ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ ರಾಜ ಕಮಲ್ ರಸ್ತೆಯ ಕಿಲ್ಲಾ ಮಸೀದಿಯಲ್ಲಿ ಮೊಹರಂ ಅಂಗವಾಗಿ ಶಿಯಾ ಮುಸ್ಲಿಂ ಸಮುದಾಯದವರ ಹಸೇನ್ ಹುಸೇನ್ ಆಚರಣೆಯು ಬಹಳ ಶ್ರದ್ದಾಭಕ್ತಿಯಿಂದ ನಡೆಯಿತು.
ಈ ಸಂದರ್ಭದಲ್ಲಿ ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ಮತ್ತು ಅವರ ಪರಿವಾರದವರು ತ್ಯಾಗ ಮಾಡಿದ ಕರ್ಬಲಾ ಕದನವನ್ನು ಸ್ಮರಿಸುವ ಆಚರಣೆಯೇ ಹಸೇನ್-ಹುಸೇನ್ (ಮೊಹರಂ). ಧರ್ಮ, ನ್ಯಾಯ ಮತ್ತು ಸತ್ಯಕ್ಕಾಗಿ ನಡೆದ ಈ ಹೋರಾಟವು ಇಡೀ ಇಸ್ಲಾಮಿಕ್ ಇತಿಹಾಸದಲ್ಲಿ ಅತ್ಯಂತ ಪವಿತ್ರ ಮತ್ತು ದುರಂತದ ಘಟನೆಯಾಗಿದ್ದು, ಮುಸ್ಲಿಂ ಸಮುದಾಯದ ಸಾವಿರಾರು ಭಕ್ತರು ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಿ ಇಮಾಮ್ ಹುಸೇನ್ ಅವರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಿದರು.
ಧರ್ಮಗುರುಗಳ ನೇತೃತ್ವದಲ್ಲಿ ನಡೆದ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಬ್ಲೇಡ್ , ಕತ್ತಿ ಸೇರಿದಂತೆ ಹರಿತ ಆಯುಧಗಳಿಂದ ತಮ್ಮ ಎದೆ ಚಚ್ಚಿಕೊಳ್ಳುವ ಮೂಲಕ ರಕ್ತಾರ್ಪಣೆ ಮಾಡಿ ತಮ್ಮ ಭಕ್ತಿ ಹಾಗೂ ಹರಕೆಯನ್ನು ಸಮರ್ಪಿಸಿದರು.
ಮೊಹರಂ ನಂತರದ ಏಳನೇ ದಿನ ನಡೆಯುವ ಈ ವಿಶಿಷ್ಟ ಆಚರಣೆಗೆ ದೇಶದ ವಿವಿಧ ರಾಜ್ಯಗಳಿಂದ ಹಾಗೂ ವಿದೇಶಗಳಿಂದ ಆಗಮಿಸಿದ್ದ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಶಿಯಾ ಮುಸ್ಲಿಂ ಭಕ್ತರು ಪಾಲ್ಗೊಂಡಿದ್ದರು.
ನಗರದ ಕಿಲ್ಲಾ ಮಸೀದಿಯಲ್ಲಿ ಅಂಜುಮನ್-ಎ-ಹೈದರಿಯ ಸಂಘಟನೆಯ ನೇತೃತ್ವದಲ್ಲಿ ಹಾಗೂ ಹುಸೇನ್ ಕಮಿಟಿಯ ಸಹಯೋಗದಲ್ಲಿ ಈ ಧಾರ್ಮಿಕ ಆಚರಣೆ ಪ್ರತಿವರ್ಷ ನಡೆಯುತ್ತಿದ್ದು, ದಕ್ಷಿಣ ಭಾರತದಲ್ಲಿಯೇ ದೊಡ್ಡಬಳ್ಳಾಪುರ ಈ ಆಚರಣೆಗೆ ಪ್ರಮುಖ ಕೇಂದ್ರವಾಗಿ ಗುರುತಿಸಿಕೊಂಡಿದೆ.
ಕರ್ನಾಟಕದಲ್ಲಿಯೂ ಈ ಸಂಪ್ರದಾಯ ಅತ್ಯಂತ ವೈಭವದಿಂದ ನಡೆಯುವ ಪ್ರಮುಖ ಸ್ಥಳವೆಂದು ಪರಿಗಣಿಸಲಾಗಿದೆ.
ಆಚರಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸ್ ಇಲಾಖೆ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಿತ್ತು. ಕಾರ್ಯಕ್ರಮವು ಶಾಂತಿಯುತವಾಗಿ ಹಾಗೂ ಭಕ್ತಿಭಾವದಿಂದ ನೆರವೇರಿತು.



