ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ
ತೂಬಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ರಾಮಚಂದ್ರಪ್ಪ ನೇತೃತ್ವದಲ್ಲಿ ನಡೆಯಿತು.
ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಅರವಿಂದ್ ಸಭೆಯಲ್ಲಿ ಮಾತನಾಡಿ ರೈತರು ಕೃಷಿಯೊಂದಿಗೆ ದೊಡ್ಡ ಮಟ್ಟದಲ್ಲಿ ,ಹೈನುಗಾರಿಕೆ ಮತ್ತು ಪಶುಪಾಲನೆಯು ಗ್ರಾಮೀಣ ಭಾಗದ ಆರ್ಥಿಕ ಅಭಿವೃದ್ಧಿಗೆ ಅತ್ಯುತ್ತಮ ಬೆನ್ನೆಲುಬಾಗಿದೆ. ದೈನಂದಿನ ಆದಾಯದ ಮೂಲ, ಸರ್ಕಾರದ ಸಬ್ಸಿಡಿಗಳು ಮತ್ತು ಹೈನುಗಾರಿಕಾ ಸಹಕಾರ ಸಂಘಗಳ ನೆರವಿನಿಂದ ರೈತರು ತಮ್ಮ ಆದಾಯವನ್ನು ದ್ವಿಗುಣಗೊಳಿಸಿ ಆರ್ಥಿಕವಾಗಿ ಸದೃಢರಾಗಲು ನೆರವಾಗಿದೆ. ಹೈನುಗಾರಿಕೆ ಮಾಡುವ ರೈತರು ನಂದಿನಿಸಂಸ್ಥೆಯ ಫೀಡ್ಸ್ ನ್ನು ರಾಸುಗಳಿಗೆ ನೀಡಿದರೆ ಉತ್ತಮ ಹಾಲು ದೊರೆಯುತ್ತದೆ.ಹಾಗೂ ಸಂಘದ ಅಧ್ಯಕ್ಷರು ನಿರ್ದೇಶಕರು ಸೇರಿ ಸದಸ್ಯರಿಗೆ ಬಿ ಡಿ ಸಿ ಸಿ ಬ್ಯಾಂಕಿನಿಂದ ಸಾಲವನ್ನು ದೊರಕಿಸಿಕೊಟ್ಟರೆ ರೈತರ ಹಸುಗಳನ್ನು ಕಟ್ಟಿ ಹೆಚ್ಚಾಗಿ ಹಾಲನ್ನು ಸರಬರಾಜು ಮಾಡಿ ಸಂಘಕ್ಕೆ ನೀಡುತ್ತಾರೆ ಆಗ ಸಂಘ ಬೆಳೆಯಲು ಸಾಧ್ಯ ಎಂದು ಹೇಳಿದರು.
ಬೆಂಗಳೂರು ಹಾಲು ಒಕ್ಕೂಟದ ಉಪ ವ್ಯವಸ್ಥಾಪಕರಾದ ಎಲ್.ಬಿ.ನಾಗರಾಜ್ ಮಾತನಾಡಿ, ತೂಬಗೆರೆ ಹಾಲು ಉತ್ಪಾದಕರ ಸಹಕಾರ ಸಂಘವು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು ಸಂಘವು 14 ಲಕ್ಷದ 90 ಸಾವಿರ ಲಾಭ ಬಂದಿದೆ, ರೈತರು ಹೆಚ್ಚು ಹೆಚ್ಚು ಹಸುಗಳನ್ನು ಕಟ್ಟಿ ಸಂಘವನ್ನು ಇನ್ನಷ್ಟು ಬಲಿಷ್ಠ ಗೊಳಿಸಬೇಕಾಗಿದೆ ಹಾಗು ಗ್ರಾಮೀಣ ಹಾಲು ಉತ್ಪಾದಕರಿಗೆ ನ್ಯಾಯಯುತ ಬೆಲೆಯನ್ನು ನೀಡುವುದಲ್ಲದೆ ಪಟ್ಟಣ ಪ್ರದೇಶದ ಗ್ರಾಹಕರ ಬೇಡಿಕೆಗಳಾದ ಶುದ್ಧ ಆರೋಗ್ಯಕರ ಮತ್ತು
ಗುಣಮಟ್ಟದ ಹಾಲು, ಬೆಣ್ಣೆ, ತುಪ್ಪ, ಪೇಡಾ, ಬರ್ಫಿ ಪನೀರ್, ಖೋವಾ, ಸುವಾಸನೆಯುಕ್ತ ರುಚಿಕರ ಹಾಲು ಇತ್ಯಾದಿಗಳನ್ನು ಒದಗಿಸುತ್ತಿದೆ ಇನ್ನು ರೈತರಿಗೆ ಗ್ರಾಮೀಣ ಹಾಲು ಉತ್ಪಾದಕರಿಗೆ ನಿರಂತರ ಮಾರುಕಟ್ಟೆಯನ್ನು ಒದಗಿಸುವುದು ಹಾಗೂ ಗ್ರಾಹಕರ ಬೇಡಿಕೆಗೆ ಅನುಸಾರ ಉತ್ತಮ ಗುಣಮಟ್ಟದ ಹಾಲಿನ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದೆ. ಗ್ರಾಮೀಣ ಪ್ರದೇಶದ ಹಾಲು ಉತ್ಪಾದನೆಯ ಅಭಿವೃದ್ಧಿಗೆ ಒತ್ತು ಕೊಡುವ ಉದ್ದೇಶದಿಂದ ಅವಶ್ಯ ತಾಂತ್ರಿಕ ಸೌಲಭ್ಯಗಳು ಜಾನುವಾರುಗಳಿಗೆ ಸಮತೂಕದ ಪಶು ಆಹಾರ ಒದಗಿಸುತ್ತಿದೆ ಎಂದು ಹೇಳಿದರು.
ತೂಬಗೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಟಿ.ವಿ. ವೆಂಕಟೇಶ್, ಸದಸ್ಯ ಮುನಿಕೃಷ್ಣಪ್ಪ, ದೇವೇಂದ್ರ ಸ್ವಾಮಿ, ಹಾಲು ಉತ್ಪಾದಕರ ಸಹಕಾರದ ಸಂಘದ ಮಾಜಿ ಅಧ್ಯಕ್ಷ ಗಂಗರಾಜು, ನಾರಾಯಣಸ್ವಾಮಿ, ವೆಂಕಟಪ್ಪ, ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ವಿನಯ್ ಕುಮಾರ್,ಸಂಘದ ಕಾರ್ಯದರ್ಶಿ ಶ್ರೀನಿವಾಸ್ ಹಾಗೂ ಸಂಘದ ನಿರ್ದೇಶಕರು ಸಿಬ್ಬಂದಿ ವರ್ಗದವರು ಸಭೆಯಲ್ಲಿ ಹಾಜರಿದ್ದರು.



