ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ದಕ್ಷಿಣ ಜಿಲ್ಲೆಯ ವ್ಯಾಪ್ತಿಯಲ್ಲಿ ಪತ್ತೆಯಾಗಿರುವ ಬೃಹತ್ ನಕಲಿ ಔಷಧ ಜಾಲದ ವಿರುದ್ಧದ ತನಿಖೆಯನ್ನು ಚುರುಕುಗೊಳಿಸಿರುವ ಸಿಐಡಿ ವಿಶೇಷ ತನಿಖಾ ತಂಡ ಹಾಗೂ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ದೇಶಾದ್ಯಂತ ಭಾರಿ ಕಾರ್ಯಾಚರಣೆ ನಡೆಸಿದ್ದಾರೆ.
ನಕಲಿ ಜಾಲದ ಬೇರುಗಳನ್ನು ಹುಡುಕಲು ಹೊರಟಿರುವ ತನಿಖಾಧಿಕಾರಿಗಳು, ದೇಶದ 6 ರಾಜ್ಯಗಳ ಸುಮಾರು 10ಕ್ಕೂ ಅಧಿಕ ಸ್ಥಳಗಳಲ್ಲಿ ಏಕಕಾಲಕ್ಕೆ ಜಂಟಿ ದಾಳಿ ನಡೆಸಿ ಶೋಧ ಮುಂದುವರಿಸಿದ್ದಾರೆ.
ಬೆಂಗಳೂರು ಮಾತ್ರವಲ್ಲದೆ ಹರಿಯಾಣ, ಹಿಮಾಚಲ ಪ್ರದೇಶ, ತಮಿಳುನಾಡು ಹಾಗೂ ಮಹಾರಾಷ್ಟ್ರದವರೆಗೂ ವ್ಯಾಪಿಸಿರುವ ಈ ನಕಲಿ ಜಾಲದ ಪ್ರಮುಖ ತಯಾರಿಕಾ ಘಟಕಗಳು ಮತ್ತು ಫಾರ್ಮ್ಹೌಸ್ಗಳ ಮೇಲೆ ಕಣ್ಣಿಡಲಾಗಿದೆ ಎಂದು ಎಸ್ಐಟಿ ಮೂಲಗಳು ಖಚಿತಪಡಿಸಿವೆ.
ಪ್ರಮುಖ ಆರೋಪಿಗಳ ನಂಟು ಹಾಗೂ ದಾಳಿಯ ವಿವರ
ಈ ಬೃಹತ್ ಜಾಲದ ಪ್ರಮುಖ ಆರೋಪಿ ಎನ್ನಲಾದ ಆರ್. ಪ್ರಶಾಂತ್ ಹಾಗೂ ಆತನ ಗ್ಯಾಂಗ್ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ವೀರೇಶ್ ಕುಮಾರ್ ಎಂಬಾತನ ಮನೆ, ಕಚೇರಿ ಹಾಗೂ ಮಿನರ್ವ ಸರ್ಕಲ್ ಬಳಿ ಆತ ನಡೆಸುತ್ತಿದ್ದ 'ಕೃಪಾ ಹೆಲ್ತ್ ಕೇರ್' ಮೇಲೆ ಎಸ್ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಕಳೆದ ಒಂದು ವರ್ಷದಿಂದ ವೀರೇಶ್ ಹಾಗೂ ಪ್ರಶಾಂತ್ ವ್ಯವಹಾರದಲ್ಲಿ ಪಾಲುದಾರರಾಗಿದ್ದರು ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ.
