ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಸ್ಥಳೀಯ ಕಲಾವಿದರನ್ನು ದೇಶ ವಿದೇಶಗಳಿಗೆ ಕಳಿಸುವ ಒಡಂಬಡಿಕೆಯಾಗಿರುವುದರಿಂದ ಪಾಸ್ಪೋರ್ಟ್ಗಳನ್ನು ಮಾಡಿಸಿಕೊಳ್ಳುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್ ಕಲಾವಿದರಿಗೆ ತಿಳಿಸಿದರು.
ಧ್ವನಿ ಗ್ರಾಮೀಣಾಭಿವೃದ್ದಿ ಮತ್ತು ಸಾಂಸ್ಕೃತಿಕ ಕಲಾ ಸಂಘ ಹುಲ್ಲೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಸಹಯೋಗದೊಂದಿಗೆ ಮಠದಕುರುಬರಹಟ್ಟಿಯಲ್ಲಿರುವ ಬಸವೇಶ್ವರ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಜನಪದ ಸಾಂಸ್ಕೃತಿಕ ಉತ್ಸವ-೨೦೨೬ ಹಾಗೂ ಕಲಾವಿದರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜನಪದ ಕಲಾವಿದರು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಬೇಕಾದರೆ ವೇದಿಕೆ ಮುಖ್ಯ. ರಾಜ್ಯದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಕಲೆಗಳಿವೆ. ಕರ್ನಾಟಕದಲ್ಲಿ ಕಲೆಯನ್ನು ಉಳಿಸಲು ದೊಡ್ಡ ವಿದ್ವಾಂಸರುಗಳು ಶ್ರಮಿಸಿದ್ದಾರೆ. ಕಲೆ ಬದುಕಿನ ಒಂದು ಭಾಗ. ಪಾರಂಪರಿಕ ಕಲೆಯನ್ನು ಉಳಿಸಿ ಪ್ರದರ್ಶಿಸಬೇಕಾಗಿರುವುದರಿಂದ ರೀಲ್ಸ್ ಬೇಕು. ಸ್ಥಳೀಯ ಕಲಾವಿದರು ಹೊರದೇಶಗಳಿಗೆ ಹೋಗುವ ಅವಕಾಶವಿರುವುದರಿಂದ ಪಾಸ್ಪೋರ್ಟ್ಗಳನ್ನು ಮಾಡಿಸಿಕೊಳ್ಳುವಂತೆ ಡಾ.ಬಿ.ಎಂ.ಗುರುನಾಥ್ ಮನವಿ ಮಾಡಿದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಎಸ್.ವಿಜಯಕುಮಾರ್ ಮಾತನಾಡಿ ಕಲೆಗೆ ಪ್ರೇಕ್ಷಕರ ಕೊರತೆಯಿರುವುದರಿಂದ ಕಲಾವಿದರ ಬದುಕು ಕಷ್ಟದಲ್ಲಿದೆ. ಜಾನಪದ ಹಾಡಿಗೂ ಚಿತ್ರಗೀತೆಗಳಿಗೂ ವ್ಯತ್ಯಾಸವಿದೆ. ಜನಪದ ಕಲೆಯ ಮಹತ್ವವನ್ನು ಇಂದಿನ ಮಕ್ಕಳಿಗೆ ತಿಳಿಸಬೇಕಾಗಿರುವುದರಿಂದ ಗದ್ಯ ಪಠ್ಯದ ರೂಪದಲ್ಲಿ ಅಳವಡಿಸಬೇಕಿದೆ. ಜನಪದ ಗೀತೆಯಲ್ಲಿ ಹಲವಾರು ಪ್ರಕಾರಗಳಿವೆ. ಹಳ್ಳಿಗಾಡಿನಿಂದ ಹುಟ್ಟಿಕೊಂಡಿರುವ ಜಾನಪದ ಬೇಗನೆ ಹೃದಯವನ್ನು ತಟ್ಟುತ್ತದೆ. ಇಂತಹ ಕಲೆಯನ್ನು ಉಳಿಸಿ ಬೆಳೆಸಬೇಕಿದೆ ಎಂದು ಹೇಳಿದರು.
ಕಡ್ಡೆಗುದ್ದು ಆಂಜನೇಯಸ್ವಾಮಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಡಾ.ಮಹೇಶ್ ಮಾತನಾಡುತ್ತ ಮಾನವೀಯತೆ ಮರೆತಿರುವ ಇಂದಿನ ಕಾಲಘಟ್ಟದಲ್ಲಿ ಧ್ವನಿ ಗ್ರಾಮೀಣಾಭಿವೃದ್ದಿ ಸಂಸ್ಥೆ ಕೇವಲ ಸಂಸ್ಥೆಯಾಗಿರದೆ ಕಲಾವಿದರಿಗೆ ಉಸಿರಾಗಿದೆ. ಕರ್ನಾಟಕದಲ್ಲಿ ವಿಶಿಷ್ಟವಾದ ಜನಪದ ಕಲೆಯಿದೆ. ಜನಪದ ಮೂಲೆಗುಂಪಾಗುತ್ತಿರುವುದರಿಂದ ಕಲಾವಿದರು ಬಡತನದಲ್ಲಿದ್ದಾರೆ. ನಿಮ್ಮಲ್ಲಿರುವ ಕಲೆಯನ್ನು ಫೇಸ್ಬುಕ್, ಯೂಟೂಬ್, ರೀಲ್ಸ್ನಲ್ಲಿ ಪ್ರಸಾರ ಮಾಡಿದಾಗ ಕಲಾವಿದರ ಬದುಕು ಸುಧಾರಣೆಯಾಗುತ್ತದೆಂದರು.
