ಚಂದ್ರವಳ್ಳಿ ನ್ಯೂಸ್, ಹಾವೇರಿ:
"ರಾಮನಗರ ಜಿಲ್ಲೆಯ ಬಿಡದಿ ಟೌನ್ಶಿಪ್ ಯೋಜನೆಗೆ ರೈತರಿಂದ ಒತ್ತಾಯಪೂರ್ವಕವಾಗಿ ಜಮೀನು ಸ್ವಾಧೀನಪಡಿಸಿಕೊಳ್ಳುತ್ತಿಲ್ಲ. ಯಾರು ಸ್ವಯಂಪ್ರೇರಿತರಾಗಿ ಭೂಮಿ ನೀಡಲು ಸಿದ್ಧರಿದ್ದಾರೋ, ಅಂಥವರ ಜಮೀನನ್ನು ಮಾತ್ರ ತೆಗೆದುಕೊಳ್ಳಲಾಗುತ್ತಿದೆ," ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಹಾವೇರಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಉಕ್ಕಡಗಾತ್ರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಡದಿಯಲ್ಲಿ ತಲೆದೋರಿರುವ ರೈತರ ಪ್ರತಿಭಟನೆ ಹಾಗೂ ಅಧಿಕಾರಿಗಳ ಮೇಲಿನ ಹಲ್ಲೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದರು.
'ಕೊಡದಿದ್ದರೆ ಬಿಡುತ್ತೇವೆ, ಜಬರ್ದಸ್ತಿ ಇಲ್ಲ':
"ಬಿಡದಿ ಟೌನ್ಶಿಪ್ಗಾಗಿ ಜಮೀನು ನೀಡಲು ಒಪ್ಪಿದವರ ಭೂಮಿಯನ್ನು ಸರ್ವೆ ಮಾಡಲು ಅಧಿಕಾರಿಗಳು ತೆರಳಿದ್ದರು. ರೈತರು ಜಮೀನು ಕೊಡುವುದಿಲ್ಲ ಎಂದರೆ ನಾವು ಒತ್ತಾಯ ಮಾಡುವುದಿಲ್ಲ. ಯಾರೂ ಕೂಡ ಜಬರ್ದಸ್ತಿಯಿಂದ ಭೂಮಿ ಕಿತ್ತುಕೊಳ್ಳುತ್ತಿಲ್ಲ," ಎಂದ ಸಚಿವರು, ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವ ಪ್ರಕರಣದ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದರು. ಸೋಮವಾರ ನಡೆದ ಗಲಾಟೆಯಲ್ಲಿ ರೈತರ ಮೇಲೆ ಎಫ್ಐಆರ್ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯಿಸಿ, "ಅಲ್ಲಿ ಏನಾಗಿದೆ ಎಂಬ ನಿಖರ ಮಾಹಿತಿ ನನಗಿಲ್ಲ. ಕಾನೂನು ಚೌಕಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಂಡಿರುತ್ತಾರೆ, ನಮ್ಮ ಇಲಾಖೆಯಿಂದ ಯಾವುದೇ ಒತ್ತಡ ಹೇರಿಲ್ಲ" ಎಂದರು.
ಅಧಿಕಾರಿಗಳಿಗೆ ಪೊರಕೆ ಸೇವೆ, ಕಲ್ಲು ತೂರಾಟ ನಡೆಸಿದ್ದ ಮಹಿಳೆಯರು:
ಬಿಡದಿ ಬಳಿಯ ಮಂಡಲಹಳ್ಳಿ ಗ್ರಾಮಕ್ಕೆ ಸೋಮವಾರ ಜೆಎಂಸಿ ಸರ್ವೆಗೆ ಬಂದಿದ್ದ ಅಧಿಕಾರಿಗಳ ತಂಡಕ್ಕೆ ಸ್ಥಳೀಯ ನೂರಾರು ರೈತರು ಹಾಗೂ ಮಹಿಳೆಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಯಾವುದೇ ಕಾರಣಕ್ಕೂ ಜಮೀನು ಕೊಡುವುದಿಲ್ಲ ಎಂದು ಅಧಿಕಾರಿಗಳ ಕಾರನ್ನು ತಡೆದು ಪ್ರತಿಭಟಿಸಿದ್ದಲ್ಲದೆ, ಕೆಲ ಮಹಿಳೆಯರು ಪೊರಕೆಯಿಂದ ಹೊಡೆಯಲು ಮುಂದಾಗಿದ್ದರು. ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿ ಅಧಿಕಾರಿಗಳನ್ನು ಸುರಕ್ಷಿತವಾಗಿ ಕರೆದೊಯ್ದಿದ್ದರು. ಸದ್ಯ ಮಂಡಲಹಳ್ಳಿಯಲ್ಲಿ ಬಿಗುವಿನ ವಾತಾವರಣವಿದ್ದು, ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಭಿನ್ನಾಭಿಪ್ರಾಯ ಒಪ್ಪಿಕೊಂಡ ಸಚಿವ ಜಾರಕಿಹೊಳಿ!:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮ್ಮ ನಡುವೆ ಅಸಮಾಧಾನವಿದೆ ಎಂಬ ಚರ್ಚೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ, ಪರೋಕ್ಷವಾಗಿ ಭಿನ್ನಾಭಿಪ್ರಾಯ ಇರುವುದನ್ನು ಒಪ್ಪಿಕೊಂಡರು.
"ಅದು ರಾಜ್ಯದ ಸಮಸ್ಯೆಯೇನಲ್ಲ, ಅದು ನಮ್ಮ ನಮ್ಮ ವೈಯಕ್ತಿಕ ಸಮಸ್ಯೆ," ಎಂದು ಹೇಳುವ ಮೂಲಕ ಕಾಂಗ್ರೆಸ್ ಒಳಬೇಗುದಿಯನ್ನು ಬಹಿರಂಗಪಡಿಸಿದರು.
ಇದೇ ವೇಳೆ ಆರ್ಎಸ್ಎಸ್ ನೋಂದಣಿ ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ, "ಇದು ಗೃಹ ಇಲಾಖೆಗೆ ಸಂಬಂಧಿಸಿದ ವಿಚಾರ. ಈಗಾಗಲೇ ಗೃಹ ಸಚಿವರು ಈ ಬಗ್ಗೆ ಮಾತನಾಡಿದ್ದಾರೆ. ಲೋಕೋಪಯೋಗಿ ಇಲಾಖೆಗೂ ಇದಕ್ಕೂ ಸಂಬಂಧವಿಲ್ಲ," ಎಂದರು.
ಇನ್ನು "ರಾಜ್ಯ ಸರ್ಕಾರ ಪಾಪರ್ (ದಿವಾಳಿ) ಆಗಿದೆ" ಎಂಬ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಆರೋಪಕ್ಕೆ ಟಾಂಗ್ ನೀಡಿದ ಸಚಿವರು, "ರಾಜ್ಯದಲ್ಲಿ ಇಷ್ಟೊಂದು ಜನಕಲ್ಯಾಣ ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿವೆ. ಸರ್ಕಾರದ ಬಳಿ ದುಡ್ಡಿಲ್ಲದಿದ್ದರೆ ಇಷ್ಟೆಲ್ಲಾ ಮಾಡಲು ಹೇಗೆ ಸಾಧ್ಯ?" ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದರು.



