ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತ್ಯಾಗ, ಬಲಿದಾನ ಹಾಗೂ ಸೌಹಾರ್ದತೆಯ ಸಂಕೇತವಾದ ಪವಿತ್ರ ಬಕ್ರೀದ್ ಹಬ್ಬವನ್ನು ಹಿರಿಯೂರು ನಗರ ಹಾಗೂ ತಾಲ್ಲೂಕಿನಾದ್ಯಂತ ಮುಸ್ಲಿಂ ಬಾಂಧವರು ಗುರುವಾರ ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಿದರು.
ನಗರದಲ್ಲಿ ಭವ್ಯ ಮೆರವಣಿಗೆ, ಸಾಮೂಹಿಕ ಪ್ರಾರ್ಥನೆ:
ನಗರದ ಜಾಮಿಯಾ ಮಸೀದಿ ಬಳಿ ಜಮಾಯಿಸಿದ ಸಾವಿರಾರು ಮುಸ್ಲಿಂ ಬಾಂಧವರು, ಅಲ್ಲಿಂದ ತಾಲೂಕು ಕಚೇರಿ ಬಳಿ ಇರುವ ಈದ್ಗಾ ಮೈದಾನದವರೆಗೆ ಭವ್ಯ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ 'ಅಲ್ಲಾಹೋ ಅಕ್ಬರ್' ಜಯಘೋಷ ಮೊಳಗಿಸಿದ ಜನಸ್ತೋಮ, ಪ್ರಸಿದ್ಧ ತೇರು ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ನೆಹರು ವೃತ್ತ ಹಾಗೂ ಗಾಂಧಿ ವೃತ್ತದ ಮಾರ್ಗವಾಗಿ ಪ್ರಾರ್ಥನಾ ಸ್ಥಳ ತಲುಪಿತು. ಈದ್ಗಾ ಮೈದಾನದಲ್ಲಿ ಸೇರಿದ ಸಾವಿರಾರು ಮುಸ್ಲಿಂ ಬಾಂಧವರು ಜಗತ್ತಿನ ಕಲ್ಯಾಣಕ್ಕಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಆಲಿಂಗನದೊಂದಿಗೆ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ಸುಹಾಸ್ ಸುಧಾಕರ್ ಅವರು ಮುಸ್ಲಿಂ ಬಾಂಧವರನ್ನು ಭೇಟಿಯಾಗಿ, ಹಬ್ಬದ ಪ್ರೀತಿ-ವಿಶ್ವಾಸವನ್ನು ಹಂಚಿಕೊಂಡರು.
ಆದಿವಾಲ ಗ್ರಾಮದಲ್ಲಿ ಸೌಹಾರ್ದತೆಯ ಸಂದೇಶ ಸಾರಿದ ಸುಹಾಸ್ ಸುಧಾಕರ್ ತಾಲ್ಲೂಕಿನ ಆದಿವಾಲ ಗ್ರಾಮದ ಈದ್ಗಾ ಮೈದಾನದಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ಸುಹಾಸ್ ಸುಧಾಕರ್, ಹಬ್ಬಗಳ ನಿಜವಾದ ಆಶಯವನ್ನು ಬಿಚ್ಚಿಟ್ಟರು.

"ಬಕ್ರೀದ್ ಕೇವಲ ಒಂದು ಧಾರ್ಮಿಕ ಆಚರಣೆಯಲ್ಲ; ಅದು ತ್ಯಾಗ, ಪ್ರೀತಿ, ಸಹಾನುಭೂತಿ ಮತ್ತು ಸಹೋದರತ್ವದ ಮಹಾನ್ ಸಂದೇಶವನ್ನು ಸಾರುವ ಪವಿತ್ರ ದಿನ. ಸಮಾಜದಲ್ಲಿ ಪ್ರತಿಯೊಬ್ಬರಲ್ಲೂ ಮಾನವೀಯತೆ, ಏಕತೆ ಮತ್ತು ಸೌಹಾರ್ದತೆ ಹೆಚ್ಚಾಗಬೇಕಿದೆ. ಹಬ್ಬಗಳು ಪರಸ್ಪರ ಸ್ನೇಹವನ್ನು ಬೆಳೆಸುವ ಕೊಂಡಿಯಾಗಬೇಕು. ಎಲ್ಲ ಧರ್ಮಗಳ ಜನರ ನಡುವೆ ಮಾನವೀಯ ಸಂಬಂಧಗಳು ಬಲಗೊಂಡಾಗ ಮಾತ್ರ ಶಾಂತಿ, ಸಂತೋಷ ಮತ್ತು ಸಮೃದ್ಧಿಯ ಸಮಾಜ ನಿರ್ಮಾಣ ಸಾಧ್ಯ."
ಸುಹಾಸ್ ಸುಧಾಕರ್, ಯುವ ಮುಖಂಡರು.
ಉಪಸ್ಥಿತರಿದ್ದ ಪ್ರಮುಖರು:
ಈ ಸೌಹಾರ್ದತಾ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ನಾಗೇಂದ್ರನಾಯ್ಕ, ಪ್ರಮುಖರಾದ ಇಮ್ರಾನ್ ಫಿರ್ದೋಸ್, ಆಸಿಫ್ ಅಲಿ, ಚಮನ್ ಷರೀಫ್, ಸ್ವಾಲೇಹ, ಇಸ್ಮಾಯಿಲ್, ಮುಬಾರಕ್, ನಿತೀಶ್ ಜೈನ್, ಗುರುಪ್ರಸಾದ್, ರಘುನಾಯ್ಕ, ಜ್ಞಾನೇಶ್, ಪ್ರಭು ಸೇರಿದಂತೆ ಹಲವು ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.



