ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಬೆಸ್ಕಾಂ)ಅನ್ನು ಖಾಸಗಿ ಕರಣದ ಹೆಸರಿನಲ್ಲಿ ಟಾಟಾ ಪವರ್ ಕಂಪನಿ ಪಡೆಯಲು ಮುಂದಾಗಿದ್ದು ಇದನ್ನು ದೊಡ್ಡಬಳ್ಳಾಪುರ ಬೆಸ್ಕಾಂ ಸಿಬ್ಬಂದಿ ವರ್ಗ ಖಂಡಿಸಿ ಇಂದು ಪ್ರತಿಭಟನಾ ಸಭೆ ಮಾಡುತ್ತಿದ್ದೇವೆ ಎಂದು ಕಾರ್ಯನಿರ್ವಾಹಕ ಇಂಜಿನಿಯರ್ ಚಂದ್ರಶೇಖರ್ ತಿಳಿಸಿದರು.
ನಗರದ ಬೆಸ್ಕಾಂ ಕಚೇರಿ ಅವರದಲ್ಲಿ ಜೂ.15 ಖಾಸಗಿಕಾರಣ ವಿರೋಧಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬೆಸ್ಕಾಂ ಹಲವಾರು ವರ್ಷಗಳಿಂದ ಸಾರ್ವಜನಿಕರಿಗೆ ವಿದ್ಯುತ್ ಸರಬರಾಜು ಮಾಡುವ ಸೇವೆ ಮಾಡುತ್ತಿದೆ. ಆದರೆ ಇಂದು ಏಕಾಏಕಿ ಖಾಸಗಿ ಕಂಪನಿಗಳು ನಮ್ಮ ವಿದ್ಯುತ್ ಸರಬರಾಜು ಕಂಪನಿಯನ್ನು ಕಸಿದುಕೊಂಡು ಸಂಪೂರ್ಣ ಬ್ಯುಸಿನೆಸ್ ಮಾಡಲು ಹೊರಟಿದ್ದಾರೆ. ಸಾರ್ವಜನಿಕ ಸೇವೆಯಾಗಿದ್ದ ವಿದ್ಯುತ್ ಸರಬರಾಜು ಖಾಸಗಿ ಕಂಪನಿಗಳ ಪಾಲಾದರೆ ಸಂಪೂರ್ಣ ವ್ಯವಹಾರಿಕವಾಗಿ ರೈತರಿಗೆ,ಸಾರ್ವಜನಿಕರಿಗೆ ತೊಂದರೆ ಉಂಟಾಗುವುದು ಖಂಡಿತಾ ಎಂದರು.
ಬೆಸ್ಕಾಂ ಸಿಬ್ಬಂದಿಗಳಾದ ನಾವು ಇಷ್ಟು ವರ್ಷ ಸಾರ್ವಜನಿಕ ಸೇವೆಯಲ್ಲಿ ಲಾಭ ನಷ್ಟಗಳನ್ನು ಲೆಕ್ಕಿಸದೆ ನಿರಂತರ ಸೇವೆ ಒದಗಿಸುತ್ತಾ ಬಂದಿದ್ದೇವೆ.ಆದರೆ ಈ ವಲಯಕ್ಕೂ ಈಗ ಖಾಸಗಿ ಕಂಪನಿಗಳು ಲಗ್ಗೆ ಇಟ್ಟಿವೆ. ಒಂದು ವೇಳೆ ನಮ್ಮ ಬೆಸ್ಕಾಂ ಖಾಸಗಿ ಕಂಪನಿಗಳ ಪಾಲಾದರೆ ಕೇವಲ ಹಣ ಗಳಿಸುವ ಉದ್ದೇಶದಿಂದ ಬರುವ ಕಂಪನಿಗಳು ಲಾಭಕ್ಕಾಗಿ ಸಾರ್ವಜನಿಕರನ್ನು ಇಲ್ಲಸಲ್ಲದ ನೆಪಹೇಳಿ ತೊಂದರೆ ಕೊಡುತ್ತವೆ ಎಂಬುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಸಾರ್ವಜನಿಕರಿಗೆ ಸದಾ ಸ್ನೇಹಿತನಾಗಿ ವಿದ್ಯುತ್ ಸರಬರಾಜು ನೀಡುತ್ತಿರುವ ಬೆಸ್ಕಾಂ ಕಂಪನಿಯು ಖಾಸಗಿಕರಣವಾದರೆ ರೈತರಿಗೆ, ಸಾರ್ವಜನಿಕರಿಗೆ ಉಂಟಾಗುವ ತೊಂದರೆಗಳ ಬಗ್ಗೆ ಅರಿವು ಮೂಡಿಸುವಂತೆ ಸಿಬ್ಬಂದಿಗಳಿಗೆ ಮನವಿ ಮಾಡಿದರು.
