ಹಿರಿಯೂರು:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕಲ್ಪಳ್ಳಿ ಭಾಗದಲ್ಲಿ ತೀವ್ರ ನೀರಾವರಿ ಹಾಗೂ ಕುಡಿಯುವ ನೀರಿನ ಅಭಾವ ತಲೆದೋರಿದ್ದು, ಶಾಶ್ವತ ನೀರಾವರಿ ಯೋಜನೆಗೆ ಆಗ್ರಹಿಸಿ ಜೂನ್ 01, 2026ರ ಸೋಮವಾರ ಬೆಳಿಗ್ಗೆ 9:00 ಗಂಟೆಗೆ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.
ತಾಲೂಕಿನ ಸೂರಪ್ಪನಹಟ್ಟಿ ಗೇಟ್, ದಿಂಡಾವರ ರಸ್ತೆಯಿಂದ ಹೊರಡಲಿರುವ ಬೈಕ್, ಟ್ರ್ಯಾಕ್ಟರ್ ಮತ್ತು ಟ್ಯಾಂಕರ್ ರ್ಯಾಲಿಯು ತಾಲೂಕು ಕಚೇರಿಯವರೆಗೆ ಸಾಗಲಿದೆ. ಅಲ್ಲಿ ತಹಶೀಲ್ದಾರ್ (ದಂಡಾಧಿಕಾರಿಗಳು) ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಕಲ್ಪಳ್ಳಿ ಭಾಗದ ರೈತರು ಒಕ್ಕೊರಲಿನಿಂದ ಮನವಿ ಪತ್ರ ಸಲ್ಲಿಸಲಿದ್ದಾರೆ.
ತೀವ್ರ ನೀರಿನ ಅಭಾವ ಹಾಗೂ ರೈತರ ಸಂಕಷ್ಟ
ವರಡನಾಡು ಎಂದೇ ಖ್ಯಾತಿಯಾಗಿರುವ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕಲ್ಪಳ್ಳಿ ಭಾಗವು ಅತಿ ಹೆಚ್ಚು ಬರದಿಂದ ಕಾಡುತ್ತಿದ್ದು, ಸುಮಾರು 50,000 ಮತದಾರರು ಹಾಗೂ ಅಪಾರ ಜನ-ಜಾನುವಾರುಗಳನ್ನು ಹೊಂದಿದೆ. ಪ್ರತಿ ವರ್ಷವೂ ಇಲ್ಲಿ ನೀರಿಗಾಗಿ ಹಾಹಾಕಾರ ಸೃಷ್ಟಿಯಾಗುತ್ತಿದ್ದು, ಅಂತರ್ಜಲವು 1000 ಅಡಿ ಆಳಕ್ಕೆ ಕುಸಿದಿದ್ದರೂ ಬೋರ್ವೆಲ್ಗಳಲ್ಲಿ ನೀರು ಸಿಗುತ್ತಿಲ್ಲ. ಇದರಿಂದಾಗಿ ರೈತರು ಬೆಳೆದ ದೀರ್ಘಾವಧಿ ಬೆಳೆಗಳು ನಾಶವಾಗಿ, ಸಾಲದ ಸುಳಿಗೆ ಸಿಲುಕಿದ್ದಾರೆ. ವಾಣಿವಿಲಾಸ ಸಾಗರ ಜಲಾಶಯದ ನಾಲೆ ಇದ್ದರೂ ಸಹ ಈ ಭಾಗಕ್ಕೆ ಕಳೆದ 20 ವರ್ಷಗಳಿಂದ ನಿರಂತರವಾಗಿ ನೀರಿಗಾಗಿ ಹೋರಾಟ ನಡೆಸಿದರೂ ಯಾವುದೇ ಜನಪ್ರತಿನಿಧಿಗಳಿಂದ ಪ್ರಯೋಜನವಾಗಿಲ್ಲ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.
