ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬಣದ ವತಿಯಿಂದ ತಾಲೂಕಿನ ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಶಾಸಕ ದಿವಂಗತ ಆರ್. ಜಿ.ವೆಂಕಟಾಚಲಯ್ಯನವರ ನುಡಿ ನಮನ ಕಾರ್ಯಕ್ರಮ ನಡೆಯಿತು.
ನುಡಿ ನಮನ ಕಾರ್ಯಕ್ರಮದಲ್ಲಿ ಕರವೇ ಕನ್ನಡಿಗರ ಬಣದ ಸಂಸ್ಥಾಪಕ ಅಧ್ಯಕ್ಷ ಬಿ. ಎಸ್. ಚಂದ್ರಶೇಖರ್ ಮಾತನಾಡಿ ಆರ್. ಜಿ. ವೆಂಕಟಾಚಲಯ್ಯ ನವರು ಒಬ್ಬ ರಾಜಕಾರಣಿ ಎನ್ನುವುದಕ್ಕಿಂತ ಜನಪರ ಕಾಳಜಿಯುಳ್ಳವರಾಗಿ ಜನಪ್ರಿಯರಾಗಿದ್ದರು. ಪಕ್ಷತೀತವಾಗಿದ್ದ ಅವರ ನಡೆ ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಬೇಕು.
ಅವರ ನೆನಪಿಗಾಗಿ ಕರವೇ ಸುಮಾರು ಎಂಟು ವರ್ಷಗಳ ಹಿಂದೆಯೇ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಅವರ ಹೆಸರಿನಲ್ಲಿ ಸಸಿ ನೆಟ್ಟಿದ್ದು ಅದು ಈಗ ಮರವಾಗಿ ಬೆಳೆದಿದೆ. ಇಂದು ಅವರು ನಮ್ಮೊಂದಿಗಿಲ್ಲದಿದ್ದರೂ ಅವರ ನೆನಪು ನಮ್ಮ ಜೊತೆ ಸದಾ ಇರಲಿ ಎಂಬ ಕಾರಣಕ್ಕೆ ಮರಕ್ಕೆ ಆರ್. ಜಿ. ವೆಂಕಟಾಚಲಯ್ಯ ಎಂದು ಹೆಸರಿಟ್ಟು ಬೆಳೆಸಿದ್ದು, ಆ ಮರದಲ್ಲಿ ಆರ್. ಜಿ. ರವರನ್ನು ಕಾಣಬಹುದು. ಅದಕ್ಕಾಗಿ ಅವರ ಹೆಸರಿನ ಮರದ ಮುಂದೆ ಅವರಿಗೆ ಭಾವಪೂರ್ಣ ಶ್ರದ್ದಾoಜಲಿಯನ್ನು ಅರ್ಪಿಸುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರವೇ ಸಂಘಟನಾ ಕಾರ್ಯದರ್ಶಿ ಅರವಿಂದ್, ಪರಿಸರ ಪ್ರದಾನ ಕಾರ್ಯದರ್ಶಿ ರಮೇಶ್, ತಾಲೂಕು ಮುಖಂಡರಾದ ಪ್ರಕಾಶ್, ಶಿವಾನಂದ್, ಸಂಚಾಲಕ ಪಿ. ವಾಸು, ಜಿಲ್ಲಾಧ್ಯಕ್ಷ ರಂಜಿತ್ ಗೌಡ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಪ್ರದೀಪ್ ಕುಮಾರ್, ಕಾರ್ಯದರ್ಶಿ ತಾಯೆಗೌಡ, ರಾಜೀವ್, ಕಾಂಗ್ರೆಸ್ ಮುಖಂಡ ಮುನಿರಾಜು, ಗಾಂಧಿ ಬಡಾವಣೆಯ ಅಧ್ಯಕ್ಷ ಶಿವಶಂಕರಪ್ಪ, ಪ್ರಕಾಶ್, ಭಗತ್ ಸಿಂಗ್ ಕ್ರೀಡಾಂಗಣದ ನಿರ್ವಾಹಕ ಗುಂಡಣ್ಣ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.



