ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
'2028ಕ್ಕೆ ರಾಜ್ಯದಲ್ಲಿ ಇದೇ ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ' ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, 2028ಕ್ಕೆ ನಮ್ಮ ಸರ್ಕಾರ ಬರುವ ಕನಸು ಕಾಣಬೇಡಿ ಕೆಲಸ ಮಾಡಿ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತೀನ್ ನಬಿನ್ ಅವರು ರಾಜ್ಯ ನಾಯಕರಿಗೆ ಸೂಚನೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಅಮಿತ್ ಶಾ ಅವರು ಬಿಜೆಪಿಗೆ 122 ಸೀಟು ಬರುತ್ತದೆ, ಎಲ್ಲರೂ ಸೂಟುಬೂಟು ಸಿದ್ಧಮಾಡಿಕೊಳ್ಳಿ ಎಂದಿದ್ದರು.
ನಾನು ನಮಗೆ 136 ಸೀಟು ಬರಲಿದೆ ಎಂದು ಹೇಳಿದ್ದೆ. ಈಗಲೂ ಹೇಳುತ್ತಿದ್ದೇನೆ ಬರೆದುಕೊಳ್ಳಿ, 2028ಕ್ಕೆ ಇದೇ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ' ಎಂದು ಬಲವಾಗಿ ಭವಿಷ್ಯ ನುಡಿದರು.
ನೀವು ದೆಹಲಿ ಪ್ರವಾಸ ಮಾಡುತ್ತೀರಾ ಎಂಬ ಪ್ರಶ್ನೆಗೆ, 'ನಮ್ಮನ್ನು ಕರೆದರೆ ಹೋಗುತ್ತೇವೆ. ಸುರ್ಜೆವಾಲ ಅವರು ನಿಮಗೆ ಏನು ಹೇಳಿದ್ದಾರೋ ಗೊತ್ತಿಲ್ಲ. ಅವರು ದೆಹಲಿಗೆ ಬನ್ನಿ ಎಂದರೆ ನಾನು ಹೋಗುತ್ತೇನೆ. ಇಲ್ಲವಾದರೆ ಇಲ್ಲೇ ಉಳಿಯುತ್ತೇನೆ. ಪಕ್ಷ ಕರೆದಾಗ ನಾವು ಹೋಗಲೇಬೇಕಾಗುತ್ತದೆ' ಎಂದು ಉತ್ತರಿಸಿದರು.
ಫಲಾನುಭವಿಗಳಿಗೆ ಗ್ಯಾರಂಟಿ ತಲುಪುವಂತೆ ಪರಿಶೀಲನೆ: ಗ್ಯಾರಂಟಿ ಪರಿಷ್ಕರಣೆ ಮಾಡಲಾಗುವುದೇ ಎಂದು ಕೇಳಿದಾಗ, 'ಕೆಲವು ಗ್ಯಾರಂಟಿ ಫಲಾನುಭವಿಗಳು ಮೃತಪಟ್ಟಿದ್ದು, ಸುಮಾರು 100 ಕೋಟಿಯಷ್ಟು ಹಣ ಬೇರೆಯವರಿಗೆ ಹೋಗಿ ದುರ್ಬಳಕೆಯಾಗಿದೆ. ಇನ್ನು ಬೇರೆಯವರ ದೂರವಾಣಿ ಸಂಖ್ಯೆ ಕೊಟ್ಟಿರುವುದರಿಂದ ಸರಿಯಾದ ಫಲಾನುಭವಿಗಳಿಗೆ ಯೋಜನೆ ತಲುಪುತ್ತಿದಯೇ, ಇಲ್ಲವೇ ಎಂದು ತಿಳಿಯಬೇಕಿದೆ. ಹೀಗಾಗಿ ಫಲಾನುಭವಿಗಳ ದಾಖಲೆ ಸಂಗ್ರಹಿಸುವ ಬಗ್ಗೆ ಚರ್ಚೆ ಮಾಡುವ ಬಗ್ಗೆ ಸಲಹೆ ಬಂದಿದೆ. ಪ್ರತಿ ತಾಲೂಕಿನಲ್ಲಿ ಇದನ್ನು ಪರಿಶೀಲನೆ ಮಾಡುತ್ತಿದ್ದೇವೆ' ಎಂದು ತಿಳಿಸಿದರು.
2 ತಿಂಗಳಿನಿಂದ ಅನ್ನಭಾಗ್ಯ ಅಕ್ಕಿ ಸರಿಯಾಗಿ ತಲುಪುತ್ತಿಲ್ಲ ಎಂದು ಪ್ರಶ್ನಿಸಿದಾಗ, 'ಕೇಂದ್ರ ಸರ್ಕಾರ ಅಕ್ಕಿ ಬಿಡುಗಡೆ ಮಾಡುತ್ತಿಲ್ಲ. ಕೇವಲ ಕರ್ನಾಟಕ ಮಾತ್ರವಲ್ಲ, ನಮ್ಮ ಸರ್ಕಾರ ಇರುವ ರಾಜ್ಯಗಳಲ್ಲಿ ಈ ರೀತಿ ಮಾಡುತ್ತಿದ್ದಾರೆ' ಎಂದು ಕಿಡಿಕಾರಿದರು.
ಸಚಿವ ಹೆಚ್.ಸಿ. ಮಹದೇವಪ್ಪ ಅವರು ಮಾಧ್ಯಮದವರು ಸಿಎಂ ಬದಲಾವಣೆ ಕುರಿತು ಪ್ರಶ್ನಿಸಿದ್ದಾಗ 'ಸದ್ಯಕ್ಕೆ ಸಿಎಂ ಚೇರ್ನಲ್ಲಿ ಸಿದ್ದರಾಮಯ್ಯ ಕುಳಿತಿದ್ದಾರೆ. ಸಿದ್ದರಾಮಯ್ಯ ಎದ್ದಿಲ್ಲ, ಕುಳಿತಿದ್ದಾರೆ, ಕುರ್ಚಿ ಖಾಲಿ ಇಲ್ಲಾ' ಎಂದು ಉತ್ತರಿಸಿದ್ದರು.



