ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಸ್ಫೂರ್ತಿದಾಯಕ ಸದ್ಗ್ರಂಥ ಶ್ರೀಮದ್ ಭಗವದ್ಗೀತೆಯಾಗಿದ್ದು ಇದನ್ನು ಪ್ರತಿಯೊಬ್ಬರೂ ಸಮಗ್ರವಾಗಿ ಅಧ್ಯಯನ ಮಾಡಿ ಅದರ ಜೀವನ ಮೌಲ್ಯಗಳನ್ನು ಅನುಷ್ಠಾನಕ್ಕೆ ತಂದರೆ ಜೀವನ ಸಾರ್ಥಕಗೊಳ್ಳುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಅಭಿಷೇಕ್ ಚಕ್ರವರ್ತಿ ತಿಳಿಸಿದರು.
ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಯುವಕ-ಯುವತಿಯರಿಗಾಗಿ ಆಯೋಜಿಸಿದ್ದ ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು "ಶ್ರೀಮದ್ ಭಗವದ್ಗೀತೆ"ಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಪ್ರಾರ್ಥನೆ ಮತ್ತು ಭಜನೆಯನ್ನು ಯತೀಶ್ ಎಂ ಸಿದ್ದಾಪುರ ನಡೆಸಿಕೊಟ್ಟರೆ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ದಿವ್ಯತ್ರಯರಿಗೆ ಮಂಗಳಾರತಿಯನ್ನು ನಡೆಸಿಕೊಟ್ಟರು.
ಸಂನ್ಯಾಸಿ ಗೀತೆಯ ಗಾಯನ ಮತ್ತು ಪ್ರಸಾದ ವಿನಿಯೋಗ ನಡೆಯಿತು.
ತರಗತಿಯಲ್ಲಿ ಚೇತನ್, ಡಾ.ಭೂಮಿಕಾ, ಹೃತಿಕ್, ಚಾರ್ಮಿಶ್ರೀ, ಸೃಷ್ಟಿ, ಮಾನ್ಯ, ದರ್ಶನ, ಸುದೀಪ್ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.


