ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತದ ಪ್ರಮುಖ ನಿಟ್ವೇರ್ ಹಾಗೂ ಉಡುಪು ತಯಾರಿಕಾ ದಿಗ್ಗಜ ಸಂಸ್ಥೆಗಳಲ್ಲಿ ಒಂದಾದ 'ರೂಪಾ & ಕಂಪನಿ ಲಿಮಿಟೆಡ್' ಕರ್ನಾಟಕದಲ್ಲಿ ತನ್ನ ಉತ್ಪಾದನಾ ವಲಯವನ್ನು ವಿಸ್ತರಿಸಲು ಆಸಕ್ತಿ ತೋರಿದ್ದು, ಈ ಸಂಬಂಧ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಕಂಪನಿಯ ಉನ್ನತ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಈ ಸಭೆಯಲ್ಲಿ ರೂಪಾ & ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಸುಮಿತ್ ಖೋವಾಲಾ ಹಾಗೂ ಹಣಕಾಸು ವಿಭಾಗದ ವ್ಯವಸ್ಥಾಪಕ ಪ್ರವೀಣ್ ಅವರೊಂದಿಗೆ ರಾಜ್ಯದಲ್ಲಿನ ಹೊಸ ಕೈಗಾರಿಕಾ ಹೂಡಿಕೆ ಅವಕಾಶಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು.
ಮುಂದಿನ ವಾರವೇ ಜಾಗದ ಪರಿಶೀಲನೆಗೆ ಆಹ್ವಾನ:
"ಕರ್ನಾಟಕದಲ್ಲಿ ಹೂಡಿಕೆ ಮಾಡಲು ಇರುವ ಪೂರಕ ಪರಿಸರ ಹಾಗೂ ಲಭ್ಯವಿರುವ ಕೈಗಾರಿಕಾ ಸೌಲಭ್ಯಗಳ ಬಗ್ಗೆ ಕಂಪನಿಯ ಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಮುಂದಿನ ವಾರವೇ ರಾಜ್ಯಕ್ಕೆ ಭೇಟಿ ನೀಡಿ ಉದ್ಯಮ ಸ್ಥಾಪನೆಗೆ ಸೂಕ್ತವಾದ ಭೂಮಿಯನ್ನು ಪರಿಶೀಲಿಸುವಂತೆ ಕಂಪನಿಯ ನಿಯೋಗಕ್ಕೆ ಆಹ್ವಾನ ನೀಡಲಾಗಿದೆ," ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಈ ಭೂಮಿ ಆಯ್ಕೆ ಪ್ರಕ್ರಿಯೆ ಸೇರಿದಂತೆ ಉದ್ಯಮ ವಿಸ್ತರಣೆಯ ಯೋಜನೆಗೆ ರಾಜ್ಯ ಸರ್ಕಾರದಿಂದ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ ಮತ್ತು ಸೌಲಭ್ಯಗಳನ್ನು ಒದಗಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ.
ಸುಲಭ ಉದ್ಯಮ ಸ್ನೇಹಿ ನೀತಿಗಳ ವಿವರಣೆ:
ರಾಜ್ಯ ಸರ್ಕಾರದ ಪ್ರಗತಿಪರ ಕೈಗಾರಿಕಾ ಪ್ರೋತ್ಸಾಹಧನ ನೀತಿಗಳು ಹಾಗೂ ಉದ್ಯಮ ಸ್ನೇಹಿ ವಾತಾವರಣವನ್ನು ಮತ್ತಷ್ಟು ಸರಳಗೊಳಿಸಲು ತರಲಾಗಿರುವ ಇತ್ತೀಚಿನ ಆಡಳಿತಾತ್ಮಕ ಸುಧಾರಣೆಗಳ ಕುರಿತು ಸಭೆಯಲ್ಲಿ ಕಂಪನಿಯ ಪ್ರತಿನಿಧಿಗಳಿಗೆ ಸಮಗ್ರ ಮಾಹಿತಿ ನೀಡಲಾಯಿತು.
ಪ್ರಸ್ತಾವಿತ ಈ ಬೃಹತ್ ಹೂಡಿಕೆ ಯೋಜನೆಯನ್ನು ಶೀಘ್ರಗತಿಯಲ್ಲಿ ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯ ಕೈಗಾರಿಕಾ ಇಲಾಖೆ ಹಾಗೂ ರೂಪಾ ಕಂಪನಿಯು ನಿರಂತರ ಸಂಪರ್ಕದಲ್ಲಿದ್ದು, ಪರಸ್ಪರ ಸಹಕಾರದೊಂದಿಗೆ ಮುನ್ನಡೆಯಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.



