ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಜನತೆಗೆ ದ್ರೋಹ ಬಗೆದಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿವಿಧ ಕಲ್ಯಾಣ ಯೋಜನೆಗಳ ಹಣವನ್ನು ಸರ್ಕಾರ ದುರುಪಯೋಗಪಡಿಸಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿರುವ ಆರ್. ಅಶೋಕ್ ಅವರು ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಅನ್ನಭಾಗ್ಯ ಯೋಜನೆಯಲ್ಲಿ ವಂಚನೆ:
ಸರ್ಕಾರದ ಮಹತ್ವಾಕಾಂಕ್ಷಿ 'ಅನ್ನಭಾಗ್ಯ' ಯೋಜನೆಯ ಹಣದಲ್ಲೂ ಸರ್ಕಾರ ವಂಚನೆ ನಡೆಸಿದೆ. ಜನರಿಗೆ ತಲುಪಬೇಕಾದ ಪಡಿತರ ಹಾಗೂ ನಗದು ವರ್ಗಾವಣೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಅವರು ದೂರಿದ್ದಾರೆ.
ಪರಿಶಿಷ್ಟ ಜಾತಿ/ಪಂಗಡದ 45,ರ ಕೋಟಿ ಲೂಟಿ:
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣಕ್ಕಾಗಿ ಮೀಸಲಾಗಿಟ್ಟಿದ್ದ ಎಸ್ಸಿಎಸ್ಪಿ/ಟಿಎಸ್ಪಿ ನಿಧಿಯ ಪೈಕಿ ಬರೋಬ್ಬರಿ 45,000 ಕೋಟಿ ಹಣವನ್ನು ಸರ್ಕಾರ ಲೂಟಿ ಹೊಡೆದಿದೆ. ಈ ಸಮುದಾಯಗಳ ಅಭಿವೃದ್ಧಿಗೆ ಬಳಸಬೇಕಾದ ಹಣವನ್ನು ಇತರೆ ಗ್ಯಾರಂಟಿ ಯೋಜನೆಗಳಿಗೆ ಕಾನೂನುಬಾಹಿರವಾಗಿ ವರ್ಗಾಯಿಸಲಾಗಿದೆ ಎಂದು ಅಶೋಕ್ ಆರೋಪಿಸಿದ್ದಾರೆ.
ಭಿಕ್ಷುಕರ ಪುನರ್ವಸತಿ ನಿಧಿಗೂ ಕನ್ನ:
ಸಮಾಜದ ಅತ್ಯಂತ ನಿರ್ಗತಿಕ ವರ್ಗವಾದ ಭಿಕ್ಷುಕರ ಪುನರ್ವಸತಿ ಮತ್ತು ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಹಣವನ್ನೂ ಸಹ ಸರ್ಕಾರ ಬಿಡುಗಡೆ ಮಾಡದೆ ತಡೆದು ಹಿಡಿದಿದೆ. ಆ ಮೂಲಕ ಅನಾಥರು ಮತ್ತು ಭಿಕ್ಷುಕರ ಹೊಟ್ಟೆಯ ಮೇಲೂ ಸರ್ಕಾರ ಹೊಡೆದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರು ಮತ್ತು ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಅನ್ಯಾಯ:
ರಾಜ್ಯದಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ಬರ ಪರಿಹಾರವಾಗಲಿ ಅಥವಾ ಸೂಕ್ತ ನೆರವಾಗಲಿ ಸಿಕ್ಕಿಲ್ಲ. ಇದರೊಂದಿಗೆ, ಅತ್ಯಂತ ನೋವಿನಲ್ಲಿ ಬದುಕುತ್ತಿರುವ ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತರಿಗೂ ಸರ್ಕಾರ ನೀಡಬೇಕಿದ್ದ ಮಾಸಿಕ ಗೌರವ ಧನವನ್ನು ಸರಿಯಾಗಿ ನೀಡುತ್ತಿಲ್ಲ. ಸರ್ಕಾರ ಸಂಪೂರ್ಣವಾಗಿ ದಿವಾಳಿಯಾಗಿದೆ ಎಂದು ಅವರು ಟೀಕಿಸಿದ್ದಾರೆ.
ರಾಜ್ಯ ಸರ್ಕಾರವು ಅಭಿವೃದ್ಧಿ ಕೆಲಸಗಳನ್ನು ಸಂಪೂರ್ಣವಾಗಿ ಕೈಬಿಟ್ಟು, ಕೇವಲ ಪ್ರಚಾರಕ್ಕಾಗಿ ಗ್ಯಾರಂಟಿಗಳನ್ನು ಬಳಸಿಕೊಳ್ಳುತ್ತಿದೆ. ಆದರೆ ಆ ಗ್ಯಾರಂಟಿಗಳ ಹಿಂದೆಯೂ ಸಾರ್ವಜನಿಕರ ಹಣದ ಲೂಟಿ ನಡೆಯುತ್ತಿದೆ ಎಂದು ಆರ್. ಅಶೋಕ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.