ಪ್ರಮುಖ ಬೇಡಿಕೆಗಳು ಮತ್ತು ಎಚ್ಚರಿಕೆ
ಈ ಹಿಂದೆ ಮಾಜಿ ಸಚಿವರಾದ ದಿವಂಗತ ಶ್ರೀ ಡಿ. ಸುಧಾಕರ್ ಅವರು ಕಲ್ಪಳ್ಳಿ ಭಾಗದ ಎಲ್ಲಾ ಕೆರೆಗಳಿಗೆ ವಾಣಿವಿಲಾಸ ಸಾಗರದಿಂದ ನೀರು ತುಂಬಿಸಲು ದೊಡ್ಡಘಟ್ಟ ಗ್ರಾಮದ ಪಕ್ಕ ಚೆಕ್ಡ್ಯಾಂ ನಿರ್ಮಿಸಿ, ಕಲ್ಪಳ್ಳಿ ಭಾಗದ ಕೆರೆಗಳಿಗೆ ನೀರು ತುಂಬಿಸುವ ಸುಮಾರು 265 ಕೋಟಿ ರೂ. ಮೊತ್ತದ ಯೋಜನೆಯನ್ನು ರೂಪಿಸಿದ್ದರು. ಆದರೆ ಕ್ಯಾಬಿನೆಟ್ ಅನುಮೋದನೆ ಸಿಗುವ ಮುನ್ನವೇ ಅವರು ವಿಧಿವಶರಾದರು. ಈಗ ಅದೇ ಯೋಜನೆಯನ್ನು ಜಾರಿಗೆ ತರಬೇಕೆಂದು ಕಲ್ಪಳ್ಳಿ ಭಾಗದ ಜನತೆ ಒತ್ತಾಯಿಸುತ್ತಿದ್ದಾರೆ.
ಮನವಿಯ ಪ್ರಮುಖ ಅಂಶಗಳು:
20 ದಿನಗಳ ಗಡುವು: ಸರ್ಕಾರವು 20 ದಿನಗಳ ಒಳಗಾಗಿ ಸಚಿವ ಸಂಪುಟ ಸಭೆ ಕರೆದು, ಈ ಯೋಜನೆಗೆ ಅನುಮೋದನೆ ನೀಡಿ ಟೆಂಡರ್ ಕರೆಯಬೇಕು. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು.
ಚುನಾವಣೆ ಬಹಿಷ್ಕಾರದ ಎಚ್ಚರಿಕೆ: ಒಂದು ವೇಳೆ ಸರ್ಕಾರ ಈ ಯೋಜನೆಯನ್ನು ಕೈಗೆತ್ತಿಕೊಳ್ಳದಿದ್ದರೆ, ಈ ಭಾಗದ ರೈತರು ಅಮರಣಾಂತ ಸತ್ಯಾಗ್ರಹ ನಡೆಸಲಿದ್ದಾರೆ ಹಾಗೂ ಮುಂದೆ ಬರುವ ಎಲ್ಲಾ ಚುನಾವಣೆಗಳನ್ನು ಕಟ್ಟುನಿಟ್ಟಾಗಿ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ವಿಶೇಷ ಸೂಚನೆ ಮತ್ತು ಮನವಿ
ಪ್ರತಿಭಟನೆಗೆ ಬರುವ ರೈತರು ತಮ್ಮ ಜಮೀನುಗಳಲ್ಲಿ ಒಣಗಿದ ಬೆಳೆಗಳೊಂದಿಗೆ ನಿಂತು ತೆಗೆಸಿಕೊಂಡ ಫೋಟೋ, ಜಮೀನಿನ ಪಹಣಿ ಮತ್ತು ಆಧಾರ್ ಕಾರ್ಡ್ಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ತರಬೇಕಾಗಿ ವಿನಂತಿಸಲಾಗಿದೆ. ಈ ಹೋರಾಟಕ್ಕೆ ತಾಲೂಕಿನ ಎಲ್ಲಾ ರೈತಪರ ಸಂಘಟನೆಗಳು, ಮಹಿಳಾ ಸಂಘಗಳು, ರಾಜಕೀಯ ಮುಖಂಡರು, ಪತ್ರಕರ್ತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲಿಸಬೇಕಾಗಿ ಕಲ್ಪಳ್ಳಿ ಭಾಗದ ರೈತ ಬಾಂಧವರು ಕೋರಿದ್ದಾರೆ. ಈ ರ್ಯಾಲಿಯನ್ನು ಸಂಪೂರ್ಣ ಶಾಂತಿಯುತವಾಗಿ ನಡೆಸಲು ತೀರ್ಮಾನಿಸಲಾಗಿದೆ.



