ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪಾದಚಾರಿ ಮಾರ್ಗಗಳ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆಯ ಯಶಸ್ಸಿನ ಬೆನ್ನಲ್ಲೇ, ನಗರದ ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿಲ್ಲಿಸಿರುವ ಬೀಡಾಡಿ ವಾಹನಗಳನ್ನು ತೆರವುಗೊಳಿಸುವ ವಿಶೇಷ ಕಾರ್ಯಾಚರಣೆಗೆ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಶುಕ್ರವಾರ ಚಾಲನೆ ನೀಡಿದ್ದಾರೆ.
ನಗರದ ಕ್ವೀನ್ಸ್ ರಸ್ತೆಯಲ್ಲಿ ಅನಧಿಕೃತವಾಗಿ ನಿಲ್ಲಿಸಲಾಗಿದ್ದ ವಾಹನಗಳಿಗೆ ಖುದ್ದಾಗಿ ನೋಟಿಸ್ ಅಂಟಿಸುವ ಮೂಲಕ ಸಚಿವರು ಈ ಜಂಟಿ ಕಾರ್ಯಾಚರಣೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಸಂಚಾರ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
1,581 ವಾಹನಗಳ ಗುರುತು: 1 ವಾರದ ಗಡುವು
ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸಿಕೊಂಡು ಎಲ್ಲೆಂದರಲ್ಲಿ ನಿಲ್ಲಿಸಲಾಗಿರುವ ವಾಹನಗಳನ್ನು ತೆರವುಗೊಳಿಸುವಂತೆ ಹದಿನೈದು ದಿನಗಳ ಹಿಂದೆಯೇ ಸೂಚನೆ ನೀಡಲಾಗಿತ್ತು. ಆದರೂ ನಿಯಮ ಪಾಲಿಸದ ಹಿನ್ನೆಲೆಯಲ್ಲಿ ಈಗ ಕಠಿಣ ಕ್ರಮಕ್ಕೆ ಮುಂದಾಗಲಾಗಿದೆ. ನಗರದಲ್ಲಿ ಸದ್ಯ ಅಂತಹ ಸುಮಾರು 1,581 ಅನಧಿಕೃತ ವಾಹನಗಳನ್ನು ಪೊಲೀಸ್ ಇಲಾಖೆ ಗುರುತಿಸಿದ್ದು, ಅವುಗಳಿಗೆ ಒಂದು ವಾರದ ಗಡುವು ನೀಡಿ ನೋಟಿಸ್ ಅಂಟಿಸಲಾಗುತ್ತಿದೆ.
ವಾಹನಗಳನ್ನು ಮರಳಿ ಪಡೆಯುವುದು ಹೇಗೆ?:
ಪಾಲಿಕೆ ಮತ್ತು ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ವಾಹನಗಳಿಗೆ ನೋಟಿಸ್ ಅಂಟಿಸುವ ಪ್ರಕ್ರಿಯೆ ನಡೆಸುತ್ತಿದ್ದು, ಮಾಲೀಕರಿಗೆ ಈ ಕೆಳಗಿನ ನಿಯಮಗಳನ್ನು ಅನ್ವಯಿಸಲಾಗಿದೆ:
ಮೊದಲ ಹಂತ (1 ವಾರ): ನೋಟಿಸ್ ಅಂಟಿಸಿದ ಒಂದು ವಾರದೊಳಗೆ ಮಾಲೀಕರು ಬಂದು ನಿಗದಿತ ದಂಡದ ಮೊತ್ತ ಪಾವತಿಸಿ ವಾಹನವನ್ನು ಕೊಂಡೊಯ್ಯಬಹುದು.
ಎರಡನೇ ಹಂತ (ಟೋಯಿಂಗ್): ಒಂದು ವಾರದೊಳಗೆ ಬಾರದಿದ್ದರೆ ಆ ವಾಹನಗಳನ್ನು ಟೋಯಿಂಗ್ ಮಾಡಲಾಗುತ್ತದೆ. ನಂತರ ಮಾಲೀಕರು ದಂಡ ಹಾಗೂ ಟೋಯಿಂಗ್ ಶುಲ್ಕ ಎರಡನ್ನೂ ಪಾವತಿಸಿ ವಾಹನ ಬಿಡಿಸಿಕೊಳ್ಳಬೇಕಾಗುತ್ತದೆ.