ಕಲಾವಿದರ ಜೀವನ ದುಸ್ಥಿತಿಯಲ್ಲಿರುವುದರಿಂದ ದುಶ್ಚಟಗಳಿಂದ ದೂರವಿರಿ. ಬದ್ದತೆಯಿಂದ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯ. ಕಲಾವಿದ ಮನದಾಳದ ನೋವನ್ನು ಧ್ವನಿ ಮೂಲಕ ಹೊರ ಹಾಕುತ್ತಾನೆಂದು ನುಡಿದರು.
ಧ್ವನಿ ಗ್ರಾಮೀಣಾಭಿವೃದ್ದಿ ಮತ್ತು ಸಾಂಸ್ಕೃತಿಕ ಕಲಾ ಸಂಘದ ಕಾರ್ಯದರ್ಶಿ ಕೃಷ್ಣಪ್ಪ ಮಾತನಾಡುತ್ತ ಮೊಬೈಲ್ ಟಿವಿ. ಹಾವಳಿಯಿಂದ ಜನಪದ ಕಲೆ ದಿನದಿಂದ ದಿನೆ ನಶಿಸುತ್ತಿದೆ. ಬಾಯಿಂದ ಬಾಯಿಗೆ ಹರಡುವ ಜನಪದವನ್ನು ಸುಗ್ಗಿ ಕಾಲದಲ್ಲಿ ಹಾಡಲಾಗುತ್ತಿತ್ತು. ಭಜನೆ, ಕೋಲಾಟ, ತಮಟೆ, ಉರುಮೆ, ಸೋಭಾನೆ ಪದ, ಬೀಸುವ ಕಲ್ಲು ಮೂಲಕ ಜಾನಪದ ಹುಟ್ಟಿದೆ. ಜಿಲ್ಲೆಯಲ್ಲಿ ಅನೇಕ ಜನಪದ ಕಲೆಗಳಿವೆ. ಕಲೆಗೆ ಶಿಕ್ಷಣ ಬೇಕಿಲ್ಲ. ಸಾಕಷ್ಟು ಅವಿದ್ಯಾಂತರು ಕಲೆಯಲ್ಲಿ ನಿಪುಣರಾಗಿದ್ದಾರೆ. ಇಂದಿನ ಯುವ ಪೀಳಿಗೆ ಜಾನಪದ ಕಲೆಯನ್ನು ಕಲಿತು ಉಳಿಸಿ ಬೆಳೆಸಬೇಕಿದೆ ಎಂದರು.
ಬಸವೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷೆ ಪ್ರಭಾವತಿ ಶಂಕರಪ್ಪ ಅಧ್ಯಕ್ಷತೆ ವಹಿಸಿದ್ದರು. ಬೆಸ್ಕಾಂ ಜಾಗೃತದಳದ ಸಬ್ಇನ್ಸ್ಪೆಕ್ಟರ್ ಜಿ.ಯಶೋಧಮ್ಮ, ಬ್ಯಾಲಹಾಳ್ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹೆಚ್.ಡಿ.ವಿರುಪಾಕ್ಷಪ್ಪ, ಧ್ವನಿ ಗ್ರಾಮೀಣಾಭಿವೃದ್ದಿ ಮತ್ತು ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷೆ ನೀಲಮ್ಮ ಎ.ಕೃಷ್ಣಪ್ಪ, ಗಾಯತ್ರಿ ಶಿವರಾಂ ಇವರುಗಳು ವೇದಿಕೆಯಲ್ಲಿದ್ದರು.
ಎಂ.ಕೆ.ಹರೀಶ್ ಮತ್ತು ತಂಡ, ಚನ್ನಬಸಪ್ಪ ಮತ್ತು ತಂಡ, ಕೆ.ಗಂಗಾಧರ್ ಮತ್ತು ತಂಡದವರು ಜಾನಪದ ಹಾಡುಗಳನ್ನು ಹಾಡಿ ನೆರೆದಿದ್ದವರನ್ನು ರಂಜಿಸಿದರು.
ಎಲ್.ವಾಗೇಶ್ ಮತ್ತು ತಂಡದ ನಾಸಿಕ್ ಡೋಲ್, ಉದಯಕುಮಾರ್ ಮತ್ತು ತಂಡದಿಂದ ಕಹಳೆ, ಎನ್.ಡಿ.ತಿಪ್ಪೇಸ್ವಾಮಿ ಮತ್ತು ತಂಡದಿಂದ ಉರುಮೆ, ಅಂಜಿನ್ಕುಮಾರ್ ಮತ್ತು ತಂಡದ ತಮಟೆ, ಜಿ.ಟಿ.ಪಾತಯ್ಯ ಮತ್ತು ತಂಡದ ಪೋತರಾಜ ಕುಣಿತ ಮನಮೋಹಕವಾಗಿತ್ತು.



