ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆದಾಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಅಕ್ರಮ ಆಸ್ತಿ ಗಳಿಸಿದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಅವರ ಕುಟುಂಬ ಸದಸ್ಯರಿಗೆ ಹೈಕೋರ್ಟ್ ಭಾರಿ ಹಿನ್ನಡೆ ನೀಡಿದೆ. ಪ್ರಕರಣದ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಅಷ್ಟೇ ಅಲ್ಲದೆ, ತಮ್ಮ ವಿರುದ್ಧದ ಎಫ್ಐಆರ್ ರದ್ದು ಕೋರಿ ಈಶ್ವರಪ್ಪ ಕುಟುಂಬ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಅವರ ಪುತ್ರ ಕೆ.ಇ. ಕಾಂತೇಶ್ ಮತ್ತು ಸೊಸೆ ಶಾಲಿನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠವು ಈ ಪ್ರಮುಖ ಆದೇಶ ಪ್ರಕಟಿಸಿದೆ.
ತನಿಖೆಗೆ ಸಹಕರಿಸಿದರೆ ಬಂಧನವಿಲ್ಲ!:
ವಿಚಾರಣೆ ವೇಳೆ ಅರ್ಜಿದಾರರು ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಸೂಚಿಸಿದ ನ್ಯಾಯಪೀಠ, ಒಂದು ವೇಳೆ ಆರೋಪಿಗಳು ತನಿಖೆಗೆ ಸಹಕರಿಸಿದರೆ ಅವರನ್ನು ಬಂಧಿಸಬಾರದು ಎಂದು ಲೋಕಾಯುಕ್ತ ಪೊಲೀಸರಿಗೆ ನಿರ್ದೇಶನ ನೀಡಿದೆ. ಲೋಕಾಯುಕ್ತ ವಕೀಲರು ಸಹ "ಆರೋಪಿಗಳು ತನಿಖೆಗೆ ಸಹಕರಿಸಿದರೆ ಬಂಧಿಸುವುದಿಲ್ಲ" ಎಂಬ ವಾಗ್ದಾನವನ್ನು ನ್ಯಾಯಾಲಯದ ಮುಂದೆ ದಾಖಲಿಸಿದ್ದಾರೆ.
ಕೋರ್ಟ್ನಲ್ಲಿ ನಡೆದ ವಾದ-ಪ್ರತಿವಾದವೇನು?:
ಈಶ್ವರಪ್ಪ ಪರ ವಕೀಲರ ವಾದ: ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಅವರು ವಾದ ಮಂಡಿಸಿ, "ಪ್ರಸ್ತುತ ದೇಶದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಜಾರಿಯಲ್ಲಿದೆ. ಇದರ ಪ್ರಕಾರ ಖಾಸಗಿ ದೂರು ದಾಖಲಾದ ಬಳಿಕ ಆರೋಪಿಗಳನ್ನು ವಿಚಾರಣೆ ನಡೆಸಿಯೇ ತನಿಖೆಗೆ ಆದೇಶಿಸಬೇಕು. ಆದರೆ ಇಲ್ಲಿ ಹಳೆಯ ಸಿಆರ್ಪಿಸಿ (CrPC) ಕಾಯ್ದೆಯಡಿ ತನಿಖೆಗೆ ಆದೇಶಿಸಿರುವುದು ಸುಪ್ರೀಂಕೋರ್ಟ್ ನಿಯಮಗಳಿಗೆ ವಿರುದ್ಧವಾಗಿದೆ. ಅಲ್ಲದೆ ಖಾಸಗಿ ದೂರಿನಲ್ಲಿ ಆಸ್ತಿಯ ನಿಖರ ವಿವರಗಳ (ಚೆಕ್ ಲಿಸ್ಟ್) ಮಾಹಿತಿ ಇಲ್ಲ" ಎಂದು ತನಿಖೆ ರದ್ದತಿಗೆ ಕೋರಿದರು.
ಲೋಕಾಯುಕ್ತ ಪರ ವಕೀಲರ ವಾದ: ಲೋಕಾಯುಕ್ತ ಪರ ವಕೀಲ ವೆಂಕಟೇಶ್ ಅರಬಟ್ಟಿ ಅವರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಯಾವುದೇ ಕಾನೂನು ದೋಷಗಳಿಲ್ಲ ಎಂದು ವಾದಿಸಿದರು.
