ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲೂಕಿನ ಐಮಂಗಲದ ಶ್ರೀ ಹರಳಯ್ಯ ಗುರುಪೀಠದ ಪೂಜ್ಯ ಸ್ವಾಮೀಜಿಯವರ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆ ಹಾಗೂ ಕೊಲೆ ಯತ್ನ ಪ್ರಕರಣವನ್ನು ಹಾಲಿ ಅಥವಾ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ವಿಶೇಷ ತನಿಖಾ ತಂಡಕ್ಕೆ (SIT) ವಹಿಸಬೇಕು ಮತ್ತು ಮಠಕ್ಕೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿ ಹಿರಿಯೂರು ದಲಿತ ಸ್ವಾಭಿಮಾನಿ ಹೋರಾಟಗಾರರ ಸಮಿತಿ ವತಿಯಿಂದ ತಹಶೀಲ್ದಾರ್ ಮುಖಾಂತರ ಮಾನ್ಯ ರಾಷ್ಟ್ರಪತಿಗಳು, ರಾಜ್ಯಪಾಲರು ಹಾಗೂ ರಾಜ್ಯದ ಗೃಹ ಸಚಿವರಿಗೆ ಜಂಟಿ ಮನವಿ ಸಲ್ಲಿಸಲಾಯಿತು.
"ಪೂಜ್ಯ ಶ್ರೀಗಳ ಮೇಲಿನ ದಾಳಿ ಕೇವಲ ವೈಯಕ್ತಿಕ ಅಥವಾ ಜಮೀನಿನ ವಿವಾದಕ್ಕೆ ಸೀಮಿತವಾಗಿಲ್ಲ. ಇದರ ಹಿಂದೆ ಪ್ರಭಾವಿ ವ್ಯಕ್ತಿಗಳು ಹಾಗೂ ಸಂಘಟಿತ ಷಡ್ಯಂತ್ರ ಇರುವ ಸಾಧ್ಯತೆ ದಟ್ಟವಾಗಿದೆ. ಆದ್ದರಿಂದ ಸಾಮಾನ್ಯ ಪೊಲೀಸ್ ತನಿಖೆಯಿಂದ ನ್ಯಾಯ ಸಿಗಲು ಸಾಧ್ಯವಿಲ್ಲ; ಎಸ್ಐಟಿ ತನಿಖೆಯೇ ಆಗಬೇಕು."
ಹೆಗ್ಗೆರೆ ಮಂಜುನಾಥ್, ದಲಿತ ಮುಖಂಡರು.
ಪ್ರಜಾಪ್ರಭುತ್ವಕ್ಕೆ ಸವಾಲೊಡ್ಡಿದ ಘಟನೆ
ದಲಿತ ಮುಖಂಡರು ಮಾತನಾಡಿ, "ಶ್ರೀ ಹರಳಯ್ಯ ಗುರುಪೀಠವು ಸಂವಿಧಾನ ಜಾಗೃತಿ, ಶಿಕ್ಷಣ, ಸಾಮಾಜಿಕ ನ್ಯಾಯ, ಮತದಾನದ ಅರಿವು ಹಾಗೂ ಶೋಷಿತ ಸಮುದಾಯಗಳ ಸಬಲೀಕರಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಇಂತಹ ಪೀಠದ ಶ್ರೀಗಳ ಮೇಲೆಯೇ ಪೊಲೀಸ್ ಠಾಣೆಯ ಆವರಣದಲ್ಲಿ, ಪೊಲೀಸರ ಭದ್ರತೆಯ ನಡುವೆಯೇ ಹಲ್ಲೆ ನಡೆದಿರುವುದು ಅತ್ಯಂತ ಖಂಡನೀಯ ಹಾಗೂ ಅಮಾನವೀಯ. ಇದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ," ಎಂದು ಕಳವಳ ವ್ಯಕ್ತಪಡಿಸಿದರು. ಪ್ರಸ್ತುತ ಶ್ರೀಗಳು ಚಿತ್ರದುರ್ಗದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನ್ಯಾಯಾಧೀಶರ ನೇತೃತ್ವದ SIT ತನಿಖೆ: ಪ್ರಕರಣವನ್ನು ನಿವೃತ್ತ ಅಥವಾ ಹಾಲಿ ಹೈಕೋರ್ಟ್/ಜಿಲ್ಲಾ ನ್ಯಾಯಾಧೀಶರ ಮೇಲ್ವಿಚಾರಣೆಯ ವಿಶೇಷ ತನಿಖಾ ತಂಡಕ್ಕೆ (SIT) ವಹಿಸಬೇಕು.