ಕರುನಾಡು ರಾಷ್ಟ್ರೀಯ ಸೇನೆ ರಾಜ್ಯಾಧ್ಯಕ್ಷ ಬಿ ಶಿವ ಶಂಕರ್ ಮಾತನಾಡಿ ರಾಜಕೀಯ ನಾಯಕರು ವಿಮಾನ, ರಸ್ತೆ, ಆಸ್ಪತ್ರೆ, ಶಾಲೆಗಳು ಹೀಗೆ ಎಲ್ಲಾ ಸಾರ್ವಜನಿಕ ವಲಯಗಳನ್ನು ಖಾಸಗಿಕರಣ ಮಾಡಿ ಲೂಟಿ ಮಾಡಿದರು ಈಗ ಸಾರ್ವಜನಿಕರಿಗೆ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡುವ ಮೂಲಕ ಸೇವೆ ಸಲ್ಲಿಸುತ್ತಿರುವ ಬೆಸ್ಕಾಂ ಅನ್ನು ಖಾಸಗಿಕರಣ ಮಾಡಲು ಹೊರಟಿದ್ದಾರೆ.
ಜನ ಮನ್ನಣೆ ಪಡೆಡಿರುವ ಇಂತಹ ವಿದ್ಯುತ್ ಸರಬರಾಜು ಕಂಪನಿಯನ್ನು ಟಾಟಾ ಪವರ್ ಎಂಬ ಕಂಪನಿಯು ಪಡೆಯಲು ಮುಂದಾಗಿದ್ದು. ಬೆಸ್ಕಾಂ ನಂತಹ ಸಾರ್ವಜನಿಕ ಸೇವೆ ಒದಗಿಸುವ ಕಂಪನಿಗಳು ಖಾಸಗಿ ಕಂಪನಿಯವರ ಸ್ವತ್ತಾದರೆ ಸದಾ ಲಾಭಗಳಿಸುವ ಬಗ್ಗೆ ಚಿಂತನೆ ನಡೆಸುವ ಕಂಪನಿಗಳಿಂದ ಸೇವೆ ಒದಗಿಸುವ ಮಾತೆಲ್ಲಿ. ಹಾಗಾಗಿ ಯಾವುದೇ ಕಾರಣಕ್ಕೂ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ , ಖಾಸಗಿಕರಣವಾಗಲು ಬಿಡುವುದಿಲ್ಲ ಎಂದರು.
ಪ್ರತಿಭಟನೆಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಚಂದ್ರಶೇಖರ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎಇಇ) ಮಂಜುನಾಥ್ (ಗ್ರಾಮೀಣ), ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿನಯ ಕುಮಾರ್ (ನಗರ ಉಪ ವಿಭಾಗ ), ವಿದ್ಯುತ್ ಗುತ್ತಿಗೆದಾರ ಸಂಘದ ಅಧ್ಯಕ್ಷ ಆನಂದ್, ಸಂಘಟನಾ ಕಾರ್ಯದರ್ಶಿ ಲೋಕೇಶ್ ನಾಯಕ್, ಕೇಂದ್ರ ಕಾರ್ಯ ಸಮಿತಿ ಸದಸ್ಯ ಮುತ್ತುರಾಜ್ ಸೇರಿದಂತೆ ಹಲವು ಪ್ರಮುಖರು, ಬೆಸ್ಕಾಂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.



