತ್ತು ಸ್ನಾನ ಮಾಡಿಸುವ ಚಟುವಟಿಕೆಗಳಿಗೆ ಬ್ರೇಕ್ ಬೀಳಲಿದೆ.
ಆಹಾರ ನೀಡಿಕೆಗೆ ನಿರ್ಬಂಧ: ಸಾರ್ವಜನಿಕರು ಆನೆಗಳಿಗೆ ನೇರವಾಗಿ ಬೆಲ್ಲ, ಬಾಳೆಹಣ್ಣು ಸೇರಿದಂತೆ ಯಾವುದೇ ಆಹಾರ ಪದಾರ್ಥಗಳನ್ನು ನೀಡುವುದನ್ನು ನಿರ್ಬಂಧಿಸಲಾಗುವುದು.
ಪ್ರವಾಸೋದ್ಯಮದ ಹೆಸರಿನಲ್ಲಿ ನಿರ್ಲಕ್ಷ್ಯ ವಹಿಸಿದರೆ ಇಂತಹ ದುರಂತಗಳು ಮರುಕಳಿಸುತ್ತವೆ ಎಂಬುದಕ್ಕೆ ಈ ಘಟನೆ ಕಣ್ಣುಂದಿನ ಉದಾಹರಣೆಯಾಗಿದ್ದು, ಇನ್ಮುಂದೆ ಆನೆ ಶಿಬಿರಗಳಲ್ಲಿ ಕಟ್ಟುನಿಟ್ಟಿನ ಸುರಕ್ಷತಾ ನಿಯಮಗಳು ಜಾರಿಗೆ ಬರಲಿವೆ.