ವಿವಿಧೆಡೆ ತಯಾರಾಗುತ್ತಿದ್ದ ನಕಲಿ ಮೆಡಿಸಿನ್ಗಳನ್ನು ಮಿನರ್ವ ಸರ್ಕಲ್ನಲ್ಲಿರುವ ಗೋಡೌನ್ಗೆ ತಂದು, ಅಲ್ಲಿಂದ ನಗರದ ಪ್ರತಿಷ್ಠಿತ ಮೆಡಿಕಲ್ ಸ್ಟೋರ್ಗಳು ಹಾಗೂ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗುತ್ತಿತ್ತು ಎಂಬ ಆಘಾತಕಾರಿ ಮಾಹಿತಿ ತನಿಖೆಯಿಂದ ಹೊರಬಿದ್ದಿದೆ. ಸದ್ಯ ವೀರೇಶ್ ಕುಮಾರ್ ಮನೆ ಹಾಗೂ ಕೃಪಾ ಹೆಲ್ತ್ ಕೇರ್ ಸಂಸ್ಥೆಯಿಂದ ನಕಲಿ ಔಷಧಗಳು, ನಕಲಿ ಬಿಲ್ಗಳು ಹಾಗೂ ಹಲವು ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ ಮತ್ತು ಆತಂಕಕಾರಿ ಸಂಗತಿಗಳು:
ಕಳೆದ ಆಗಸ್ಟ್ 18ರಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಹಾಗೂ ದೊಡ್ಡೇರಿ ಭಾಗದ ಫಾರ್ಮ್ಹೌಸ್ ಮತ್ತು ಅನಧಿಕೃತ ಪ್ಯಾಕಿಂಗ್ ಘಟಕಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರು.
ಈ ಕಾರ್ಯಾಚರಣೆಯ ವೇಳೆ ಪ್ರಸಿದ್ಧ ಬಹುರಾಷ್ಟ್ರೀಯ ಫಾರ್ಮಾ ಕಂಪನಿಗಳ ನಕಲಿ ಲೇಬಲ್, ಪ್ಯಾಕಿಂಗ್ ಸಾಮಗ್ರಿಗಳು ಹಾಗೂ ಬರೋಬ್ಬರಿ 4.5 ರಿಂದ 5 ಕೋಟಿ ರೂಪಾಯಿ ಮೌಲ್ಯದ ನಕಲಿ ಔಷಧಗಳು ಜಪ್ತಿಯಾಗಿದ್ದವು. ವಿಶೇಷವಾಗಿ, ತುರ್ತು ನಿಗಾ ಘಟಕಗಳಲ್ಲಿ ಗಂಭೀರ ಕಾಯಿಲೆಗಳಿಗೆ ಬಳಸುವ ಜೀವ ರಕ್ಷಕ ಔಷಧಗಳನ್ನೇ ಅತ್ಯಂತ ಕಳಪೆ ಮಟ್ಟದಲ್ಲಿ ನಕಲು ಮಾಡಿ, ಮಾರುಕಟ್ಟೆ ಹಾಗೂ ವಿವಿಧ ಆಸ್ಪತ್ರೆಗಳಿಗೆ ಶೇಕಡಾ 50ರಷ್ಟು ಬಂಪರ್ ರಿಯಾಯಿತಿ ದರದಲ್ಲಿ ಸರಬರಾಜು ಮಾಡುತ್ತಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿತ್ತು.
ಸಾರ್ವಜನಿಕರ ಆರೋಗ್ಯದ ಜತೆ ಚೆಲ್ಲಾಟವಾಡುತ್ತಿರುವ ಈ ಪ್ರಕರಣವನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಸಮಗ್ರ ತನಿಖೆಗಾಗಿ ಜಂಟಿ ಪೊಲೀಸ್ ಆಯುಕ್ತ ಸಿ. ವಂಶಿಕೃಷ್ಣ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ ಆದೇಶಿಸಿದೆ. ಪ್ರಸ್ತುತ ನಡೆಯುತ್ತಿರುವ ಈ ಕಾರ್ಯಾಚರಣೆಯಿಂದ ನಕಲಿ ಔಷಧ ಜಾಲದ ಮಸಳೆಗಳೆಲ್ಲಾ ಒಂದೊಂದಾಗಿ ಕಾನೂನಿನ ಬಲೆಗೆ ಬೀಳುವ ಸಾಧ್ಯತೆಯಿದೆ.




