ಚಂದ್ರವಳ್ಳಿ ನ್ಯೂಸ್, ಮಂಗಳೂರು(ದಕ್ಷಿಣ ಕನ್ನಡ):
ಕರಾವಳಿ ನಗರಿ ಮಂಗಳೂರಿನಲ್ಲಿ ಪ್ರಖ್ಯಾತ ಗುತ್ತಿಗೆ ಕಂಪನಿ ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ ಹಾಗೂ ಬ್ಲ್ಯಾಕ್ಮೇಲ್ ಮಾಡಿ ಬರೋಬ್ಬರಿ 2.77 ಕೋಟಿ ರೂಪಾಯಿ ವಸೂಲಿ ಮಾಡಿದ್ದ ದೊಡ್ಡ ಜಾಲವನ್ನು ಉರ್ವ ಠಾಣಾ ಪೊಲೀಸರು ಪತ್ತೆಹಚ್ಚಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿಯ ಕಂಪನಿಯಲ್ಲೇ ಕೆಲಸ ಮಾಡುತ್ತಿದ್ದ ಜಿತೇಶ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಜಾಮ್ ಅಲಿಯಾಸ್ ಇಬ್ರಾಹಿಂ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಅಶ್ಲೀಲ ಫೋಟೋ ಕಳುಹಿಸಿ ಬೆದರಿಕೆ:
ಈ ಹನಿಟ್ರ್ಯಾಪ್ ಮತ್ತು ಬ್ಲ್ಯಾಕ್ಮೇಲ್ ದಂಧೆ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿತ್ತು. 2024ರ ಜನವರಿಯಲ್ಲಿ ಮೊದಲ ಆರೋಪಿ ಜಿತೇಶ್, ಉದ್ಯಮಿಯ ಮೊಬೈಲ್ಗೆ ಕರೆ ಮಾಡಿ ಅವರ ಕೆಲವು ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಕಳುಹಿಸಿದ್ದ. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಮತ್ತು ಅವರ ಹೆಂಡತಿಗೆ ಕಳುಹಿಸಿಕೊಡುವುದಾಗಿ ಬೆದರಿಸಿ 35 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದ.
ಮರ್ಯಾದೆಗೆ ಹೆದರಿದ ಉದ್ಯಮಿ, 2024ರ ಫೆಬ್ರವರಿಯಲ್ಲಿ ಕದ್ರಿ ಬಳಿಯ ಹೋಟೆಲ್ ಒಂದರಲ್ಲಿ ಜಿತೇಶ್ನನ್ನು ಭೇಟಿಯಾಗಿದ್ದರು. ಅಲ್ಲಿ ಜಿತೇಶ್ ಕೊಲೆ ಬೆದರಿಕೆ ಹಾಕಿದ್ದರಿಂದ, ಉದ್ಯಮಿ ತಲಾ 10 ಲಕ್ಷದ ಎರಡು ಚೆಕ್ ಹಾಗೂ 15 ಲಕ್ಷದ ಒಂದು ಚೆಕ್ ನೀಡಿದ್ದರು. ಅದರಲ್ಲಿ 20 ಲಕ್ಷ ರೂ.ಗಳನ್ನು ಜಿತೇಶ್ ಡ್ರಾ ಮಾಡಿಕೊಂಡಿದ್ದ, ಉಳಿದ 15 ಲಕ್ಷ ರೂ. ಖಾತೆಯಲ್ಲಿ ಹಣವಿಲ್ಲದ ಕಾರಣ ಬೌನ್ಸ್ ಆಗಿತ್ತು.
ರಕ್ಷಣೆಗೆ ಬಂದವನೇ ದೋಚಿದ ಕೋಟ್ಯಂತರ ರೂಪಾಯಿ!:
2024ರ ಮೇ ತಿಂಗಳಲ್ಲಿ ಜಿತೇಶ್ ಉದ್ಯಮಿಯ ಮನೆಗೇ ಬಂದು ಮತ್ತೆ ಹಣಕ್ಕಾಗಿ ಧಮಕಿ ಹಾಕಿದ್ದ. ಇದರಿಂದ ಗಾಬರಿಗೊಂಡ ಉದ್ಯಮಿ, ತನ್ನದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವ ಕಾಂಗ್ರೆಸ್ ನಾಯಕ ನಿಜಾಮ್ಗೆ ವಿಷಯ ತಿಳಿಸಿ ಸಹಾಯ ಕೋರಿದ್ದರು. ಆಗ ಉದ್ಯಮಿಯ ಮನೆಗೆ ಬಂದ ನಿಜಾಮ್, ಜಿತೇಶ್ನನ್ನು ಅಲ್ಲಿಂದ ಕರೆದುಕೊಂಡು ಹೋಗಿ ಬಗೆಹರಿಸುವ ನಾಟಕವಾಡಿದ್ದ.
