ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಹಾಗೂ ಭಾವುಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ರಾಜಕೀಯ ಜೀವನ, ಸಾಧನೆ ಮತ್ತು ತಮ್ಮೊಂದಿಗಿನ ಒಡನಾಟವನ್ನು ನೆನೆದು ಕೃತಜ್ಞತೆ ಸಲ್ಲಿಸಿದ್ದಾರೆ.
"ದೇವರು ವರ ಅಥವಾ ಶಾಪಗಳನ್ನು ನೀಡುವುದಿಲ್ಲ, ಬದಲಿಗೆ ಅವಕಾಶಗಳನ್ನು ಮಾತ್ರ ನೀಡುತ್ತಾನೆ. ಆ ಅವಕಾಶಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದು ಮುಖ್ಯ" ಎಂಬ ನುಡಿಯೊಂದಿಗೆ ಡಿ.ಕೆ. ಶಿವಕುಮಾರ್ ತಮ್ಮ ಸಂದೇಶವನ್ನು ಆರಂಭಿಸಿದ್ದಾರೆ.
ಮೈಸೂರಿನ ಹಳ್ಳಿಯಿಂದ ಸಿಎಂ ಗದ್ದುಗೆಯವರೆಗೆ:
ಮೈಸೂರಿನ ಸಾಮಾನ್ಯ ಹಳ್ಳಿಯಿಂದ ಬಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ರಾಜ್ಯ ಮುನ್ನಡೆಸಿದ ಸಿದ್ದರಾಮಯ್ಯ ಅವರ ಜೀವನ ಪ್ರಯಾಣವು ಅವರ ಸ್ಥಿತಿಸ್ಥಾಪಕತ್ವ, ಪರಿಶ್ರಮ ಮತ್ತು ಸಾಮಾಜಿಕ ನ್ಯಾಯದ ಬದ್ಧತೆಗೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಡಿ.ಕೆ. ಶಿವಕುಮಾರ್ ಶ್ಲಾಘಿಸಿದ್ದಾರೆ.
ಐದು ದಶಕಗಳ ಸಾರ್ವಜನಿಕ ಸೇವೆ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಿರುವ ಈ ಸಂದರ್ಭದಲ್ಲಿ, ಕರ್ನಾಟಕದ ಜನತೆಗೆ ಅವರು ನೀಡಿದ ಸುದೀರ್ಘ ಸೇವೆ ಮತ್ತು ನಾಯಕತ್ವಕ್ಕೆ ಡಿಸಿಎಂ ಹೃತ್ಪೂರ್ವಕ ಕೃತಜ್ಞತೆ ಹಾಗೂ ಗೌರವ ಸಮರ್ಪಿಸಿದ್ದಾರೆ. ಸಿದ್ದರಾಮಯ್ಯ ಅವರ ಅವಧಿಯಲ್ಲಿ ಜಾರಿಗೆ ಬಂದ ಸಾರ್ವಜನಿಕ ಕಲ್ಯಾಣ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳು ಕರ್ನಾಟಕದ ಇತಿಹಾಸದಲ್ಲಿ ಪ್ರಮುಖ ಅಧ್ಯಾಯಗಳಾಗಿ ಉಳಿಯಲಿವೆ ಎಂದಿದ್ದಾರೆ.
ಕೈ ಹಿಡಿದು ನಡೆಸಿದ ಶಕ್ತಿ: "2020ರಲ್ಲಿ ನನಗೆ ಕೆಪಿಸಿಸಿ ಅಧ್ಯಕ್ಷ ಜವಾಬ್ದಾರಿ ನೀಡಿದಾಗಿನಿಂದಲೂ ಸಿದ್ದರಾಮಯ್ಯ ಅವರು ನನ್ನ ಪಕ್ಕದಲ್ಲಿ ಗಟ್ಟಿಯಾದ ಬೆಂಬಲದ ಕಂಬವಾಗಿ (ಪಿಲ್ಲರ್ ಆಫ್ ಸ್ಟ್ರೆಂತ್) ನಿಂತಿದ್ದಾರೆ. ನಾವಿಬ್ಬರೂ ಹೆಗಲಿಗೆ ಹೆಗಲು ಕೊಟ್ಟು ಪಕ್ಷವನ್ನು ಬಲಪಡಿಸಲು ಮತ್ತು ಅದರ ದೂರದೃಷ್ಟಿಯನ್ನು ಜನರಿಗೆ ತಲುಪಿಸಲು ಒಟ್ಟಾಗಿ ಶ್ರಮಿಸಿದ್ದೇವೆ" ಎಂದು ಸ್ಮರಿಸಿದ್ದಾರೆ.
ಮಾರ್ಗದರ್ಶನ ಮುಂದುವರಿಯಲಿ: ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು ನನ್ನ ಸೌಭಾಗ್ಯ. ಅವರ ಅನುಭವ, ಬುದ್ಧಿವಂತಿಕೆ ಮತ್ತು ರಾಜಕೀಯ ದೂರದೃಷ್ಟಿಯಿಂದ ನಾನು ನಿರಂತರವಾಗಿ ಕಲಿಯುತ್ತಿದ್ದೇನೆ. ಮುಂದಿನ ದಿನಗಳಲ್ಲೂ ಕರ್ನಾಟಕದ ಪ್ರಗತಿ ಮತ್ತು ಕಲ್ಯಾಣಕ್ಕಾಗಿ ಶ್ರಮಿಸಲು ಅವರ ಮಾರ್ಗದರ್ಶನ ನಮಗೆಲ್ಲರಿಗೂ ಪ್ರೇರಣೆಯಾಗಲಿದೆ ಎಂದು ಆಶಿಸಿದ್ದಾರೆ.
"ವೇಗವಾಗಿ ನಡೆಯಬೇಕಾದರೆ ಒಬ್ಬರೇ ನಡೆ, ದೂರದ ಹಾದಿ ಸಾಗಬೇಕಾದರೆ ಒಟ್ಟಾಗಿ ನಡೆ" ಎಂಬ ಗಾದೆ ಮಾತನ್ನು ಉಲ್ಲೇಖಿಸಿರುವ ಡಿ.ಕೆ. ಶಿವಕುಮಾರ್, ಕರ್ನಾಟಕದ ಜನತೆಯ ಸೇವೆಗಾಗಿ ಸಿದ್ದರಾಮಯ್ಯ ಅವರೊಂದಿಗೆ ಒಟ್ಟಾಗಿ ಮುನ್ನಡೆಯುವ ಈ ಪಯಣ ಮುಂದೆಯೂ ಮುಂದುವರಿಯಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅವರ ನಿರ್ಗಮನದ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ನೀಡಿರುವ ಈ ಜಂಟಿ ನಾಯಕತ್ವದ ಸಂದೇಶ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದೆ.



