ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಕೀಯ ವಲಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ವಿರುದ್ಧ ಜೆಡಿಎಸ್ ತೀವ್ರ ವಾಗ್ದಾಳಿ ನಡೆಸಿದೆ. ಸುರ್ಜೇವಾಲಾ ಅವರನ್ನು ‘ಮಿಸ್ಟರ್ ವಸೂಲಿವಾಲಾ’ ಎಂದು ಜರೆದಿರುವ ಜೆಡಿಎಸ್, “ನಿಮ್ಮದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಜೆಡಿಎಸ್ ಕುರಿತು ಮಾತನಾಡುವ ಮುನ್ನ ಕಾಂಗ್ರೆಸ್ ತನ್ನ ಕರಾಳ ಇತಿಹಾಸವನ್ನು ಒಮ್ಮೆ ನೆನಪಿಸಿಕೊಳ್ಳಬೇಕು ಎಂದು ಎಚ್ಚರಿಸಿರುವ ಪಕ್ಷವು, ರಾಷ್ಟ್ರೀಯ ಮತ್ತು ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಪ್ರಾದೇಶಿಕ ಪಕ್ಷಗಳಿಗೆ ಹಾಗೂ ತನ್ನದೇ ಹಿರಿಯ ನಾಯಕರಿಗೆ ಮಾಡಿದ ದ್ರೋಹದ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ದೇವೇಗೌಡರಿಗೆ ಮಹಾದ್ರೋಹ: 1997ರಲ್ಲಿ ಕುತಂತ್ರದ ಮೂಲಕ ಹೆಚ್.ಡಿ. ದೇವೇಗೌಡ ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದ್ದು ಕಾಂಗ್ರೆಸ್ ಪಕ್ಷ. ಈ ಮಹಾದ್ರೋಹವನ್ನು ಕಳೆದ 30 ವರ್ಷಗಳಿಂದ ಕನ್ನಡಿಗರು ಪ್ರಶ್ನಿಸುತ್ತಲೇ ಇದ್ದಾರೆ, ಇದಕ್ಕೆ ಕಾಂಗ್ರೆಸ್ ಉತ್ತರಿಸಲಿ.
ಮೈತ್ರಿ ಸರಕಾರದ ಬೆನ್ನಿಗೆ ಚೂರಿ: 2019ರಲ್ಲಿ ರಾಜ್ಯದಲ್ಲಿ ಮೈತ್ರಿ ನಾಟಕವಾಡಿ, ಅಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಬೆನ್ನಿಗೆ ಚೂರಿ ಹಾಕಿ ಸರ್ಕಾರ ಉರುಳಿಸಿದ್ದೂ ಇದೇ ಕಾಂಗ್ರೆಸ್.
ಸ್ವಪಕ್ಷದ ನಾಯಕರಿಗೇ ಅಪಮಾನ: ಮಾಜಿ ಪ್ರಧಾನಿಗಳಾದ ಪಿ.ವಿ. ನರಸಿಂಹರಾವ್ ಹಾಗೂ ಡಾ. ಮನ್ಮೋಹನ್ ಸಿಂಗ್ ಅವರಂತಹ ಶ್ರೇಷ್ಠ ನಾಯಕರನ್ನು ಕಾಂಗ್ರೆಸ್ನ ‘ನಕಲಿ ಗಾಂಧಿ’ ಕುಟುಂಬ ಹೇಗೆ ಅಪಮಾನಿಸಿ, ನಡೆಸಿಕೊಂಡಿತು ಎಂಬುದು ಇಡೀ ದೇಶಕ್ಕೆ ಗೊತ್ತಿದೆ.
ಅವಕಾಶವಾದಿ ರಾಜಕಾರಣ: ತಮಿಳುನಾಡಿನಲ್ಲಿ ಡಿಎಂಕೆಯೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಂಡು, ಫಲಿತಾಂಶ ಬಂದ ಬಳಿಕ ಗೆದ್ದೆತ್ತಿನ ಬಾಲ ಹಿಡಿಯುವ ನೀತಿಗೆಟ್ಟ ರಾಜಕಾರಣ ಕಾಂಗ್ರೆಸ್ನದ್ದು. ಇಂತಹ ಪಕ್ಷಕ್ಕೆ ಜೆಡಿಎಸ್ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ.
"ದೇವೇಗೌಡರ ವಿಷಯದಲ್ಲಿ ರಾಜಕೀಯ ಮಾಡುವುದು ನೀಚತನ"
"ದೇವೇಗೌಡರು ರಾಷ್ಟ್ರ ಕಂಡ ಮೇರು ನಾಯಕರು. ಕನ್ನಡಿಗರ ಹೆಮ್ಮೆಯ ಏಕೈಕ ಪ್ರಧಾನಿ ಹಾಗೂ ಇಮ್ಮಡಿ ಪುಲಕೇಶಿಯ ನಂತರ ಭರತಭೂಮಿಯನ್ನು ಆಳಿದ ಶ್ರೇಷ್ಠ ನಾಯಕ. ಆ ಹಿರಿಯ ಜೀವದ ವಿಷಯದಲ್ಲಿ ರಾಜಕೀಯ ಮಾಡುವುದು ಕಾಂಗ್ರೆಸ್ನ ನೀಚತನದ ಪರಾಕಾಷ್ಠೆ" ಎಂದು ಜೆಡಿಎಸ್ ತೀವ್ರವಾಗಿ ಖಂಡಿಸಿದೆ.
ಕಾಂಗ್ರೆಸ್ ಪಕ್ಷದ್ದು ಒಳಗೆ ಜಾತ್ಯತೀತತೆಯ ಮುಖವಾಡ, ಹೊರಗೆ ಜಾತಿ ವಿದ್ವೇಷದ ರಾಜಕಾರಣ ಎಂದು ಟೀಕಿಸಿರುವ ಜೆಡಿಎಸ್, "ಮೊದಲು ನಿಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣ ನೋಡಿಕೊಳ್ಳಿ. ಕರ್ನಾಟಕವನ್ನು ಎಟಿಎಂ ಮಾಡಿಕೊಂಡು ಕೇವಲ ವಸೂಲಿಯಲ್ಲಿ ತೊಡಗಿರುವ ಸುರ್ಜೇವಾಲಾ ಅವರು ದೇವೇಗೌಡರ ವಿಷಯ ಬಿಟ್ಟು, ತಮ್ಮ ಸ್ವಪಕ್ಷ ಹಾಗೂ ಸರ್ಕಾರದಲ್ಲಿ ನಡೆಯುತ್ತಿರುವ ಒಳಜಗಳ ಮತ್ತು ಒಳಸಂಚುಗಳನ್ನು ಹತ್ತಿಕ್ಕುವ ಕಡೆ ಗಮನ ಹರಿಸಲಿ" ಎಂದು ಜೆಡಿಎಸ್ ತಿರುಗೇಟು ನೀಡಿದೆ.



