ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರದ 31ನೇ ಹರಿಶ್ಚಂದ್ರ ಘಾಟ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸಾರ್ವಜನಿಕರ ಮನೆ ಮನೆಗೆ ಭೇಟಿ ನೀಡಿ ಸುಹಾಸ್ ಸುಧಾಕರ್ ಪರವಾಗಿ ತೀವ್ರ ಪ್ರಚಾರ ನಡೆಸಿದರು.
ಮನೆ ಮನೆ ಸಂಪರ್ಕ ಅಭಿಯಾನದಲ್ಲಿ ಸಾರ್ವಜನಿಕರೊಂದಿಗೆ ಮಾತನಾಡಿದ ಮಾಜಿ ನಗರಸಭೆ ಸದಸ್ಯ ಪ್ರೇಮ್ ಕುಮಾರ್, "ಹಿರಿಯ ನಾಯಕರಾದ ಸುಧಾಕರ್ ಸಾಹೇಬರ ಮೇಲೆ ನೀವು ತೋರಿದ ಪ್ರೀತಿ, ಬೆಂಬಲ ಹಾಗೂ ಆಶೀರ್ವಾದಕ್ಕೆ ನಾವು ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಸುಧಾಕರ್ ಅವರು ನಗರದಲ್ಲಿ ಎಂದಿಗೂ ಜಾತಿ-ಭೇದ ಮಾಡದೆ ಬಡವರ, ಶೋಷಿತರ ಪರವಾಗಿ ನಿಂತು ದಾನ ಧರ್ಮಗಳನ್ನು ಮಾಡಿಕೊಂಡು ಬಂದಿದ್ದಾರೆ. ಎಲ್ಲ ಸಮಾಜದವರನ್ನು ಸಮಾನವಾಗಿ ಪ್ರೀತಿಸಿದ ಹೆಗ್ಗಳಿಕೆ ಅವರದ್ದು," ಎಂದು ಸ್ಮರಿಸಿದರು.
ಅಭಿವೃದ್ಧಿ ಕಾರ್ಯಗಳ ಉಲ್ಲೇಖ:
"ನಗರಸಭೆ ವ್ಯಾಪ್ತಿಯ ವಿವಿಧ ವಾರ್ಡ್ಗಳ ಅಭಿವೃದ್ಧಿಗೆ ಸುಮಾರು 50 ರಿಂದ 60 ಕೋಟಿ ರೂಪಾಯಿಗಳ ವಿಶೇಷ ಅನುದಾನ ತಂದು ಕೆಲಸ ಮಾಡಿಸಿದ್ದರು. ಅಲ್ಲದೆ, ನಗರಕ್ಕೆ 100 ಕೋಟಿ ರೂಪಾಯಿ ವೆಚ್ಚದ ಯುಜಿಡಿ ಯೋಜನೆಯನ್ನು ಮಂಜೂರು ಮಾಡಿಸಿ, ಕೆಲಸ ಆರಂಭಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಸುಧಾಕರ್ ಅವರು ಹಾಕಿಕೊಟ್ಟ ಈ ಅಭಿವೃದ್ಧಿಯ ಹಾದಿಯನ್ನು ಮತ್ತು ಬಾಕಿ ಇರುವ ಕೆಲಸಗಳನ್ನು ಸುಹಾಸ್ ಅವರು ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗಲು ನಿಮ್ಮೆಲ್ಲರ ಆಶೀರ್ವಾದ ಅತ್ಯಗತ್ಯ," ಎಂದು ಪ್ರೇಮ್ ಕುಮಾರ್ ಸಾರ್ವಜನಿಕರಲ್ಲಿ ವಿನಂತಿಸಿದರು.
ಕೈ ಹಿಡಿದು ಆಶೀರ್ವದಿಸಿ - ಸುಹಾಸ್ ಸುಧಾಕರ್ ಮನವಿ:
ಇದೇ ಸಂದರ್ಭದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಯುವ ಮುಖಂಡ ಸುಹಾಸ್ ಸುಧಾಕರ್, "ನನ್ನ ತಂದೆಯವರೊಂದಿಗೆ ನೀವು ಇಷ್ಟು ದಿನಗಳ ಕಾಲ ಯಾವ ರೀತಿಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ಕೈಜೋಡಿಸಿದ್ದೀರೋ, ಅದೇ ಪ್ರೀತಿಯೊಂದಿಗೆ ಮುಂದಿನ ದಿನಗಳಲ್ಲೂ ನನ್ನ ಕೈ ಹಿಡಿದು ಆಶೀರ್ವಾದ, ಬೆಂಬಲ ಮತ್ತು ಸಹಕಾರವನ್ನು ನೀಡಬೇಕು," ಎಂದು ಕೋರಿದರು.
"ಸಾರ್ವಜನಿಕರಾದ ನಿಮ್ಮ ಪ್ರೀತಿ, ವಿಶ್ವಾಸ ಮತ್ತು ಸಹಕಾರವೇ ನಮ್ಮ ನಿಜವಾದ ಶಕ್ತಿ. ಇದೇ ಶಕ್ತಿಯನ್ನು ಬೆನ್ನಿಗಿಟ್ಟುಕೊಂಡು ಹಿರಿಯೂರು ನಗರದ ಸಮಗ್ರ ಅಭಿವೃದ್ಧಿ ಹಾಗೂ ಜನಸೇವೆಯ ಹಾದಿಯಲ್ಲಿ ನಾವು ಮತ್ತಷ್ಟು ದೃಢವಾಗಿ ಮುನ್ನಡೆಯುತ್ತೇವೆ," ಎಂದು ಸುಹಾಸ್ ಭರವಸೆ ನೀಡಿದರು.
ಈ ಮನೆ ಮನೆ ಭೇಟಿಯ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು, ಪ್ರಮುಖ ಕಾರ್ಯಕರ್ತರು ಹಾಗೂ ವಾರ್ಡ್ನ ಸಾರ್ವಜನಿಕರು ಉಪಸ್ಥಿತರಿದ್ದರು.



