ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ಹಂಚಿಕೆ ಪ್ರಕ್ರಿಯೆ ಭಾರಿ ಕಗ್ಗಂಟಾಗುವ ಮುನ್ಸೂಚನೆ ಸಿಕ್ಕಿದೆ. ಕ್ಷೇತ್ರದ ಕಾಂಗ್ರೆಸ್ ಪಕ್ಷದ ಹಿರಿಯರು, ಚಿಂತಕರು ಹಾಗೂ ಸಮಾನ ಮನಸ್ಕರ ಮಹತ್ವದ ಸಭೆಯು ಮಂಗಳವಾರ ನಗರದ ಹೊರವಲಯದ ‘ವೈಟ್ ವಾಲ್’ ಸಭಾಂಗಣದಲ್ಲಿ ಜರುಗಿತು.
ಈ ಸಭೆಯಲ್ಲಿ ಹೈಕಮಾಂಡ್ ಹಾಗೂ ರಾಜ್ಯ ನಾಯಕತ್ವದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮುಖಂಡರು, "ಯಾವುದೇ ಕಾರಣಕ್ಕೂ ಹೊರಗಿನವರಿಗೆ ಮಣೆ ಹಾಕಬೇಡಿ, ಸ್ಥಳೀಯ ಹಿರಿಯ ರಾಜಕಾರಣಿ ಹಾಗೂ ಮಾಜಿ ಜಿಲ್ಲಾಧ್ಯಕ್ಷರಾದ ಗನ್ನಾಯಕನಹಳ್ಳಿ ಆರ್. ಮಂಜುನಾಥ್ ಅವರಿಗೆ ಟಿಕೆಟ್ ನೀಡಲೇಬೇಕು" ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು.
ಹಿರಿಯೂರಿನಲ್ಲಿ ಹೊರಗಿನವರ ಆಳ್ವಿಕೆಗೆ ಬ್ರೇಕ್ ಹಾಕಿ: ಧನಂಜಯ್ ಕುಮಾರ್
ಸಭೆಯನ್ನುದ್ದೇಶಿಸಿ ಮಾತನಾಡಿದ ನಗರಸಭೆ ಮಾಜಿ ಸದಸ್ಯ ಧನಂಜಯ್ ಕುಮಾರ್, ಹಿರಿಯೂರಿನ ರಾಜಕೀಯ ಇತಿಹಾಸವನ್ನು ಬಿಚ್ಚಿಟ್ಟರು. "ಸ್ವಾತಂತ್ರ್ಯ ಬಂದು ಬ್ರಿಟಿಷರು ಭಾರತವನ್ನು ನಮಗೆ ಬಿಟ್ಟುಕೊಟ್ಟರು. ಆದರೆ ಹಿರಿಯೂರು ತಾಲೂಕಿನ ಜನಸಾಮಾನ್ಯರಿಗೆ ಮಾತ್ರ ಸ್ಥಳೀಯ ಆಡಳಿತದ ಭಾಗ್ಯ ಸಿಗುತ್ತಿಲ್ಲ. ಹಾಗೆ ಸ್ವಾತಂತ್ರ್ಯ ಕೂಡಾ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಕ್ಷೇತ್ರದಲ್ಲಿ ಈ ಹಿಂದೆ ಮಾಜಿ ಸಚಿವರಾದ ದಿವಂಗತ ಆಲೂರಿನ ವಿ.ಮಸಿಯಪ್ಪ ಹಾಗೂ ಮಸ್ಕಲ್ ಆರ್. ರಾಮಯ್ಯ ಮಾತ್ರ ಸ್ಥಳೀಯ ಶಾಸಕರಾಗಿದ್ದರು. ಇವರನ್ನು ಬಿಟ್ಟರೆ ಡಿ. ಮಂಜುನಾಥ್, ಕೆ. ರಂಗನಾಥ್, ಡಿ. ಸುಧಾಕರ್, ಪೂರ್ಣಿಮಾ ಶ್ರೀನಿವಾಸ್ ಸೇರಿದಂತೆ ಬಹುತೇಕ ಹೊರಗಿನವರೇ ಬಂದು ಇಲ್ಲಿ ಶಾಸಕರಾಗಿ ಆಳ್ವಿಕೆ ನಡೆಸಿದ್ದಾರೆ. ಹೊರಗಿನವರು ಬಂದು ಇಲ್ಲಿ ಆಳ್ವಿಕೆ ನಡೆಸುತ್ತಿರುವುದು ನಮ್ಮ ತಾಲೂಕಿಗೆ ಅತ್ಯಂತ ನೋವಿನ ಸಂಗತಿ" ಎಂದರು.
