ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತಕ್ಕೆ ಮತದಾರರು ಫುಲ್ ಮಾರ್ಕ್ಸ್ ನೀಡಿದ್ದಾರೆ. ಇತ್ತೀಚಿನ ಉಪಚುನಾವಣೆಗಳ ಫಲಿತಾಂಶವು 2028ರ ಸಾರ್ವತ್ರಿಕ ಚುನಾವಣೆಗೆ ಮುನ್ನುಡಿಯಾಗಿದೆ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಎಚ್. ಆಂಜನೇಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಸಾಧಿಸಿರುವ ಗೆಲುವನ್ನು ವಿಶ್ಲೇಷಿಸಿದರು.
ಆರ್ಥಿಕ ಶಿಸ್ತು ಮತ್ತು ಗ್ಯಾರಂಟಿ ಯೋಜನೆಗಳ ಜಯ:
"ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದಾಗ ಬಿಜೆಪಿ ನಾಯಕರು ಇದು ಸಾಧ್ಯವೇ ಇಲ್ಲ ಎಂದು ಅಪಪ್ರಚಾರ ಮಾಡಿದ್ದರು. ಯೋಜನೆ ಜಾರಿಯಾದ ಮೇಲೆ ರಾಜ್ಯ ದಿವಾಳಿಯಾಗುತ್ತದೆ ಎಂದು ಬೊಬ್ಬೆ ಹೊಡೆದರು. ಆದರೆ, ಇಂದು ದೇಶದಲ್ಲೇ ಅತ್ಯಂತ ಶಿಸ್ತುಬದ್ಧ ಆರ್ಥಿಕ ಸ್ಥಿತಿಯನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ನಂ.1 ಆಗಿದೆ. ಗ್ಯಾರಂಟಿ ಮೂಲಕ ಜನರ ಖಾತೆಗೆ ನೇರವಾಗಿ 60 ಸಾವಿರ ಕೋಟಿ ರೂ. ತಲುಪಿಸುತ್ತಿದ್ದರೂ, ಅಭಿವೃದ್ಧಿ ಕೆಲಸಗಳು ಕುಂಠಿತವಾಗಿಲ್ಲ. ಇದಕ್ಕೆ ಮತದಾರರು ಈಗ ಮುದ್ರೆ ಒತ್ತಿದ್ದಾರೆ," ಎಂದು ಆಂಜನೇಯ ಹೇಳಿದರು.
ಬಿಜೆಪಿಯ ತಂತ್ರಗಾರಿಕೆಗೆ ಮತದಾರರ ತಿರುಗೇಟು:
ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳ ಗೆಲುವಿನ ಬಗ್ಗೆ ಮಾತನಾಡಿದ ಅವರು, ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಎಲ್ಲಾ ರಾಜಕೀಯ ಶತ್ರುಗಳು ಒಂದಾಗಿದ್ದರು. ಪಕ್ಷದಿಂದ ಉಚ್ಚಾಟಿತರಾಗಿದ್ದ ಯತ್ನಾಳ್ ಅವರನ್ನೂ ಬಿಜೆಪಿ ಪ್ರಚಾರಕ್ಕೆ ಬಳಸಿಕೊಂಡಿತು. ಜಾತಿಗಳ ಮಧ್ಯೆ ವಿಷಬೀಜ ಬಿತ್ತಲು ಪ್ರಯತ್ನಿಸಿದರೂ, ಮತದಾರರು ನಿರೀಕ್ಷೆಗೂ ಮೀರಿದ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ.
ದಾವಣಗೆರೆ ದಕ್ಷಿಣ: ಇಲ್ಲಿ ಬಿಜೆಪಿ ದ್ವಂದ್ವ ನೀತಿ ಅನುಸರಿಸಿತು. ಒಂದು ಕಡೆ ಕಾಂಗ್ರೆಸ್ ಮುಸ್ಲಿಂ ತುಷ್ಟೀಕರಣ ಮಾಡುತ್ತಿದೆ ಎನ್ನುವ ಬಿಜೆಪಿ, ಇನ್ನೊಂದೆಡೆ ಮುಸ್ಲಿಮರಿಗೆ ಟಿಕೆಟ್ ನೀಡದೆ ಕಾಂಗ್ರೆಸ್ ವಂಚಿಸುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿತು. ಎಸ್ಡಿಪಿಐ ಅಭ್ಯರ್ಥಿಗೆ ಹಿಂಬಾಗಿಲಿನಿಂದ ಬೆಂಬಲ ನೀಡಿ ಮತ ವಿಭಜನೆಗೆ ಸಂಚು ರೂಪಿಸಿದರೂ, ದಾವಣಗೆರೆಯ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಕೈ ಹಿಡಿದಿದ್ದಾರೆ.
ಯುವ ನಾಯಕತ್ವಕ್ಕೆ ಮನ್ನಣೆ:
ದಾವಣಗೆರೆಯಲ್ಲಿ ಶ್ಯಾಮನೂರು ಕುಟುಂಬದ ಕುಡಿ, ಸುಶಿಕ್ಷಿತ ಯುವಕ ಸಮರ್ಥ್ ಶ್ಯಾಮನೂರು ಅವರ ಗೆಲುವು ಮತ್ತು ಬಾಗಲಕೋಟೆಯಲ್ಲಿ ಮೇಟಿ ಪುತ್ರನ ಭರ್ಜರಿ ಜಯವು ಕಾಂಗ್ರೆಸ್ ಪಕ್ಷ ಯುವ ಪೀಳಿಗೆಗೆ ಸೂಕ್ತ ವೇದಿಕೆ ಕಲ್ಪಿಸುತ್ತದೆ ಎಂಬುದಕ್ಕೆ ಸಾಕ್ಷಿ ಎಂದು ಅವರು ಬಣ್ಣಿಸಿದರು.
"ಕೇಂದ್ರ ಸರ್ಕಾರ ಜಿಎಸ್ಟಿ ಹಾಗೂ ಇನ್ನಿತರ ಅನುದಾನಗಳಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಿದರೂ, ಸಿದ್ದರಾಮಯ್ಯ ಅವರು ದಕ್ಷ ಆಡಳಿತ ನೀಡುತ್ತಿದ್ದಾರೆ. ಒಳಮೀಸಲಾತಿ ಜಾರಿಯಂತಹ ದಿಟ್ಟ ನಿರ್ಧಾರಗಳು ಜನರ ಮನ ಗೆದ್ದಿವೆ. ವಿರೋಧ ಪಕ್ಷಗಳ ಯಾವುದೇ ಗಿಮಿಕ್ಗಳು ಇನ್ನು ಮುಂದೆ ನಡೆಯುವುದಿಲ್ಲ ಎಂಬುದು ಈ ಫಲಿತಾಂಶದಿಂದ ಸಾಬೀತಾಗಿದೆ," ಎಂದು ಆಂಜನೇಯ ಹರ್ಷ ವ್ಯಕ್ತಪಡಿಸಿದರು.