ಆದರೆ, ಕಥೆ ಅಲ್ಲಿಗೆ ಮುಗಿಯಲಿಲ್ಲ. ಒಂದು ವಾರದ ಬಳಿಕ ಉದ್ಯಮಿ ಬಳಿ ಬಂದ ನಿಜಾಮ್, "ನಿಮ್ಮ ಹೆದರಿಕೆಗೆ ಜಿತೇಶ್ ನಿಮ್ಮ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆ ಡೆತ್ನೋಟ್ ವೈರಲ್ ಆದ್ರೆ ನಿಮಗೆ 10 ವರ್ಷ ಜೈಲು ಶಿಕ್ಷೆ ಆಗುತ್ತದೆ" ಎಂದು ಹೊಸ ಬಾಂಬ್ ಸಿಡಿಸಿ ಹೆದರಿಸತೊಡಗಿದ. ಜೈಲು ಭೀತಿಯಲ್ಲಿದ್ದ ಉದ್ಯಮಿಯಿಂದ ನಿಜಾಮ್, 2024ರ ಜೂನ್ನಿಂದ 2026ರ ಜನವರಿ ತಿಂಗಳವರೆಗೆ ಹಂತಹಂತವಾಗಿ ಬರೋಬ್ಬರಿ 2,57,00,000 ರೂ. (2.77 ಕೋಟಿಗೂ ಹೆಚ್ಚು) ಹಣವನ್ನು ಲೂಟಿ ಮಾಡಿದ್ದ.
ಸತ್ತವನು ಬದುಕಿ ಬಂದಾಗ ಬಯಲಾಯ್ತು ನಕಲಿ ಜಾಲ!:
ಇತ್ತೀಚೆಗೆ ಉದ್ಯಮಿಗೆ ಮಂಗಳೂರು ನಗರದಲ್ಲಿ ಸತ್ತಿದ್ದಾನೆ ಎನ್ನಲಾಗಿದ್ದ ಜಿತೇಶ್ ಜೀವಂತವಾಗಿ ಓಡಾಡುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ನಿಜಾಮ್ನನ್ನು ಪ್ರಶ್ನಿಸಿದಾಗ ಆತ ಉದ್ಯಮಿಗೆ ಮತ್ತೆ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೆ, ಕಳೆದ ಜೂನ್ 1, 2026 ರಂದು ಜಿತೇಶ್ ಮತ್ತೆ ಉದ್ಯಮಿಗೆ ಕರೆ ಮಾಡಿ, ತನ್ನ ಬಳಿ ಇರುವ ಅಶ್ಲೀಲ ವಿಡಿಯೋಗಳನ್ನು ವೈರಲ್ ಮಾಡದಿರಲು ಹೆಚ್ಚುವರಿಯಾಗಿ 10 ಲಕ್ಷ ರೂ. ನೀಡಬೇಕು, ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ.
ಇಬ್ಬರು ಕೆಲಸಗಾರರ ನಿರಂತರ ಬ್ಲ್ಯಾಕ್ಮೇಲ್ ಹಾಗೂ ಕೋಟ್ಯಂತರ ರೂಪಾಯಿ ವಂಚನೆಯಿಂದ ಬೇಸತ್ತ ಉದ್ಯಮಿ ಅಂತಿಮವಾಗಿ ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಇಬ್ಬರೂ ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.
ಯುವ ಕಾಂಗ್ರೆಸ್ ಹುದ್ದೆಯಿಂದ ನಿಜಾಮ್ ಉಚ್ಚಾಟನೆ:
ಹನಿಟ್ರ್ಯಾಪ್ ಪ್ರಕರಣದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಜಾಮ್ ಬಂಧನಕ್ಕೊಳಗಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಪಕ್ಷ, ಆತನ ವಿರುದ್ಧ ಶಿಸ್ತು ಕ್ರಮ ಜರುಗಿಸಿದೆ. ನಿಜಾಮ್ನನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ ಎಂದು ಯುವ ಕಾಂಗ್ರೆಸ್ ದ.ಕ ಜಿಲ್ಲಾ ಅಧ್ಯಕ್ಷ ಇಬ್ರಾಹಿಂ ನವಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



