ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ಆರ್ಎಸ್ಎಸ್ ಸಂಸ್ಥೆಯನ್ನು ನಾಶಪಡಿಸಲು ಪ್ರಿಯಾಂಕ್ ಖರ್ಗೆ ಅವರ ಅಪ್ಪನಿಂದಲೇ ಏನೂ ಮಾಡಲು ಸಾಧ್ಯವಾಗಿಲ್ಲ. ಸಮಾಜಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡಬೇಡಿ, ಆ ಬೆಂಕಿ ನಿಮ್ಮನ್ನೇ ಸುಡುತ್ತದೆ" ಎಂದು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಸಿ.ಟಿ.ರವಿ, ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆಡಳಿತ ವೈಖರಿ, ಭ್ರಷ್ಟಾಚಾರದ ಆರೋಪ ಮತ್ತು ಕಾಂಗ್ರೆಸ್ನ ರಾಜಕೀಯ ಇತಿಹಾಸವನ್ನು ಕೆದಕಿ ತೀವ್ರವಾಗಿ ಕಿಡಿಕಾರಿದರು.
'ಆರ್ಎಸ್ಎಸ್ ದೇಶದ್ರೋಹಿ ಸಂಘಟನೆಯಲ್ಲ':
"ಹಿಂದೆ ಜವಾಹರಲಾಲ್ ನೆಹರು ಅವರೇ 'ನಾನು ಆರ್ಎಸ್ಎಸ್ ಅನ್ನು ಹತ್ತಿಕ್ಕುತ್ತೇನೆ' ಎಂದಿದ್ದರು. ಆದರೆ ಅವರಿಂದಲೇ ಅದು ಸಾಧ್ಯವಾಗಲಿಲ್ಲ. ಆರ್ಎಸ್ಎಸ್ ರಾಜಕೀಯ ಪ್ರೇರಿತ ಸಂಘಟನೆಯೂ ಅಲ್ಲ, ನೋಂದಣಿ ಮಾಡಿಕೊಳ್ಳಲು ಇದೇನು ವ್ಯಾವಹಾರಿಕ ಸಂಸ್ಥೆಯೂ ಅಲ್ಲ. ಇವು ನಿಮ್ಮ ಪಕ್ಷದ ಅಧಿಕಾರದ ಕೊನೆಯ ದಿನಗಳು. ನಿಮ್ಮಪ್ಪನಾಣೆಗೂ ನೀವು ಮತ್ತೆ ಅಧಿಕಾರಕ್ಕೆ ಬರಲ್ಲ" ಎಂದು ಸಿ.ಟಿ.ರವಿ ಆಕ್ರೋಶ ಹೊರಹಾಕಿದರು.
ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, "ರಾಜ್ಯದಲ್ಲಿ ಅಕ್ರಮ ಬಾಂಗ್ಲಾ ನಿವಾಸಿಗಳಿದ್ದಾರೆ, ಮಾದಕ ವ್ಯಸನದ ಜಾಲ ಹೆಚ್ಚುತ್ತಿದೆ, ಮಹಿಳೆಯರು ನಾಪತ್ತೆಯಾಗುತ್ತಿದ್ದಾರೆ ಮತ್ತು ಇಲ್ಲಿಯೇ ಇದ್ದು ಬಾಂಬ್ ತಯಾರಿಸುವವರಿದ್ದಾರೆ. ಮೊದಲು ಆ ಕಡೆ ಗಮನ ಕೊಡಿ. ನೀವು ಗೃಹ ಸಚಿವರಂತೆ ವರ್ತಿಸಿ, ಗೂಂಡಾಗಳ ತರ ಅಲ್ಲ. ಈಗ ದಬ್ಬಾಳಿಕೆ ನಡೆಸಿದರೆ ರಾಜ್ಯದ ಪರಿಸ್ಥಿತಿ ಪಶ್ಚಿಮ ಬಂಗಾಳದಂತಾಗಬಹುದು" ಎಂದು ಎಚ್ಚರಿಸಿದರು.
ಮೋದಿ-ದೇವೇಗೌಡರ ಸಂಬಂಧ ವ್ಯಾವಹಾರಿಕವಲ್ಲ:
ದೇವೇಗೌಡರ ಕುರಿತಾದ ಕಾಂಗ್ರೆಸ್ ಟೀಕೆಗಳಿಗೆ ಉತ್ತರಿಸಿದ ಸಿ.ಟಿ.ರವಿ, "ದೇವೇಗೌಡರಿಗೆ ಗೌರವ ಅಧಿಕಾರದಿಂದ ಬಂದಿದ್ದಲ್ಲ, ಅದು ಅವರಿಗೆ ಸಹಜವಾಗಿ ಬಂದಿರುವುದು. ಪ್ರಧಾನಿ ಮೋದಿಯವರು ಅವರ ಮೇಲೆ ಸಹಜ ಪ್ರೀತಿ, ವಾತ್ಸಲ್ಯ ತೋರಿಸಿದ್ದಾರೆ. ಇಬ್ಬರ ನಡುವಿನ ಸಂಬಂಧ ವ್ಯಾವಹಾರಿಕವಾದುದಲ್ಲ; ಅದು ಅಣ್ಣ-ತಮ್ಮ, ಅಪ್ಪ-ಮಗನ ರೀತಿಯ ಪವಿತ್ರ ಸಂಬಂಧ. ಈ ಬಗ್ಗೆ ಕಾಂಗ್ರೆಸ್ನವರು ನಮಗೆ ಪಾಠ ಮಾಡಬೇಕಿಲ್ಲ" ಎಂದರು.
