ಎಂ.ಎಲ್ ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮಾಜಿ ಸಚಿವ, ದಿವಂಗತ ಡಿ. ಸುಧಾಕರ್ ಅವರ ಅಕಾಲಿಕ ಅಗಲಿಕೆಯ ನಂತರ ಹಿರಿಯೂರು ಕ್ಷೇತ್ರದಲ್ಲಿ ಸೃಷ್ಟಿಯಾಗಿದ್ದ ನಾಯಕತ್ವದ ಶೂನ್ಯತೆಯನ್ನು ತಮ್ಮ ನಿಸ್ವಾರ್ಥ ಸೇವೆಯ ಮೂಲಕ ತುಂಬುತ್ತಿರುವವರು ಕೆಪಿಸಿಸಿ ಸದಸ್ಯ ಅಮೃತೇಶ್ವರಸ್ವಾಮಿ. ಯಾವುದೇ ಪ್ರಚಾರದ ಹಂಬಲವಿಲ್ಲದೆ, ತೆರೆಮರೆಯಲ್ಲಿಯೇ ಹಿರಿಯೂರು ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಅವರು, ಇದೀಗ ಕ್ಷೇತ್ರದ ಸುದೀರ್ಘ ದಿನಗಳ ಜಲಸಂಕಷ್ಟಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
16 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ರಾಜ್ಯ ಸರ್ಕಾರ ಅಂಕಿತ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಹಾಗೂ ಕಲ್ವಳ್ಳಿ ಭಾಗದ ನೀರಾವರಿ ವಂಚಿತ 16 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅಧಿಕೃತ ಅನುಮೋದನೆ ದೊರೆತಿದೆ.
ಈ ಭಾಗದ ರೈತರ ಪಾಲಿಗೆ ವರವಾಗಲಿರುವ ಈ ಬೃಹತ್ ಯೋಜನೆಗೆ ಅನುಮೋದನೆ ಸಿಗಲು ಅಮೃತೇಶ್ವರಸ್ವಾಮಿ ಅವರ ಸತತ ಪರಿಶ್ರಮವೇ ಮೂಲ ಕಾರಣ. ಕ್ಷೇತ್ರದ ನೀರಾವರಿ ಹಾಗೂ ಭೌಗೋಳಿಕ ಸವಾಲುಗಳನ್ನು ಖುದ್ದಾಗಿ ಅಭ್ಯಾಸ ಮಾಡಿದ್ದ ಅವರು, ಈ ಭಾಗಕ್ಕೆ ನೀರಾವರಿ ಒದಗಿಸುವುದು ಎಷ್ಟು ತರ್ಕಬದ್ಧ ಮತ್ತು ತುರ್ತು ಎಂಬುದನ್ನು ಸಚಿವಾಲಯದ ಮಟ್ಟದಲ್ಲಿ ಮನವರಿಕೆ ಮಾಡಿಕೊಟ್ಟಿದ್ದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮನವೊಲಿಸುವಲ್ಲಿ ಯಶಸ್ವಿ:
ಯೋಜನೆಯ ತಾಂತ್ರಿಕ ಮತ್ತು ಆರ್ಥಿಕ ಸವಾಲುಗಳನ್ನು ದಾಟಿ ಅನುಮೋದನೆ ಪಡೆಯುವುದು ಸುಲಭದ ಮಾತಾಗಿರಲಿಲ್ಲ. ಪ್ರಭಾವಿ ಜಲಸಂಪನ್ಮೂಲ ಸಚಿವರೂ ಆಗಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಳಿ ಹಿರಿಯೂರಿನ ರೈತರ ಅಳಲನ್ನು ನಿರಂತರವಾಗಿ ತಲುಪಿಸಿದ ಅಮೃತೇಶ್ವರಸ್ವಾಮಿ ಅವರು, ಸೂಕ್ತ ದಾಖಲೆ ಮತ್ತು ಅಂಕಿ-ಅಂಶಗಳೊಂದಿಗೆ ಯೋಜನೆಯ ಅಗತ್ಯತೆಯನ್ನು ಪ್ರತಿಪಾದಿಸಿದರು.
"ಹಿರಿಯೂರಿನ ಬರದ ನಾಡಿಗೆ ಜಲಸಂಜೀವಿನಿ ನೀಡುವುದು ಸರ್ಕಾರದ ಕರ್ತವ್ಯ" ಎಂಬುದನ್ನು ನಾಯಕತ್ವದ ಗಮನಕ್ಕೆ ತಂದು, ಯೋಜನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಿ ಅನುಮೋದನೆ ದೊರೆಯುವಂತೆ ಮಾಡುವಲ್ಲಿ ಅಮೃತೇಶ್ವರಸ್ವಾಮಿ ಅವರ ರಾಜಕೀಯ ಚಾಣಾಕ್ಷತೆ ಮತ್ತು ಕಾಳಜಿ ಎದ್ದು ಕಾಣುತ್ತದೆ.
ತೆರೆಮರೆಯ ಶ್ರಮ, ಕ್ಷೇತ್ರಕ್ಕೊಂದು ಹೊಸ ಆಶಾವಾದ:
ದಿವಂಗತ ಡಿ. ಸುಧಾಕರ್ ಅವರ ಕನಸುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿರುವ ಅಮೃತೇಶ್ವರಸ್ವಾಮಿ, ಕ್ಷೇತ್ರದ ಮೂಲೆ ಮೂಲೆಗೂ ತೆರಳಿ ಜಾತಿ ಧರ್ಮ ಎಂದು ತಾರತಮ್ಯ ಮಾಡದೇ ಎಲ್ಲ ವರ್ಗದ ಸಾರ್ವಜನಿಕರ ಕುಂದುಕೊರತೆಗಳನ್ನು ಈಡೇರಿಸುತ್ತಿದ್ದಾರೆ.
