ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ :
ಗ್ರಾಮದ ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಮತ್ತು ಮಕ್ಕಳಿಗೆ ಕಲಿಕಾ ಉಪಕರಣಗಳನ್ನು ಪೋಷಕರು ಒದಗಿಸಿದರೆ ಶಿಕ್ಷಕರು ಬಹಳ ಉತ್ಸಾಹದಿಂದ ಕಲಿಸುವರು. ಸರ್ಕಾರವೇ ಎಲ್ಲವನ್ನು ನೀಡಲಿ ಎಂಬ ಧೋರಣೆಯನ್ನು ಪೋಷಕರು ಬಿಡಬೇಕು ಎಂದು ಹಿರೇಕಂದವಾಡಿ ರೈತ ಮುಖಂಡರಾದ ಮಹೇಶ್ವರಪ್ಪ ಹೇಳಿದರು.
ಹೊಳಲ್ಕೆರೆ ತಾಲ್ಲೂಕಿನ ಹಿರೇಕಂದವಾಡಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಸ್ವಾತಂತ್ರ್ಯೋತ್ಸವ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ನಮ್ಮ ಸರ್ಕಾರಿ ಶಾಲೆಗಳು ನಾವೆಲ್ಲ ಓದಿ ಬೆಳೆಯಲು ಅನುಕೂಲ ಮಾಡಿವೆ. ನಮ್ಮ ಮಕ್ಕಳನ್ನು ಬೇರೆ ಕಡೆ ಓದಲು ಕಳಿಸುವುದು ತಾಯಿಯಿಂದ ಮಕ್ಕಳನ್ನು ದೂರ ಮಾಡಿದಂತೆ. ಗ್ರಾಮದ ಸರ್ಕಾರಿ ಶಾಲೆಗಳು ನಮ್ಮ ತಾಯಿಯಂತೆ. ಶಾಲೆಗಳಿಗೆ ಅಗತ್ಯ ಪೀಠೋಪಕರಣ ಮಕ್ಕಳಿಗೆ ಕಲಿಕೋಪಕರಣಗಳನ್ನು ಹಿರಿಯ ವಿದ್ಯಾರ್ಥಿಗಳಾದ ನಾವು ಕೊಡಿಸಬೇಕು. ಸರ್ಕಾರಿ ಶಾಲೆ ಶಿಕ್ಷಕರು ಕಲಿಸುವಲ್ಲಿ ಸಮರ್ಥರಿದ್ದಾರೆ ಅವರಿಗೆ ಪೋಷಕರ ಪ್ರೋತ್ಸಾಹ ಬೇಕು ಎಂದು ತಿಳಿಸಿದರು.
ಸಹಶಿಕ್ಷಕ ಬಿ.ಆರ್.ಅಜ್ಜಪ್ಪ ಮಾತನಾಡಿ, ಶಾಲೆಯ ವಿದ್ಯಾರ್ಥಿಗಳು ಉತ್ತಮ ಕಲಿಕೆಯಲ್ಲಿ ತೊಡಗಲು ಪ್ರೋತ್ಸಾಹ ಬಹಳ ಮುಖ್ಯ. ಅದರಂತೆ ಸಂಪೂರ್ಣ ಮಗ್ಗಿ ಕಲಿತ ವಿದ್ಯಾರ್ಥಿಗಳಿಗೆ ಗ್ರಾಮದ ಮಹೇಶ್ವರಪ್ಪರವರು ಮಗ್ಗಿಯ ಮಹಾರಾಜ ಮತ್ತು ಮಹಾರಾಣಿ ಬಿರುದು ನೀಡಿ ಬಹುಮಾನ ವಿತರಿಸಿ ವಿದ್ಯಾರ್ಥಿಗಳ ಪ್ರೋತ್ಸಾಹಿಸುತ್ತಿದ್ದಾರೆ. ನಮ್ಮ ಸರ್ಕಾರಿ ಶಾಲೆಯಲ್ಲಿ ದ್ವಿಭಾಷಾ ಶಿಕ್ಷಣ ವ್ಯವಸ್ಥೆ ಇದ್ದು ಆಂಗ್ಲ ಮಾಧ್ಯಮದಲ್ಲಿಯು ಕಲಿಕೆ ನೀಡಲಾಗುತ್ತಿದೆ. ಇದನ್ನು ಪೋಷಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಅನಸೂಯಮ್ಮ ಚಿಕ್ಕಪ್ಪರವರು ಟ್ರ್ಯಾಕ್ ಸೂಟ್ ಸಮವಸ್ತ್ರಗಳನ್ನು, ಮಹೇಶ್ವರಪ್ಪರವರು ಉತ್ತಮ ಕಲಿಕೆ ತೋರಿದ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಕಾಪಿ ಪುಸ್ತಕ ಲೇಖನ ಸಾಮಗ್ರಿಗಳನ್ನು ಕೊಡುಗೆ ನೀಡಿದರು.
ಕಾರ್ಯಕ್ರಮದಲ್ಲಿ ಎಸ್ ಡಿಎಮ್ ಸಿ ಅಧ್ಯಕ್ಷ ನಾಗರಾಜ ಜೆ, ಕೆಂಚಮ್ಮ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಾದಪ್ಪ, ಉಪಾಧ್ಯಕ್ಷ ದೇವರಾಜ, ಸದಸ್ಯರಾದ ಗೋವಿಂದಪ್ಪ, ಅನುಸೂಯಮ್ಮ, ಆಶಾ, ಸಿದ್ಧಪ್ಪ, ಷಣ್ಮುಖಪ್ಪ, ಮುಖ್ಯೋಪಾಧ್ಯಾಯ ಎಮ್.ಕೆಂಚಪ್ಪ. ಸಹಶಿಕ್ಷಕರಾದ ಬಿ.ಆರ್.ಅಜ್ಜಪ್ಪ, ಪಾರ್ವತಮ್ಮ, ಅಂಗನವಾಡಿ ಕಾರ್ಯಕರ್ತೆ ರೂಪ, ಸಹಾಯಕಿ ಸುಧಾ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