"ಪಬ್ಲಿಕ್ ಟಿವಿ ರಂಗನಾಥ್ ಅವರು 'ಹಣವಿದ್ದರೆ ಹಿರಿಯೂರು ಕ್ಷೇತ್ರವನ್ನು ಕೊಂಡುಕೊಳ್ಳಬಹುದು' ಎಂದು ಹೇಳಿದ ಮಾತು ಕೇಳಿ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಕ್ಷೇತ್ರದ ಜನತೆಯನ್ನು ಹಣಕ್ಕಾಗಿ ಕೊಂಡುಕೊಳ್ಳುವ ಇಂತಹ ಪರಿಸ್ಥಿತಿಗೆ ನಮ್ಮ ತಾಲೂಕು ಸಿಲುಕಬಾರದು. ಹಿರಿಯೂರು ತಾಲೂಕಿನ ಸ್ವಾಭಿಮಾನದ ಮೇಲೆ ನಂಬಿಕೆ ಇದ್ದರೆ, ವಿ.ವಿ. ಸಾಗರದ ನೀರು ಕುಡಿಯುತ್ತಿದ್ದರೆ, ಹೈಕಮಾಂಡ್ ತಕ್ಷಣವೇ ಸ್ಥಳೀಯ ನಾಯಕ ಆರ್. ಮಂಜುನಾಥ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಿ. ನಾವು ಹೈಕಮಾಂಡ್ಗೆ ಹೋಗಿ ಈ ಬಗ್ಗೆ ನೇರ ಮನವಿ ಸಲ್ಲಿಸುತ್ತೇವೆ."
ಧನಂಜಯ್ ಕುಮಾರ್, ಮಾಜಿ ನಗರಸಭೆ ಸದಸ್ಯ.
ಬಹುಸಂಖ್ಯಾತ ಜಾತಿಗಳ ಕಡೆಗಣನೆಯಿಂದಲೇ ಕಾಂಗ್ರೆಸ್ ದುರ್ಬಲ: ಪದ್ಮನಾಭ
ನಗರಸಭೆ ಮಾಜಿ ಸದಸ್ಯ ಪದ್ಮನಾಭ ಮಾತನಾಡಿ, "ಹಿರಿಯೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ದುರ್ಬಲವಾಗುತ್ತಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಸಹ, ಲೋಕಸಭಾ (ಎಂಪಿ) ಚುನಾವಣೆಯಲ್ಲಿ ಹೊರಗಿನವರು ಕೇವಲ 15 ದಿನ ಬಂದು ಗೆದ್ದು ಹೋಗುತ್ತಾರೆ ಎಂದರೆ ನಮ್ಮ ಪಕ್ಷದ ಸ್ಥಿತಿ ಏನಾಗಿದೆ ಎಂಬುದನ್ನು ಯೋಚಿಸಬೇಕು. ಕಾಂಗ್ರೆಸ್ ಪಕ್ಷವು ಬಹುಸಂಖ್ಯಾತ ಜಾತಿಗಳನ್ನು ಮತ್ತು ಸ್ಥಳೀಯರನ್ನು ದೂರ ಇಡುತ್ತಿರುವುದೇ ಈ ದೌರ್ಬಲ್ಯಕ್ಕೆ ಕಾರಣ. ಸ್ಥಳೀಯರಿಗೆ ಆದ್ಯತೆ ನೀಡಿದರೆ ಮಾತ್ರ ಪಕ್ಷ ಜೀವಂತವಾಗಿ ಉಳಿಯುತ್ತದೆ ಎಂಬ ಕಾರಣಕ್ಕೆ ಈ ಸಭೆ ಕರೆಯಲಾಗಿದೆ" ಎಂದು ಎಚ್ಚರಿಸಿದರು.
