ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ್ತೊಮ್ಮೆ ಭ್ರಷ್ಟಾಚಾರದ ಅಸ್ತ್ರ ಪ್ರಯೋಗಿಸಿರುವ ಜೆಡಿಎಸ್, "ಇದು ಕಸದಲ್ಲೂ ಕಮಿಷನ್ ಹೊಡೆಯುವ ಲಜ್ಜೆಗೆಟ್ಟ ಸರ್ಕಾರ" ಎಂದು ತೀವ್ರ ವಾಗ್ದಾಳಿ ನಡೆಸಿದೆ.
ಬೆಂಗಳೂರಿನ ಕಸ ವಿಲೇವಾರಿ ಟೆಂಡರ್ ಪ್ರಕ್ರಿಯೆಯಲ್ಲಿ ನೂರಾರು ಕೋಟಿ ರೂಪಾಯಿಗಳ ಹಗರಣ ನಡೆಯುತ್ತಿದೆ ಎಂದು ಜೆಡಿಎಸ್ ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ.
39,437 ಕೋಟಿ ಬೃಹತ್ ಟೆಂಡರ್: ಬಿಬಿಎಂಪಿ ವ್ಯಾಪ್ತಿಯ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಬರೋಬ್ಬರಿ 39,437 ಕೋಟಿ ರೂಪಾಯಿ ಮೌಲ್ಯದ ಟೆಂಡರ್ ಕರೆಯಲಾಗಿದೆ.
ಕೇವಲ 7 ದಿನಗಳ ಗಡುವು: ಇಷ್ಟೊಂದು ಬೃಹತ್ ಮೊತ್ತದ ಟೆಂಡರ್ ಪರಿಶೀಲನೆಗೆ ತಜ್ಞರ ತಂಡಕ್ಕೆ ನೀಡಿರುವುದು ಕೇವಲ 7 ದಿನಗಳ ಕಾಲಾವಕಾಶ ಮಾತ್ರ!.
ತಜ್ಞರ ತಂಡಕ್ಕೆ ದಿಢೀರ್ ಕೊಕ್: ಹಳೇ ತಜ್ಞರ ತಂಡವನ್ನು ಕೈಬಿಟ್ಟು, ತಮಗೆ ಬೇಕಾದವರನ್ನೊಳಗೊಂಡ ಹೊಸ 'ಅನುಕೂಲಸಿಂಧು' ತಂಡವನ್ನು ತರಾತುರಿಯಲ್ಲಿ ರಚಿಸಲಾಗಿದೆ ಎಂದು ಜೆಡಿಎಸ್ ಆರೋಪಿಸಿದೆ.
ಡಿ.ಕೆ. ಶಿವಕುಮಾರ್ ಅವರಿಗೆ ಜೆಡಿಎಸ್ ನೇರ ಪ್ರಶ್ನೆ-
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ನೇರವಾಗಿ ಟ್ಯಾಗ್ ಮಾಡಿರುವ ಜೆಡಿಎಸ್, ತೀವ್ರ ತರಾಟೆಗೆ ತೆಗೆದುಕೊಂಡಿದೆ.
"ಮುಂಬರುವ ಬಿಬಿಎಂಪಿ (ಜಿಬಿಎ) ಚುನಾವಣೆಯ ಖರ್ಚು ಹೊಂದಿಸಲು ತರಾತುರಿಯಲ್ಲಿ ಈ ಟೆಂಡರ್ ಪ್ರಕ್ರಿಯೆ ಮುಗಿಸುತ್ತಿದ್ದೀರಾ ಡಿ.ಕೆ. ಶಿವಕುಮಾರ್ ಅವರೇ? ದಿನಬೆಳಗಾದರೆ 'ಪಾರದರ್ಶಕತೆ' ಬಗ್ಗೆ ಭಾಷಣ ಬಿಗಿಯುವ ಕಾಂಗ್ರೆಸ್ ಸರ್ಕಾರದ ಅಸಲಿ ಮುಖವಾಡ ಈಗ ಕಳಚಿದೆ," ಎಂದು ಜೆಡಿಎಸ್ ಲೇವಡಿ ಮಾಡಿದೆ.
ಕಸದಲ್ಲೂ ರಸ (ಕಮಿಷನ್) ತೆಗೆಯುವ ದಂಧೆ!-
"ಕೋಟಿಗಟ್ಟಲೆ ಮೌಲ್ಯದ ಈ ಯೋಜನೆಗೆ ತಜ್ಞರ ತಂಡಕ್ಕೆ ದಿಢೀರ್ 'ಗೇಟ್ಪಾಸ್' ನೀಡಿ, ತಮಗೆ ಬೇಕಾದವರ ಹೊಸ ತಂಡ ರಚಿಸಿದ್ದೇಕೆ? ಕಸದಲ್ಲೂ ರಸ (ಕಮಿಷನ್) ತೆಗೆಯುವ ಈ ಬೃಹತ್ ದಂಧೆಯ ಹಿಂದಿರುವ ಆ 'ಕಾಣದ ಕೈಗಳು' ಯಾರವು?" ಎಂದು ಪ್ರಶ್ನಿಸಿರುವ ಜೆಡಿಎಸ್, ಕಸ ವಿಲೇವಾರಿ ಹೆಸರಿನಲ್ಲಿ ದೊಡ್ಡ ಮಟ್ಟದ ಕಮಿಷನ್ ಲೂಟಿಗೆ ಸರ್ಕಾರ ಸ್ಕೆಚ್ ಹಾಕಿದೆ ಎಂದು ಗಂಭೀರವಾಗಿ ಆರೋಪಿಸಿದೆ.
ಚುನಾವಣೆ ಹತ್ತಿರ ಬರುತ್ತಿರುವ ಬೆನ್ನಲ್ಲೇ ಬಿಬಿಎಂಪಿಯ ಈ ಬೃಹತ್ ಟೆಂಡರ್ ಪ್ರಕ್ರಿಯೆ ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರದ ಮುಂದಿನ ನಡೆ ಏನೆಂಬುದನ್ನು ಕಾದು ನೋಡಬೇಕಿದೆ.



