ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮೂಲತಃ ತಾನೊಬ್ಬ ಬಡವನಾಗಿದ್ದು ದಾನಿಗಳ ನೆರವಿಂದ ಪ್ರತಿನಿತ್ಯ ವಯೋವೃದ್ದರಿಗೆ, ಕಡು ಬಡ ಕುಟುಂಬಗಳಿಗೆ, ಶಾಲಾ ಮಕ್ಕಳಿಗೆ ಯಾವುದೇ ಅಡೆತಡೆಗಳಿಲ್ಲದೇ ನಿರಂತರ ಅನ್ನದಾಸೋಹ ಮಾಡುತ್ತಿರುವ ಅನ್ನದಾಸೋಹಿ ಮಲ್ಲೇಶ್ ಅವರಿಗೆ ಗೌರವ ಡಾಕ್ಟರೇಟ್ ನೀಡಬೇಕು ಎಂಬುದು ನನ್ನ ಅಭಿಪ್ರಾಯ ಎಂದು ವಕೀಲರು ಹಾಗೂ ಚಿರಋಣಿ ಕನ್ನಡ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ರವಿ ಮಾವಿನಕುಂಟೆ ಆಗ್ರಹ ಮಾಡಿದರು.
ತಾಲ್ಲೂಕಿನ ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ದಾನಿಗಳ ಸಹಕಾರದೊಂದಿಗೆ ನಡೆಯುತ್ತಿರುವ ನಿರಂತರ ಅನ್ನದಾಸೋಹ ಕಾರ್ಯಕ್ರಮವು 2300 ನೇ ದಿನವನ್ನು ಪೂರೈಸಿದ ಅಂಗವಾಗಿ ಆಯೋಜನೆ ಮಾಡಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು ಸಾಮಾನ್ಯವಾಗಿ ಒಂದು ಹೊತ್ತಿನ ಊಟ ನೀಡುವುದೇ ಕಷ್ಟ ಸಾಧ್ಯ ಇಂತಹ ಸಂದರ್ಭದಲ್ಲಿ ನೂರಾರು ಜನರಿಗೆ ಕಳೆದ 2300 ದಿನಗಳಿಂದ ನಿರಂತರವಾಗಿ ಆಹಾರ ವಿತರಣೆ ಮಾಡುವ ಮೂಲಕ ಅವರ ಹಸಿವು ನೀಗಿಸುವ ಕಾರ್ಯವನ್ನು ನಿಸ್ವಾರ್ಥ ಮನೋಭಾವದಿಂದ ಮಲ್ಲೇಶ್ ಮತ್ತು ತಂಡ ನಡೆಸಿಕೊಂಡು ಬಂದಿದೆ. ಇದೊಂದು ಸಾಧನೆಯೇ ಸರಿ. ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಡಾಕ್ಟರೇಟ್ ನೀಡಿ ಗುರುತಿಸುವ ವಿಶ್ವವಿದ್ಯಾನಿಲಯಗಳು ಅನ್ನದಾಸೋಹಿ ಮಲ್ಲೇಶ್ ರವರಿಗೆ ಗೌರವ ಡಾಕ್ಟರೇಟ್ ನೀಡುವ ಮೂಲಕ ಗೌರವಿಸಲಿ ಎಂದರು.
ನಿರಂತರ ಅನ್ನದಾಸೋಹ ಕಾರ್ಯಕ್ರಮವು ಕೇವಲ ಅನ್ನದಾಸೋಹಕ್ಕೆ ಸೀಮಿತವಾಗದೆ ಸರ್ಕಾರಿ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಕಲಿಕಾ ಪರಿಕರಗಳನ್ನು ವಿತರಣೆ ಮಾಡುವ ಮೂಲಕ ಸಹಕಾರಿಯಾಗುತ್ತಿದೆ, ಅಲ್ಲದೇ ಅವಕಾಶ ಬಯಸುವ ಹಲವಾರು ಕಲಾವಿದರಿಗೆ ಉತ್ತಮ ವೇದಿಕೆ ಕಲ್ಪಿಸಿ ಕೊಡುವ ಮೂಲಕ ಸಾಂಸ್ಕೃತಿಕ ನೆಲೆಯನ್ನು ಗಟ್ಟಿ ಪಡಿಸುತ್ತದೆ ಎಂದರು.
ಹಿರಿಯ ಚಲನಚಿತ್ರ ನಟಿ ಡಾ. ಪಂಕಜ ಮಾತನಾಡಿ ದೇಶ ಕಾಯುವ ಯೋಧ, ಶಿಕ್ಷಣ ನೀಡುವ ಶಿಕ್ಷಕರು, ಅನ್ನ ನೀಡುವ ರೈತರಿಗೆ ನಾವು ಗೌರವ ಸಲ್ಲಿಸುತ್ತೇವೆ. ಅಂತೆಯೇ ಪ್ರತಿನಿತ್ಯ ನೂರಾರು ಜನರಿಗೆ ಅನ್ನದಾನ ಮಾಡುವ ಮೂಲಕ ಹಸಿವು ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಿರುವ ಅನ್ನದಾಸೋಹಿ ಮಲ್ಲೇಶ್ ಕಾರ್ಯ ಶ್ಲಾಘನೀಯ ಅವರಿಗೆ ಉತ್ತಮ ಗೌರವ ಸಲ್ಲಬೇಕು ಎಂದರು.