ಅಂತಿಮ ಹಂತ (ಬಹಿರಂಗ ಹರಾಜು): ಟೋಯಿಂಗ್ ಮಾಡಿದ ಬಳಿಕವೂ ವಾಹನ ಕೊಂಡೊಯ್ಯದಿದ್ದರೆ, ಅಂತಹ ವಾಹನಗಳ ವಿವರಗಳನ್ನು ಪತ್ರಿಕೆಗಳಲ್ಲಿ ಜಾಹೀರಾತು ನೀಡಿ, 15 ದಿನಗಳ ನಂತರ ಬಹಿರಂಗ ಹರಾಜು ಮಾಡಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಪದೇ ಪದೆ ನಿಯಮ ಉಲ್ಲಂಘಿಸಿದರೆ ಕಠಿಣ ದಂಡ:
"ಪಾದಚಾರಿ ಮಾರ್ಗಗಳನ್ನು ಮುಕ್ತಗೊಳಿಸುವುದು ಮತ್ತು ಸಾರ್ವಜನಿಕ ಸುರಕ್ಷತೆ ಹೆಚ್ಚಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಕೆಲವು ಮಾಲೀಕರು ಒಂದು ಕಡೆ ದಂಡ ಪಾವತಿಸಿ ವಾಹನ ಬಿಡಿಸಿಕೊಂಡು ಹೋಗಿ, ಮತ್ತೊಂದು ಸಾರ್ವಜನಿಕ ಸ್ಥಳದಲ್ಲಿ ತಂದು ನಿಲ್ಲಿಸುತ್ತಾರೆ. ಇಂತಹ ಚಾಳಿ ಮುಂದುವರಿಸಿದರೆ ಅವರಿಗೆ ಮತ್ತಷ್ಟು ಭಾರಿ ಪ್ರಮಾಣದ ದಂಡ ವಿಧಿಸುವಂತೆ ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ" ಎಂದು ಸಚಿವ ಕೃಷ್ಣ ಬೈರೇಗೌಡ ಎಚ್ಚರಿಸಿದ್ದಾರೆ.
ಸಾರ್ವಜನಿಕರಿಗೂ ಅವಕಾಶ: ‘ಬಿಟಿಪಿ ಅಸ್ತ್ರಂ’ ಆ್ಯಪ್ ಬಳಸಿ
ಪೊಲೀಸ್ ಇಲಾಖೆ ಗುರುತಿಸಿರುವುದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ವಾಹನಗಳು ನಗರದಲ್ಲಿ ಇರುವ ಸಾಧ್ಯತೆ ಇದೆ. ಹೀಗಾಗಿ, ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿಲ್ಲಿಸಿರುವ ವಾಹನಗಳು ಕಂಡುಬಂದರೆ ಸಾರ್ವಜನಿಕರು ತಾವೇ ನೇರವಾಗಿ 'ಬಿಟಿಪಿ ಅಸ್ತ್ರಂ' ಆ್ಯಪ್ ಮೂಲಕ ರಿಪೋರ್ಟ್ ಮಾಡಬಹುದು. ಅಂತಹ ವಾಹನಗಳ ಮೇಲೆಯೂ ತಕ್ಷಣವೇ ನೋಟಿಸ್ ಅಂಟಿಸಿ ಕ್ರಮ ಕೈಗೊಳ್ಳಲಾಗುವುದು. ಒಟ್ಟಾರೆಯಾಗಿ ಬೆಂಗಳೂರಿನಲ್ಲಿ ಪಾದಚಾರಿಗಳ ಸಂಚಾರಕ್ಕೆ ಆಗುತ್ತಿರುವ ಅಡಚಣೆಯನ್ನು ಸಂಪೂರ್ಣವಾಗಿ ನಿವಾರಿಸುವುದೇ ಈ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.