ಭದ್ರಾ ಮೇಲ್ದಂಡೆ ಮತ್ತು ವಿವಿ ಸಾಗರದ ಇತಿಹಾಸ ಸ್ಮರಿಸಿದ ತಿಮ್ಮಯ್ಯ-
ಹಿರಿಯ ಮುಖಂಡ ಎಚ್.ಆರ್. ತಿಮ್ಮಯ್ಯ ಮಾತನಾಡಿ, "1907 ರಲ್ಲಿ ಅಂದಿನ ಮೈಸೂರು ಮಹಾರಾಜರು ಇಲ್ಲಿನ ಬರಗಾಲದ ಪರಿಸ್ಥಿತಿಯನ್ನು ಕಂಡು ವಿ.ವಿ. ಸಾಗರ (ವಾಣಿ ವಿಲಾಸ ಸಾಗರ) ಡ್ಯಾಂ ನಿರ್ಮಾಣ ಮಾಡಿದರು. ಆದರೆ ಇಂದು ಎಲ್ಲಾ ತಾಲೂಕಿನವರು ಇಲ್ಲಿಂದ ನೀರು ತಗೊಂಡು ಹೋಗುತ್ತಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗಾಗಿ ಹಿರಿಯೂರು ರೈತರು 2008 ರಲ್ಲಿ ಪ್ರಾರಂಭಿಸಿದ ಹೋರಾಟ 541 ದಿನಗಳ ಕಾಲ ಅಮರಣಾಂತ ಉಪವಾಸ ಸತ್ಯಾಗ್ರಹವಾಗಿ ಮುಂದುವರಿದಿತ್ತು. ಅಂದು ಸುಧಾಕರ್ ಅವರು ಶಾಸಕರಾಗಿದ್ದಾಗ, ಕರುಣಾಕರ ರೆಡ್ಡಿ ಜಿಲ್ಲಾ ಉಸ್ತುವಾರಿಯಾಗಿದ್ದರು ಹಾಗೂ ಎಸ್ಆರ್ ಬೊಮ್ಮಾಯಿ ನೀರಾವರಿ ಸಚಿವರಾಗಿದ್ದ ಸಂದರ್ಭದಲ್ಲಿ ಪ್ರವಾಸಿ ಮಂದಿರದಲ್ಲಿ ಪೂಜ್ಯ ನಂಜಾವದೂತ ಸ್ವಾಮೀಜಿಯವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆದು ಈ ಭಾಗದ ಹಿತರಕ್ಷಣೆಗಾಗಿ ಹೋರಾಡಲಾಗಿತ್ತು" ಎಂದು ಕ್ಷೇತ್ರದ ಜಲ ಹೋರಾಟವನ್ನು ನೆನಪಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಪ್ರಮುಖರು:
ಈ ನಿರ್ಣಾಯಕ ಸಮಾನ ಮನಸ್ಕರ ಸಭೆಯಲ್ಲಿ ಮಾಜಿ ನಗರಸಭೆ ಸದಸ್ಯರಾದ ವೈ.ಪಿ.ಡಿ. ದಾದಾಪೀರ್, ಮುಖಂಡರಾದ ಡಾ. ಪ್ರಕಾಶ್ ಹುಚ್ಚವನಹಳ್ಳಿ, ಓಬಳೇಶ್, ಧ್ರುವ ಕುಮಾರ್, ಪ್ರಸನ್ನ ಕುಮಾರ್ ಮಲ್ಲಪ್ಪನಹಳ್ಳಿ, ತುಳಸಿದಾಸ್, ರಂಗೇಗೌಡ, ಮಸ್ಕಲ್ ಪರಮೇಶ್ ಸೇರಿದಂತೆ ಕ್ಷೇತ್ರದ ನೂರಾರು ಮುಖಂಡರು ಹಾಗೂ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿ, ಸ್ಥಳೀಯ ಅಭ್ಯರ್ಥಿ ಪರವಾಗಿ ಒಕ್ಕೊರಲಿನ ಬೆಂಬಲ ಸೂಚಿಸಿದರು.



