ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಲಿಕಾನ್ ಸಿಟಿಯ ಹೆಮ್ಮೆಯಾಗಿರುವ ರಸ್ತೆ ಗುಂಡಿಗಳ ಸಮಸ್ಯೆಗೆ ಶಾಶ್ವತ ಹಾಗೂ ವೈಜ್ಞಾನಿಕ ಪರಿಹಾರ ನೀಡಲು ಮುಂದಾಗಿರುವ ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು, ಸಂಚಾರ ದಟ್ಟಣೆಗೆ ತೊಂದರೆಯಾಗದಂತೆ ರಸ್ತೆ ಗುಂಡಿಗಳನ್ನು ಮುಚ್ಚುವ 'ಜೆಟ್ ಪ್ಯಾಚರ್' ಯಂತ್ರದ ಪ್ರಾಯೋಗಿಕ ಬಳಕೆಗೆ ಶುಕ್ರವಾರ ಅಧಿಕೃತ ಚಾಲನೆ ನೀಡಿದರು.
ಹೈಕೋರ್ಟ್ ಕಟ್ಟುನಿಟ್ಟಿನ ಎಚ್ಚರಿಕೆ ಹಾಗೂ ಸಾರ್ವಜನಿಕರ ನಿರಂತರ ಆಕ್ರೋಶದ ಹಿನ್ನೆಲೆಯಲ್ಲಿ ಜಿಬಿಎ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಈ ನೂತನ ತಂತ್ರಜ್ಞಾನದ ಮೂಲಕ ನಗರದ ರಸ್ತೆಗಳನ್ನು ಸುಧಾರಿಸಲು ಹೆಜ್ಜೆ ಇಟ್ಟಿದ್ದಾರೆ.
ಜೆಟ್ ಪ್ಯಾಚರ್ ಯಂತ್ರದ ವಿಶೇಷತೆಗಳೇನು?:
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಕೃಷ್ಣಭೈರೇಗೌಡ, ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳ ಸಮಸ್ಯೆ ವ್ಯಾಪಕವಾಗಿದ್ದು, ಎಲ್ಲಾ ಕಡೆಗಳಿಗೂ ಒಂದೇ ರೀತಿಯ ಪರಿಹಾರ ಸೂಕ್ತವಲ್ಲ ಎಂದು ಸ್ಪಷ್ಟಪಡಿಸಿದರು. ಹೊಸದಾಗಿ ಪರಿಚಯಿಸಲಾಗಿರುವ ಜೆಟ್ ಪ್ಯಾಚರ್ ಯಂತ್ರದ ಕಾರ್ಯವೈಖರಿಯ ಕುರಿತು ಮಾಹಿತಿ ನೀಡಿದರು.
ಟ್ರಾಫಿಕ್ ಸಮಸ್ಯೆ ಇಲ್ಲ: ಸಾಂಪ್ರದಾಯಿಕ ವಿಧಾನದಂತೆ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಬೇಕಿಲ್ಲ ಅಥವಾ ರಾತ್ರಿ ಹೊತ್ತು ಮಾತ್ರ ಕೆಲಸ ಮಾಡುವ ಅಗತ್ಯವಿಲ್ಲ. ವಾಹನ ದಟ್ಟಣೆಯ ಮಧ್ಯೆಯೂ ಈ ಒಂದೇ ಯಂತ್ರದ ಮೂಲಕ ಕಾರ್ಯನಿರ್ವಹಿಸಬಹುದು.
ಕಾರ್ಯವಿಧಾನ: ಈ ಯಂತ್ರವು ರಸ್ತೆಯಲ್ಲಿನ ಧೂಳನ್ನು ಮೊದಲು ಸ್ವಚ್ಛಗೊಳಿಸಿ (ಡಸ್ಟ್ ಕ್ಲೀನ್), ನಂತರ ವೆಟ್ ಮಿಕ್ಸ್ ಹಾಕುವ ಮೂಲಕ ಗುಂಡಿಗಳನ್ನು ಸುಲಭವಾಗಿ ಮುಚ್ಚುತ್ತದೆ.
ಹಾಟ್ ಮಿಕ್ಸ್ ಮಿತಿ: ಮಳೆಗಾಲದಲ್ಲಿ ಅಥವಾ ತೀವ್ರ ಟ್ರಾಫಿಕ್ ಇರುವ ರಸ್ತೆಗಳಲ್ಲಿ 'ಹಾಟ್ ಮಿಕ್ಸ್' ಬಳಸುವುದು ಕಷ್ಟ ಹಾಗೂ ಅದಕ್ಕೆ ರೋಲರ್ಗಳ ಅವಶ್ಯಕತೆಯಿರುತ್ತದೆ. ಆದರೆ ಜೆಟ್ ಪ್ಯಾಚರ್ ಮೂಲಕ ಒಂದೇ ಒಂದು ಸಣ್ಣ ಗುಂಡಿ ಬಿದ್ದಿದ್ದರೂ ಅತ್ಯಂತ ಕಡಿಮೆ ಸಮಯದಲ್ಲಿ ಮುಚ್ಚಲು ಸಾಧ್ಯವಿದೆ.
