ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆ ಅನುಷ್ಠಾನ ಹಾಗೂ ಫಲಾನುಭವಿಗಳ ಪರಿಷ್ಕರಣೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರವು ಬಡವರಿಗೆ ವಂಚಿಸುತ್ತಿದ್ದು, ‘ಹೈದರಾಲಿ ನೀತಿ’ ಅನುಸರಿಸುತ್ತಿದೆ ಎಂದು ಬಿಜೆಪಿ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆಗೂ ಮುನ್ನ ‘ಎಲ್ಲರಿಗೂ ಉಚಿತ, ಎಲ್ಲ ಮಹಿಳೆಯರಿಗೂ ₹2,000’ ಎಂದು ಅಬ್ಬರದ ಪ್ರಚಾರ ಮಾಡಿದ್ದ ಕಾಂಗ್ರೆಸ್ ನಾಯಕರು, ಈಗ ಫಲಾನುಭವಿಗಳ ಸಂಖ್ಯೆಯನ್ನು ಕಡಿತಗೊಳಿಸಲು ನಾನಾ ಕಂಡಿಷನ್ಗಳನ್ನು ಹಾಕುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಏನಿದು ಹೈದರಾಲಿ ನೀತಿ? ಸಿ.ಟಿ ರವಿ ಟಾಂಗ್:
"ಹಿಂದೆ ಮೈಸೂರು ಸಂಸ್ಥಾನದಲ್ಲಿದ್ದ ಹೈದರಾಲಿಯು ಸೈನಿಕರಿಗೆ ಸಂಬಳ ನೀಡಬೇಕಾದ ಸಂದರ್ಭ ಬಂದಾಗಲೆಲ್ಲಾ ಒಂದಲ್ಲಾ ಒಂದು ಕಾರಣ ನೀಡಿ ಮುಂದೂಡುತ್ತಿದ್ದನು. ಆ ಮೂಲಕ ಸಂಬಳವನ್ನೇ ಎಗರಿಸುತ್ತಿದ್ದನು. ಈಗಿನ ಕಾಂಗ್ರೆಸ್ ಸರ್ಕಾರವೂ ಗೃಹಲಕ್ಷ್ಮಿ ಹಣ ನೀಡಲು ಇದೇ ನೀತಿಯನ್ನು ಅನುಸರಿಸುತ್ತಿದೆ. ಸತ್ತವರ ಹೆಸರಿಗೆ ಹಣ ಹೋಗಿದೆ, ನಕಲಿ ಖಾತೆಗಳಿಗೆ ವರ್ಗಾವಣೆಯಾಗಿದೆ ಎಂಬ ನೆಪಗಳನ್ನು ಒಡ್ಡಿ, ಬಡ ಮಹಿಳೆಯರಿಗೆ ಸಿಗಬೇಕಾದ ಹಣವನ್ನು ಕಡಿತಗೊಳಿಸಲಾಗುತ್ತಿದೆ," ಎಂದು ಸಿ.ಟಿ. ರವಿ ಇತಿಹಾಸದ ಉದಾಹರಣೆ ನೀಡಿ ವ್ಯಂಗ್ಯವಾಡಿದರು.
ಬಿಪಿಎಲ್ ಕಾರ್ಡ್ಗಳೂ ಬಂದ್:
ಗೃಹಲಕ್ಷ್ಮಿ ಯೋಜನೆಗೆ ಹಣ ನೀಡಬೇಕಾಗುತ್ತದೆ ಎಂಬ ಕಾರಣಕ್ಕಾಗಿಯೇ ಸರ್ಕಾರ ಹೊಸ ಬಿಪಿಎಲ್ ಕಾರ್ಡ್ಗಳನ್ನು ವಿತರಿಸುವುದನ್ನು ಸ್ಥಗಿತಗೊಳಿಸಿದೆ. ಇದರಿಂದಾಗಿ ರಾಜ್ಯದ ಲಕ್ಷಾಂತರ ಅರ್ಹ ಬಡ ಕುಟುಂಬಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗುತ್ತಿವೆ ಎಂದು ಅವರು ದೂರಿದರು.
ಸಿಎಜಿ ವರದಿಯಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ದುರುಪಯೋಗವಾಗಿರುವ ಕುರಿತು ಉಲ್ಲೇಖವಿದ್ದರೂ ಸರ್ಕಾರ ತನಿಖೆಗೆ ಆದೇಶಿಸದೆ ಮೌನ ವಹಿಸಿದೆ. ಬಡವರ ಹೆಸರಿನಲ್ಲಿ ಲೂಟಿ ಹೊಡೆಯುತ್ತಿರುವ ಈ ವ್ಯವಸ್ಥಿತ ಹಗರಣವನ್ನು ತಕ್ಷಣವೇ ಸಿಬಿಐ ಅಥವಾ ವಿಶೇಷ ತನಿಖಾ ತಂಡಕ್ಕೆ ವಹಿಸಬೇಕು ಎಂದು ಅವರು ಒತ್ತಾಯಿಸಿದರು.