ಚಲನಚಿತ್ರ ನಟಿ ಮೇಘನಾ ಶೆಟ್ಟಿಗಾರ್ ಮಾತನಾಡಿ ಈ ಕಾರ್ಯಕ್ರಮವು ಮನಸ್ಸಿಗೆ ಹತ್ತಿರವಾದದ್ದು ಕಾರಣ ಇಲ್ಲಿ ಪ್ರತಿನಿತ್ಯ ನೂರಾರು ನಿರ್ಗತಿಕರ ಕಡುಬಡವರು, ವಯೋವೃದ್ಧರು, ಮಕ್ಕಳು ತಮ್ಮ ಹಸಿವು ನೀಗೀಸಿಕೊಳ್ಳುತ್ತಾರೆ ಅಂತೆಯೇ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಲೆಂದು ಮಲ್ಲೇಶ್ ರವರು ದಾನಿಗಳ ನೆರವಿಂದ ಕಲಿಕಾ ಪರಿಕರಗಳನ್ನು ವಿತರಣೆ ಮಾಡುವ ಮೂಲಕ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರೋತ್ಸಹ ನೀಡುತ್ತಿದ್ದಾರೆ ಅವರ ಈ ಕಾರ್ಯ ಹೀಗೆ ಮುಂದುವರೆಯಲಿ ಎಂದರು.
ಕಾರ್ಯಕ್ರಮದ ಆಯೋಜಕ ಮಲ್ಲೇಶ್ ಮಾತನಾಡಿ ಕಾರ್ಯಕ್ರಮದಲ್ಲಿ ದಾನಿಗಳ ಅವಶ್ಯಕತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಹಾಯ ಹರಸಿ ಬರುವ ಜನರು ಹೆಚ್ಚಾಗುತ್ತಿದ್ದಾರೆ ನಮ್ಮೊಂದಿಗೆ ಕೈಜೋಡಿಸುವ ದಾನಿಗಳಿಗೆ ಸದಾ ಅವಕಾಶ ಕಲ್ಪಿಸಲಾಗುತ್ತದೆ. ನಿಮ್ಮ ಯಾವುದೇ ವಿಶೇಷ ದಿನಗಳನ್ನು ನಮ್ಮ ನಿರಂತರ ಅನಾದಾಸ ಸಮಿತಿಯೊಟ್ಟಿಗೆ ಆಚರಿಸಿ ಹಸಿದವರಿಗೆ ಆಹಾರ ವಿತರಣೆ ಮಾಡುವ ಅರ್ಥಪೂರ್ಣವಾಗಿ ಆಚರಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಈ ವೇಳೆ ದರ್ಗಾಜೋಗಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಶಿಕಲಾ ನಾಗರಾಜ್, ಗ್ರಾಮ ಪಂಚಾಯತಿ ಸದಸ್ಯ ಜೆ ವೈ ಮಲ್ಲಪ್ಪ, ಚಲನಚಿತ್ರ ನಿರ್ದೇಶಕ ವಿಜಯಕುಮಾರ್, ನಮ್ಮ ಜೇನು ಗೂಡು ಬಳಗ ಅಧ್ಯಕ್ಷ ಸೆಲ್ವಂ , ನಮ್ಮ ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಸುರೇಶ್ ಸಿಂಗಂ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಗೋವಿಂದರಾಜು, ಸುರೇಶ್ (ಕನ್ನಡ ಸಾಹಿತ್ಯ ಪರಿಷತ್), ಕೆ.ಶ್ರೀನಿವಾಸ್ (ಪೊಲೀಸ್ ಇಲಾಖೆ), ವಿಜಯ ಕುಮಾರ್ ಬಿರಾದಾರ್,
ಸೂರ್ಯನಾರಾಯಣ, ಕೆ ಸಿ ರುದ್ರೇಶ್, ಕನ್ನಡ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ನಾಗರಾಜ್, ನಮ್ಮ ಕರ್ನಾಟಕ ಜನ ಸೈನ್ಯ ಜಿಲ್ಲಾಧ್ಯಕ್ಷ ಎನ್ ವೈ ನಾಗರಾಜ್, ಮುಖಂಡರಾದ ಕವಿತಾ, ಸುಬ್ರಹ್ಮಣ್ಯ, ಹರ್ಷಿತ್ ರಾಜ್, ಬಾಬುರೆಡ್ಡಿ, ನಮ್ಮ ಊರು ನಮ್ಮ ನೀರು ಸಂಸ್ಥಾಪಕ ಸಂತೋಷ್, ತಬ್ರೇಜ್ ಪಾಷಾ, ಮಂಜುನಾಥ, ಗಂಗಾಧರ, ಅಣ್ಣಯ್ಯ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.