ಆಳವಾದ ಗುಂಡಿಗಳಿಗೆ ಅನ್ವಯಿಸುವುದಿಲ್ಲ:
ಯಂತ್ರದ ಮಿತಿಗಳ ಬಗ್ಗೆಯೂ ಮುಕ್ತವಾಗಿ ಮಾತನಾಡಿದ ಸಚಿವರು, ಈ ಜೆಟ್ ಪ್ಯಾಚರ್ ಯಂತ್ರವು ಮೇಲ್ಮೈ ಮಟ್ಟದ ಸಣ್ಣ ಪುಟ್ಟ ಗುಂಡಿಗಳಿಗೆ ಮಾತ್ರ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಆದರೆ, ತುಂಬಾ ಆಳವಾದ ಗುಂಡಿಗಳಿಗೆ ಇದು ವರ್ಕ್ ಆಗುವುದಿಲ್ಲವಾದ್ದರಿಂದ, ಆಳವಾದ ಗುಂಡಿಗಳನ್ನು ಮುಚ್ಚಲು ಬೇರೆ ಪರ್ಯಾಯ ವಿಧಾನಗಳನ್ನು ಕಾಯ್ದುಕೊಳ್ಳಬೇಕಿದೆ ಎಂದು ತಿಳಿಸಿದರು.
ಕೇಂದ್ರ ನಗರ ಪಾಲಿಕೆಯಿಂದ ಸದ್ಯಕ್ಕೆ ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದು, ಇದು ಯಶಸ್ವಿಯಾದರೆ ಇಲಾಖೆಯ ಇತ್ತೀಚಿನ ಇತರ ಕಾರ್ಪೊರೇಷನ್ಗಳ ವ್ಯಾಪ್ತಿಗೂ ವಿಸ್ತರಿಸಲಾಗುವುದು ಎಂದರು.
ರಸ್ತೆ ಗುಂಡಿಗಳ ನಿಖರ ಮಾಹಿತಿಗೆ 'ಪ್ರಹಾರಿ' ವಾಹನ ಬಳಕೆ:
ಬೆಂಗಳೂರಿನಲ್ಲಿ ಒಟ್ಟು ಎಷ್ಟು ಗುಂಡಿಗಳಿವೆ ಎಂಬ ನಿಖರ ಲೆಕ್ಕ ನೀಡುವುದು ಕಷ್ಟಕರ ಹಾಗೂ ಅದು ಅಪಹಾಸ್ಯಕ್ಕೆ ಕಾರಣವಾಗುತ್ತದೆ. ನಗರದಲ್ಲಿ ಬರೋಬ್ಬರಿ 15,000 ಕಿಲೋಮೀಟರ್ ಉದ್ದದ ರಸ್ತೆಗಳಿದ್ದು, ಎಲ್ಲಾ ರಸ್ತೆಗಳ ಅಂದಾಜು ಪಟ್ಟಿ ಸಿದ್ಧಪಡಿಸುವುದು ಸುಲಭವಲ್ಲ.
ಈ ಸಮಸ್ಯೆಗೆ ಭವಿಷ್ಯದಲ್ಲಿ ಅತ್ಯಂತ ವೈಜ್ಞಾನಿಕ ಉತ್ತರ ನೀಡುವ ಸಲುವಾಗಿ, 'ಪ್ರಹಾರಿ' ವಾಹನಗಳಿಗೆ ಡ್ಯಾಶ್ ಕ್ಯಾಮ್ಅಳವಡಿಸುವ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಪಾಲಿಕೆ ವತಿಯಿಂದ ನಿರ್ದಿಷ್ಟ ವಾಹನಗಳಿಗೆ ಕ್ಯಾಮೆರಾ ಫಿಕ್ಸ್ ಮಾಡಿ, ಅದೇ ರಸ್ತೆಯಲ್ಲಿ ಸಂಚರಿಸುತ್ತಾ ಗುಂಡಿಗಳನ್ನು ವಿಶ್ಲೇಷಿಸುವ ಅತ್ಯಾಧುನಿಕ ವ್ಯವಸ್ಥೆಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುತ್ತಿದೆ ಎಂದು ಕೃಷ್ಣಭೈರೇಗೌಡ ವಿವರಿಸಿದರು.




