ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲೂಕಿನ ವಿವಿಧ ಗ್ರಾಮಗಳಿಗೆ ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಅಧಿಕಾರಿಗಳ ತಂಡ ಜಂಟಿಯಾಗಿ ಭೇಟಿ ನೀಡಿ, ಪ್ರಸಕ್ತ ಸಾಲಿನ ಮುಸುಕಿನ ಜೋಳ, ಹತ್ತಿ ಸೇರಿದಂತೆ ಇತರೆ ಪ್ರಮುಖ ಬೆಳೆಗಳಲ್ಲಿ ಕಂಡುಬಂದಿರುವ ಕೀಟ ಹಾಗೂ ರೋಗಬಾಧೆಗಳ ಕುರಿತು ಜಂಟಿ ಸಮೀಕ್ಷೆ ಮತ್ತು ಪರಿಶೀಲನೆ ನಡೆಸಿದರು.
ಬಬ್ಬೂರು ಫಾರಂನ ಕೃಷಿ ವಿಜ್ಞಾನ ಕೇಂದ್ರದ (KVK) ಹಿರಿಯ ವಿಜ್ಞಾನಿಗಳಾದ ಶ್ರೀ ಓಂಕಾರಪ್ಪ, ಶ್ರೀ ಧನಂಜಯ ಹಾಗೂ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಅಶೋಕ್ ಅವರನ್ನೊಳಗೊಂಡ ಅಧಿಕಾರಿಗಳ ತಂಡವು ರೈತರ ಜಮೀನುಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿತು. ಪ್ರಸ್ತುತ ಮುಸುಕಿನ ಜೋಳದ ಬೆಳೆಯಲ್ಲಿ ಕತ್ತರಿ ಹುಳು (ಸೈನಿಕ ಹುಳು) ಹಾಗೂ ಹತ್ತಿ ಬೆಳೆಯಲ್ಲಿ ರಸಹೀರುವ ಕೀಟಗಳ ಬಾಧೆ ವ್ಯಾಪಕವಾಗಿ ಕಂಡುಬಂದಿದ್ದು, ಇವುಗಳ ತಡೆಗೆ ರೈತರು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿಜ್ಞಾನಿಗಳು ಜಾಗೃತಿ ಮೂಡಿಸಿದರು.
ಬೆಳೆ ಸಂರಕ್ಷಣೆಗೆ ವಿಜ್ಞಾನಿಗಳ ಪ್ರಮುಖ ಸಲಹೆಗಳು:
ಮುಸುಕಿನ ಜೋಳ (ಸೈನಿಕ ಹುಳುವಿನ ಬಾಧೆ): ಜೋಳದ ಬೆಳೆಯನ್ನು ಕಾಡುತ್ತಿರುವ ಸೈನಿಕ ಹುಳುವಿನ ನಿಯಂತ್ರಣಕ್ಕಾಗಿ ಪ್ರತಿ ಲೀಟರ್ ನೀರಿಗೆ 0.4 ಮಿ.ಲೀ. ಕೊರಾಜನ್ ಅಥವಾ 0.5 ಮಿ.ಲೀ. ಎಮಾಮೆಕ್ಟಿನ್ ಬೆಂಜೋಯೇಟ್ ಕೀಟನಾಶಕವನ್ನು ಬೆರೆಸಿ ತಕ್ಷಣವೇ ಸಿಂಪಡಿಸಬೇಕು.
ಹತ್ತಿ ಬೆಳೆ (ರಸಹೀರುವ ಕೀಟಗಳ ಬಾಧೆ): ಹತ್ತಿ ಬೆಳೆಯಲ್ಲಿ ರಸಹೀರುವ ಕೀಟಗಳ ನಿಯಂತ್ರಣಕ್ಕಾಗಿ ಪ್ರತಿ ಲೀಟರ್ ನೀರಿಗೆ 0.5 ಗ್ರಾಂ ಇಮಿಡಾಕ್ಲೋಪ್ರಿಡ್ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು.
ಬೆಳೆಗಳಲ್ಲಿ ಕೀಟಬಾಧೆಯ ಆರಂಭಿಕ ಹಂತದಲ್ಲೇ ರೈತರು ಎಚ್ಚೆತ್ತುಕೊಂಡು ಈ ಕೀಟನಾಶಕಗಳನ್ನು ಸಿಂಪಡಿಸುವುದರಿಂದ ಮುಂದಾಗುವ ಆರ್ಥಿಕ ನಷ್ಟವನ್ನು ತಡೆಯಬಹುದು ಎಂದು ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ.