ನ್ಯಾಯಪೀಠದ ತೀರ್ಪು: "ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿ 12 ವರ್ಷಗಳು ಕಳೆಯುತ್ತಿವೆ. ದೂರು ದಾಖಲಾದ ಸಂದರ್ಭದಲ್ಲಿ ಹೊಸ ಬಿಎನ್ಎಸ್ಎಸ್ ಕಾಯ್ದೆ ಜಾರಿಯಲ್ಲಿರಲಿಲ್ಲ. ಹೀಗಾಗಿ ಸಿಆರ್ಪಿಸಿ ಅಡಿಯಲ್ಲೇ ತನಿಖೆಗೆ ಆದೇಶಿಸಿರುವುದರಲ್ಲಿ ಯಾವುದೇ ಕಾನೂನು ಪ್ರಕ್ರಿಯೆಯ ಉಲ್ಲಂಘನೆಯಾಗಿಲ್ಲ" ಎಂದು ಸ್ಪಷ್ಟಪಡಿಸಿದ ನ್ಯಾಯಮೂರ್ತಿಗಳು, ಈಶ್ವರಪ್ಪ ಅವರ ಅರ್ಜಿಯನ್ನು ವಜಾಗೊಳಿಸಿದರು.
ಏನಿದು ಅಕ್ರಮ ಆಸ್ತಿ ಹಗರಣ? (ಪ್ರಕರಣದ ಹಿನ್ನೆಲೆ):
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು 2006ರಲ್ಲಿ ರಾಜ್ಯ ಜಲಸಂಪನ್ಮೂಲ ಸಚಿವರಾದ ಬಳಿಕ, ಕೇವಲ ಮೂರೂವರೆ ವರ್ಷಗಳ ಅವಧಿಯಲ್ಲಿ ಶಿವಮೊಗ್ಗದಲ್ಲಿ ತಮ್ಮ ಪುತ್ರ ಕೆ.ಇ. ಕಾಂತೇಶ್ ಮತ್ತು ಸೊಸೆ ಶಾಲಿನಿ ಅವರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚರ ಹಾಗೂ ಸ್ಥಿರಾಸ್ತಿಗಳನ್ನು ಖರೀದಿಸಿದ್ದಾರೆ. ಇವೆಲ್ಲವೂ ಅವರ ಅಧಿಕೃತ ಆದಾಯಕ್ಕಿಂತ ಶೇ. 100ರಷ್ಟು ಅಧಿಕವಾಗಿದೆ. ಅಲ್ಲದೆ, ಈ ಮೂವರು ಜಂಟಿಯಾಗಿ ಹಲವು ಶೈಕ್ಷಣಿಕ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ಆಟೋ ಮೊಬೈಲ್ ಶೋರೂಂಗಳನ್ನು ಆರಂಭಿಸಿದ್ದಾರೆ ಎಂದು ಆರೋಪಿಸಿ ವಕೀಲ ಬಿ. ವಿನೋದ್ ಅವರು 2021ರಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.
ಈ ದೂರಿನ ಅನ್ವಯ, ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ವಿವಿಧ ಸೆಕ್ಷನ್ಗಳು ಹಾಗೂ ಐಪಿಸಿ ಸೆಕ್ಷನ್ 420 (ವಂಚನೆ), 120-ಬಿ (ಅಪರಾಧಿಕ ಒಳಸಂಚು) ಅಡಿಯಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಶಿವಮೊಗ್ಗ ಲೋಕಾಯುಕ್ತ ಎಸ್ಪಿಗೆ ವಿಶೇಷ ನ್ಯಾಯಾಲಯವು 2025ರ ಏಪ್ರಿಲ್ 5ರಂದು ಆದೇಶಿಸಿತ್ತು. ಅದರಂತೆ, ಲೋಕಾಯುಕ್ತ ಪೊಲೀಸರು 2025ರ ಜುಲೈ 2ರಂದು ಈಶ್ವರಪ್ಪ ಕುಟುಂಬದ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಈಶ್ವರಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು. ಸದ್ಯ ಹೈಕೋರ್ಟ್ ಕೂಡ ತನಿಖೆಗೆ ಹಸಿರು ನಿಶಾನೆ ತೋರಿರುವುದರಿಂದ ಈಶ್ವರಪ್ಪ ಕುಟುಂಬಕ್ಕೆ ಲೋಕಾಯುಕ್ತ ತನಿಖೆಯ ಬಿಸಿ ಎದುರಾಗುವುದು ಖಚಿತವಾಗಿದೆ.



