ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲೂಕಿನ ಕೂನಿಕೆರೆ ಗ್ರಾಮದ ಕನ್ನಡ ಮತ್ತು ಉರ್ದು ಶಾಲೆಯ ಮಕ್ಕಳು, ಪೋಷಕರು ಹಾಗೂ ಸಾರ್ವಜನಿಕರಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ನಾಗರ ಪಂಚಮಿಯ ಬದಲಾಗಿ ವೈಜ್ಞಾನಿಕ ಮನೋಭಾವದ 'ಬಸವ ಪಂಚಮಿ' ಆಚರಿಸುವ ಕುರಿತು ವಿಶೇಷ ಜಾಗೃತಿ ಅಭಿಯಾನ ಆಯೋಜಿಸಲಾಗಿತ್ತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಮಾನವ ಬಂಧುತ್ವ ವೇದಿಕೆಯ ತಾಲೂಕು ಅಧ್ಯಕ್ಷ ಕೂನಿಕೆರೆ ಹೆಚ್.ಎಸ್. ಮಾರುತೇಶ, "ನಾಗರ ಪಂಚಮಿಯ ಹೆಸರಿನಲ್ಲಿ ಜೀವಂತ ಹಾವಿನ ಹುತ್ತಗಳಿಗೆ ಹಾಲು ಎರೆಯುವುದರಿಂದ ಹಾವಿನ ಶ್ವಾಸಕೋಶಕ್ಕೆ ಹಾನಿಯಾಗಿ ಅವುಗಳ ಪ್ರಾಣಕ್ಕೆ ಕಂಠಕ ಎದುರಾಗುತ್ತದೆ. ಇಂತಹ ಮೂಢನಂಬಿಕೆ ಹಾಗೂ ಪ್ರಾಣಿ ಹಿಂಸೆಗೆ ಇತಿಶ್ರೀ ಹಾಡಬೇಕಿದೆ," ಎಂದು ತಿಳಿಸಿದರು.
ಅಲ್ಲದೆ, "ಜಗಜ್ಯೋತಿ ಬಸವಣ್ಣನವರ 'ದಯವೇ ಧರ್ಮದ ಮೂಲವಯ್ಯ' ಎಂಬ ಸಿದ್ಧಾಂತದಂತೆ ಪ್ರತಿಯೊಬ್ಬರೂ ಪ್ರಕೃತಿ ರಕ್ಷಣೆ, ಪ್ರಾಣಿದಯೆ ಹಾಗೂ ವೈಜ್ಞಾನಿಕ ಆಲೋಚನೆಗಳನ್ನು ಜೀವನದಲ್ಲಿ ಬೆಳೆಸಿಕೊಳ್ಳಬೇಕು," ಎಂದು ಕರೆ ನೀಡಿದರು.
ಈ ಜಾಗೃತಿ ಕಾರ್ಯಕ್ರಮದಲ್ಲಿ ಕನ್ನಡ ಶಾಲೆಯ ಮುಖ್ಯೋಪಾಧ್ಯಾಯ ಮಂಜುನಾಥ್, ಉರ್ದು ಶಾಲೆಯ ಮುಖ್ಯೋಪಾಧ್ಯಾಯ ರಮೇಶ್, ಶಿಕ್ಷಕಿಯರಾದ ಸುಧಾಮಣಿ, ಪಾರ್ವತಿ, ಪ್ರೇಮ, ಅಸ್ಮತ್ ಉನ್ನಿಸ, ಬೀಬಿ ಹಾಜಿರಾ ಸೇರಿದಂತೆ ಗ್ರಾಮಸ್ಥರು ಹಾಗೂ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