ರೈತರ ಮೊಗದಲ್ಲಿ ಮಂದಹಾಸ: ಜವನಗೊಂಡನಹಳ್ಳಿ ಮತ್ತು ಕಲ್ವಳ್ಳಿ ಭಾಗದಲ್ಲಿ ವರ್ಷಪೂರ್ತಿ ಎದುರಾಗುತ್ತಿದ್ದ ಅಂತರ್ಜಲ ಕುಸಿತ ಹಾಗೂ ಕುಡಿಯುವ ನೀರಿನ ಅಭಾವಕ್ಕೆ ಈ 16 ಕೆರೆ ತುಂಬಿಸುವ ಯೋಜನೆಯಿಂದ ಶಮನ ಸಿಗಲಿದೆ.
ನಿಸ್ವಾರ್ಥ ರಾಜಕಾರಣದ ಸಂಕೇತ:
ಜಿಲ್ಲಾ ಪಂಚಾಯಿತಿ ಸದಸ್ಯರು ಅಲ್ಲ, ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯೂ ಅಲ್ಲ, ಅಧಿಕಾರ ಅಥವಾ ಹುದ್ದೆಯ ಹಂಬಲವಿಲ್ಲದೆ, ಕೇವಲ ಹಿರಿಯೂರು ಕ್ಷೇತ್ರದ ಅಭಿವೃದ್ಧಿಯೇ ಧ್ಯೇಯವೆಂದು ದುಡಿಯುತ್ತಿರುವ ಅಮೃತೇಶ್ವರಸ್ವಾಮಿ ಅವರ ನಡೆಗೆ ಕ್ಷೇತ್ರದ ಜನತೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಮಾಜಿ ಸಚಿವ ಸಚಿವ ದಿವಂಗತ ಕೆ.ಹೆಚ್ ರಂಗನಾಥ್ ಅವರ ಅಪ್ಪಟ ಶಿಷ್ಯರಾಗಿ ರಾಜಕೀಯ ಪ್ರವೇಶ ಮಾಡಿದ ದಿನದಿಂದಲೂ ಅಮೃತೇಶ್ವರ ಸ್ವಾಮಿ ಅವರು ಕ್ಷೇತ್ರದ ಅಭಿವೃದ್ಧಿ ಕುರಿತು ಚಿಂತನೆ ಮಾಡುತ್ತಿದ್ದಾರೆ.
ಇವರ ತೆರೆ ಮರೆಯ ಕಾರ್ಯ ಸಾಧನೆಗೆ ಸಾಕ್ಷಿಗುಡ್ಡೆಯಾಗಿ ಕಾಣುವುದು ಕಲ್ವಳ್ಳಿ ಭಾಗದ 16 ಕೆರೆಗಳಿಗೆ ಅನುಮೋದನೆ ನೀಡಿಸಿರುವುದು. ಇದು ಕ್ಷೇತ್ರದ ಜನತೆಗೆ ಅಷ್ಟಾಗಿ ತಿಳಿದಿಲ್ಲ. ಆದರೆ ಸಚಿವ ಸಂಪುಟದ ಹಿಂದಿನ ದಿನ ಮತ್ತು ಸಚಿವ ಸಂಪುಟ ನಡೆಯುವ ಎರಡೂ ದಿನಗಳು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ ಕಲ್ವಳ್ಳಿ ಭಾಗದ 16 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಬೇಕೆಂದು ಕೋರಿದ್ದರು.
ಇದಕ್ಕೂ ಮುನ್ನ ಯಾವ ಭಾಗದಲ್ಲಿ ಚೆಕ್ ಡ್ಯಾಂ ನಿರ್ಮಿಸಿ ಏತ ನೀರಾವರಿ ಮೂಲಕ ನೀರು ಕೊಡಲು ಸಾಧ್ಯ ಎನ್ನುವುದನ್ನ ಆತ್ಮೀಯ ಸ್ನೇಹಿತ ವಕೀಲ ದೊಡ್ಡಘಟ್ಟ ಶಿವಕುಮಾರ್ ಅವರೊಂದಿಗೆ ಚರ್ಚಿಸಿ ದೊಡ್ಡಘಟ್ಟ ಸಮೀಪ ಚೆಕ್ ಡ್ಯಾಂ ನಿರ್ಮಿಸಿ ಅಲ್ಲಿಂದ ಕಲ್ವಳ್ಳಿ ಭಾಗಕ್ಕೆ ಅಂದರೆ ಉಡುವಳ್ಳಿ ಕೆರೆ, ಗಾಯಿತ್ರಿ ಕೆರೆ ಸೇರಿದಂತೆ ಇತರೆ 16 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮಂಜೂರಾಗಲು ಇವರ ಶ್ರಮ ಎದ್ದು ಕಾಣುತ್ತಿದೆ.
ಹಿರಿಯೂರಿನ ಜಲಕ್ಷಾಮ ನೀಗಿಸಿ, ರೈತರ ಮೊಗದಲ್ಲಿ ಹಸನ್ಮುಖಿ ತರಲು ಶ್ರಮಿಸಿದ ಅಮೃತೇಶ್ವರಸ್ವಾಮಿ ಅವರ ಈ ಕಾರ್ಯ ಕ್ಷೇತ್ರದಲ್ಲಿ ಹೊಸ ಆಶಾಕಿರಣ ಮೂಡಿಸಿದೆ.