ಇದೇ ವೇಳೆ ಕಾಂಗ್ರೆಸ್ ಇತಿಹಾಸವನ್ನು ಟೀಕಿಸಿದ ಅವರು, "ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರ ಅಂತ್ಯ ಸಂಸ್ಕಾರದ ವೇಳೆಯೂ ದ್ವೇಷ ತೀರಿಸಿಕೊಂಡವರು ನೀವು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಅವರನ್ನು ಹೇಗೆ ನಡೆಸಿಕೊಂಡಿದ್ದೀರಿ ಎನ್ನುವುದು ಗೊತ್ತಿದೆ. ನೆಹರು ಖಾಂದಾನ್ಗೆ ನೂರಾರು ಎಕರೆ ಜಾಗ ನೀಡಿದವರು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮಾಧಿಗೆ ದೆಹಲಿಯಲ್ಲಿ ಸ್ಥಳ ಕೊಡಲಿಲ್ಲ" ಎಂದು ಗಂಭೀರ ಆರೋಪ ಮಾಡಿದರು.
40% ಅಂದವರಿಗೆ ಈಗ 60% ಕಮಿಷನ್ ಮುನ್ನಡೆ:
ರಾಜ್ಯದಲ್ಲಿ ತಡವಾಗುತ್ತಿರುವ ಖಾತೆ ಹಂಚಿಕೆ ಮತ್ತು ಭ್ರಷ್ಟಾಚಾರದ ಬಗ್ಗೆ ಮಾತನಾಡಿದ ಅವರು, "ಖಾತೆ ಹಂಚಿಕೆ ವಿಳಂಬದಿಂದ ರಾಜ್ಯದ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಸಿಎಂ ಅವರು ಇದನ್ನು ಬೇಗ ಬಗೆಹರಿಸಲಿ. ಹಿಂದೆ 40% ಕಮಿಷನ್, ಪೇ-ಸಿಎಂ ಎಂದು ಬೊಬ್ಬೆ ಹೊಡೆದಿದ್ದ ಕೈ ನಾಯಕರ ಮೇಲೆ, ಈಗ ಗುತ್ತಿಗೆದಾರರೇ 60% ಕಮಿಷನ್ ಆರೋಪ ಮಾಡುತ್ತಿದ್ದಾರೆ. ಇದರಿಂದ ಕರ್ನಾಟಕಕ್ಕೆ ಕೆಟ್ಟ ಹೆಸರು ಬರುತ್ತಿದೆ. ನೀವು ಭ್ರಷ್ಟಾಚಾರ ಕಡಿಮೆ ಮಾಡಿ ಅಧಿಕಾರಿಗಳ ನಟ್ಟು-ಬೋಲ್ಟು ಟೈಟ್ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ಜನರೇ ನಿಮ್ಮ ನಟ್ಟು-ಬೋಲ್ಟು ಟೈಟ್ ಮಾಡಲಿದ್ದಾರೆ" ಎಂದು ವ್ಯಂಗ್ಯವಾಡಿದರು.
ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಜೊತೆ ತಂತ್ರಗಾರಿಕೆ:
ವಿಧಾನ ಪರಿಷತ್ ಚುನಾವಣೆಗೆ ಎನ್ಡಿಎ ಮೈತ್ರಿಕೂಟದ ಮೂರನೇ ಅಭ್ಯರ್ಥಿ ಕಣಕ್ಕಿಳಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಸದ್ಯ ಕಾಂಗ್ರೆಸ್ಗೂ ಪೂರ್ಣ ಬಹುಮತ ಇಲ್ಲ. ಬಿಜೆಪಿಯ ಹೆಚ್ಚುವರಿ ಮತಗಳನ್ನು ನಾವು ಜೆಡಿಎಸ್ಗೆ ನೀಡಲಿದ್ದೇವೆ. ಜೆಡಿಎಸ್ ನಾಯಕರು ಸರಿಯಾದ ತಂತ್ರಗಾರಿಕೆ ನಡೆಸಿ ಯಶಸ್ವಿಯಾದರೆ, ಈ ಚುನಾವಣೆಯಲ್ಲಿ ಮೈತ್ರಿಕೂಟ ಗೆಲುವು ಸಾಧಿಸುವುದು ಖಚಿತ" ಎಂದು ವಿಶ್ವಾಸ ವ್ಯಕ್ತಪಡಿಸಿದರು.



