ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
"ದೇಶದ ಭದ್ರತೆ ಮತ್ತು ಸುಭದ್ರ ರಾಷ್ಟ್ರ ನಿರ್ಮಾಣದ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡುತ್ತಿರುವ ಸಾಥ್ ಅದ್ವಿತೀಯವಾದುದು," ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶ್ಲಾಘಿಸಿದರು.
ತಮ್ಮ 50 ವರ್ಷಗಳ ಸಾರ್ವಜನಿಕ ಸೇವೆಯ ಸಾರ್ಥಕ 'ಅಭಿಮಾನೋತ್ಸವ' ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸುಭದ್ರ ರಾಷ್ಟ್ರದ ನಿರ್ಮಾಣ: "ದೇಶವು ಇಂದು ಸುಭದ್ರವಾಗಿದ್ದು, ಎಲ್ಲಾ ರೀತಿಯ ವೈರಿಗಳನ್ನು ಸಶಕ್ತವಾಗಿ ಹಿಮ್ಮೆಟ್ಟಿಸಲು ನಾವು ಶಕ್ತರಾಗಿದ್ದೇವೆ ಎಂಬ ಬಲಿಷ್ಠ ಸಂದೇಶವನ್ನು ಸಾರಿದ ದೇಶ ಕಂಡ ದಿಟ್ಟ ಗೃಹ ಸಚಿವ ಅಮಿತ್ ಶಾ ಅವರು ಇಂದು ಕೋಟೆನಾಡಿಗೆ ಬಂದಿದ್ದಾರೆ. ಅವರ ಉಪಸ್ಥಿತಿ ನಮಗೆಲ್ಲರಿಗೂ ಆನೆ ಬಲ ತಂದಿದೆ," ಎಂದು ಹರ್ಷ ವ್ಯಕ್ತಪಡಿಸಿದರು.
ಅಮಿತ್ ಶಾ ಅವರ ಸಂಘಟನಾ ಶಕ್ತಿ: "ಅಮಿತ್ ಶಾ ಅವರ ಪಕ್ಷ ಸಂಘಟನೆಯ ಚಾತುರ್ಯ ಮತ್ತು ಕಾರ್ಯವೈಖರಿ ಅತಿ ದೊಡ್ಡದು. ಪ್ರಧಾನಿ ಮೋದಿ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಅವರು ಮಾಡುತ್ತಿರುವ ಸೇವೆ ಭಾರತವನ್ನು ಜಗತ್ತಿನ ಬಲಿಷ್ಠ ರಾಷ್ಟ್ರವನ್ನಾಗಿ ರೂಪಿಸಲು ಪ್ರಮುಖ ಸಹಕಾರಿಯಾಗಿದೆ," ಎಂದು ಬಣ್ಣಿಸಿದರು.
ಧನ್ಯವಾದ ಸಮರ್ಪಣೆ: ಕೋಟೆನಾಡು ಚಿತ್ರದುರ್ಗದಲ್ಲಿ ಹಮ್ಮಿಕೊಂಡಿರುವ ಈ ಅಭಿಮಾನೋತ್ಸವಕ್ಕೆ ಕೇಂದ್ರ ನಾಯಕರು ಹಾಗೂ ನಾಡಿನ ನೂರಾರು ಮಠಾಧೀಶರು ಆಗಮಿಸಿ ಆಶೀರ್ವದಿಸಿರುವುದಕ್ಕೆ ಯಡಿಯೂರಪ್ಪ ಅವರು ಭಾವುಕರಾಗಿ ಕೃತಜ್ಞತೆ ಸಲ್ಲಿಸಿದರು.
ಅಮಿತ್ ಶಾ ಅವರ ದಕ್ಷ ನಾಯಕತ್ವದಲ್ಲಿ ಭಾರತದ ಆಂತರಿಕ ಭದ್ರತೆ ಮತ್ತಷ್ಟು ಗಟ್ಟಿಯಾಗಿದ್ದು, ಶತ್ರು ರಾಷ್ಟ್ರಗಳಿಗೆ ಭಾರತದ ತಾಕತ್ತು ಏನೆಂಬುದು ಮನವರಿಕೆಯಾಗಿದೆ ಎಂದು ಬಿಎಸ್ ವೈ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು. ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದ ಗೌಡ, ಜಗದೀಶ್ ಶೆಟ್ಟರ್, ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವರಾದ ಬಿ. ಶ್ರೀರಾಮುಲು, ಸಿ.ಟಿ ರವಿ, ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಎಸ್.ಕೆ. ಬಸವರಾಜನ್ ಸೇರಿದಂತೆ ಮತ್ತಿತರರು ನಾಯಕರು ಇದ್ದರು.