ಸಂಚು ಹೊರಬರಲಿ: ಘಟನೆಯ ಹಿಂದಿರುವ ಪ್ರಚೋದಕರು, ಆರ್ಥಿಕ ನೆರವು ನೀಡಿದವರು ಮತ್ತು ಪ್ರಭಾವಿ ವ್ಯಕ್ತಿಗಳ ಪಾತ್ರ ಸೇರಿದಂತೆ ಎಲ್ಲಾ ಆಯಾಮಗಳ ಸಮಗ್ರ ತನಿಖೆಯಾಗಬೇಕು.
ಶಸ್ತ್ರಸಜ್ಜಿತ ಭದ್ರತೆ: ಪೂಜ್ಯ ಸ್ವಾಮೀಜಿಯವರಿಗೆ ಹಾಗೂ ಶ್ರೀಮಠಕ್ಕೆ ತಕ್ಷಣವೇ ಶಸ್ತ್ರಸಜ್ಜಿತ ಗನ್ಮ್ಯಾನ್ ಹಾಗೂ ಪೊಲೀಸ್ ಭದ್ರತೆ ಒದಗಿಸಬೇಕು. ಸಾಕ್ಷಿದಾರರ ಜೀವಕ್ಕೂ ರಕ್ಷಣೆ ನೀಡಬೇಕು.
ಪಾರದರ್ಶಕ ಕ್ರಮ: ರಾಜಕೀಯ ಪ್ರಭಾವಕ್ಕೆ ಮಣಿಯದೆ ತನಿಖೆ ನಡೆಸಿ, ಪ್ರಗತಿಯನ್ನು ಸಾರ್ವಜನಿಕರಿಗೆ ತಿಳಿಸಬೇಕು.
"ಇದು ಕೇವಲ ಒಬ್ಬ ವ್ಯಕ್ತಿಯ ಮೇಲಿನ ಹಲ್ಲೆಯಲ್ಲ, ಇಡೀ ಸಂವಿಧಾನ ಮತ್ತು ಕಾನೂನಿನ ಮೇಲಿನ ವಿಶ್ವಾಸದ ಪರೀಕ್ಷೆಯಾಗಿದೆ. ಸರ್ಕಾರ ತ್ವರಿತವಾಗಿ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು," ಎಂದು ಸಮಿತಿ ಎಚ್ಚರಿಸಿದೆ.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಜೀವೇಶ್, ಹೆಗ್ಗೆರೆ ಮಂಜುನಾಥ್, ಕಾರ್ಯಾಧ್ಯಕ್ಷ ಅವಿನಾಶ್ ಸಿ.ಎಲ್., ರಾಯಣ್ಣ, ಕದುರಪ್ಪ (ವಕೀಲರು), ಜಿಲ್ಲಾ ಅಟ್ರಾಸಿಟಿ ಸಂಘಟನಾ ಕಾರ್ಯದರ್ಶಿ ಮಹೇಶ್ ಪಟ್ರೆಹಳ್ಳಿ, ಸಮಿತಿ ಸದಸ್ಯರಾದ ಜಿ.ಎಲ್. ಮೂರ್ತಿ, ದೇವಣ್ಣ ಮ್ಯಾಕಲೂರಹಳ್ಳಿ, ತಿಮ್ಮಯ್ಯ, ಬಗ್ಗನಾಡು ಮುತ್ತುರಾಜ್, ಮಹಲಿಂಗಪ್ಪ ವಿ.ಕೆ. ಗುಡ್ಡ ಸೇರಿದಂತೆ ಹಲವಾರು ಪ್ರಮುಖ ಹೋರಾಟಗಾರರು ಉಪಸ್ಥಿತರಿದ್ದರು.



