ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ಜಿಲ್ಲಾ ಖೋ-ಖೋ ಸಂಸ್ಥೆಯ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಭಾನುವಾರ ನಗರದ ಟಿ.ಬಿ. ಸರ್ಕಲ್ನಲ್ಲಿರುವ ಐಬಿಯಲ್ಲಿ ಯಶಸ್ವಿಯಾಗಿ ಜರುಗಿತು.
ಸಂಸ್ಥೆಯ ಅಧ್ಯಕ್ಷ ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಬೆಳಗ್ಗೆ 11 ಗಂಟೆಗೆ ಸಭೆ ಆರಂಭವಾಯಿತು.
ಲೆಕ್ಕಪತ್ರ ಮಂಡನೆ ಮತ್ತು ಆಡಿಟರ್ ನೇಮಕ:
ಸಭೆಯ ಆರಂಭದಲ್ಲಿ ಚಿತ್ರದುರ್ಗ ಜಿಲ್ಲಾ ಖೋ-ಖೋ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಶಿವಪ್ರಸಾದ್ ಸ್ವಾಗತಿಸಿದರು. ತದನಂತರ ಹಿಂದಿನ ಹಾಗೂ 2025-26ನೇ ಸಾಲಿನ ಸಾಮಾನ್ಯ ಸಭೆಗಳ ನಡವಳಿಕೆಗಳನ್ನು ಓದಿ ಅಂಗೀಕರಿಸಲಾಯಿತು. ಸಂಸ್ಥೆಯ ಲೆಕ್ಕಪತ್ರಗಳು ಹಾಗೂ ವಾರ್ಷಿಕ ವರದಿಯನ್ನು ಸಭೆಯಲ್ಲಿ ಒಪ್ಪಿಸಲಾಯಿತು.
ಮುಂದುವರಿದು, 2025-26ನೇ ಸಾಲಿನ ಆಡಿಟಿಂಗ್ ಪ್ರಕ್ರಿಯೆಗಾಗಿ ಆಡಿಟರ್ ನೇಮಕ ಹಾಗೂ ಶುಲ್ಕ ನಿಗದಿಪಡಿಸುವ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಇದೇ ವೇಳೆ 2026-27ನೇ ಸಾಲಿಗೂ ಈಗಿನಿಂದಲೇ ಆಡಿಟರ್ ನೇಮಕ ಮತ್ತು ಶುಲ್ಕ ನಿಗದಿಪಡಿಸಲು ತೀರ್ಮಾನಿಸಲಾಗಿದ್ದು, ಇದಕ್ಕೆ ಸೂಕ್ತವಾದ ವ್ಯಕ್ತಿಯನ್ನು ಒಂದು ವಾರದೊಳಗೆ ನಿಯೋಜಿಸುವುದಾಗಿ ಅಧ್ಯಕ್ಷರು ಸಭೆಗೆ ಭರವಸೆ ನೀಡಿದರು.
ನೂತನ ಪದಾಧಿಕಾರಿಗಳ ಸರ್ವಾನುಮತದ ಆಯ್ಕೆ:
ಸಂಸ್ಥೆಯ ಬಲವರ್ಧನೆಗಾಗಿ ಸಭೆಯಲ್ಲಿ ಮಹತ್ವದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಜಿಲ್ಲಾ ಉಪಾಧ್ಯಕ್ಷರಾಗಿ ಅಶೋಕ ಸ್ಪೋರ್ಟ್ಸ್ ಕ್ಲಬ್ನ ಕೆ.ಎಂ. ಯತೀಶ್,ನಿರ್ದೇಶಕರಾಗಿ ಹಿರಿಯೂರಿನ ಮಹಮ್ಮದ್ ಜಫ್ರುದ್ದೀನ್ ಇವರನ್ನು ಸಭೆಯಲ್ಲಿದ್ದ ಎಲ್ಲಾ ಸದಸ್ಯರು ಸರ್ವಾನುಮತದಿಂದ ಆಯ್ಕೆ ಮಾಡಿದರು.
ರಾಜ್ಯಮಟ್ಟದ 'ಅಸೋಸಿಯೇಷನ್ ಕಪ್'ಗೆ ಶುಭ ಹಾರೈಕೆ:
ಸಭೆಯಲ್ಲಿ ಅಶೋಕ ಸ್ಪೋರ್ಟ್ಸ್ ಕ್ಲಬ್ನ ಹಿರಿಯ ಖೋ-ಖೋ ಆಟಗಾರ ಹಾಗೂ ನಿವೃತ್ತ ಡಿವೈಎಸ್ಪಿ ಇಶಾಕ್ ಅವರು ಭಾಗವಹಿಸಿ ಮಾತನಾಡಿ, "ಚಿತ್ರದುರ್ಗ ಜಿಲ್ಲಾ ಖೋ-ಖೋ ಸಂಸ್ಥೆಯು ಅತ್ಯಂತ ಪಾರದರ್ಶಕ ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಮುಂದೆಯೂ ಇದೇ ರೀತಿ ನಿಷ್ಪಕ್ಷಪಾತವಾಗಿ ಕೆಲಸ ಮಾಡಿ, ಜಿಲ್ಲೆಯಲ್ಲಿ ಖೋ-ಖೋ ಕ್ರೀಡೆಯ ಅಭಿವೃದ್ಧಿಗೆ ಶ್ರಮಿಸಲಿ, ನಮ್ಮ ಬೆಂಬಲ ಸದಾ ನಿಮ್ಮೊಂದಿಗಿರುತ್ತದೆ" ಎಂದು ಬೆನ್ನುತಟ್ಟಿದರು.
ಇದೇ ವೇಳೆ, ಜುಲೈ 17, 18 ಮತ್ತು 19ರಂದು ಗರುಡ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಆಯೋಜನೆಯಾಗುತ್ತಿರುವ 'ರಾಜ್ಯಮಟ್ಟದ ಖೋ-ಖೋ ಅಸೋಸಿಯೇಷನ್ ಕಪ್ - 2026' ಕ್ರೀಡಾಕೂಟವು ಜಯಭೇರಿ ಬಾರಿಸಲಿ ಎಂದು ಅವರು ಶುಭ ಹಾರೈಸಿದರು.
ಈ ಪ್ರಮುಖ ಸಭೆಯಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಕೆ. ಗೋಪಿನಾಥ್, ಅಧ್ಯಕ್ಷ ಕುಮಾರಸ್ವಾಮಿ ಕೆ, ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಬಿ.ಎಸ್., ಉಪಾಧ್ಯಕ್ಷ ವೆಂಕಟೇಶನ್ ಎನ್., ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಎಸ್. ಮತ್ತು ಜಗದೀಶ್ ಎಚ್.ಎಂ., ನಿರ್ದೇಶಕರುಗಳಾದ ನವೀನ್ ಕುಮಾರ್ ಪಿ. ಮತ್ತು ಸುನಿಲ್, ವಿಶೇಷ ಮಾರ್ಗದರ್ಶಕರಾದ ಎಂ.ಎಚ್. ಜಯಣ್ಣ ಮತ್ತು ಸುಧಾಕರ್ ಬಡಿಗೇರ್ ಹಾಗೂ ಚಿತ್ರದುರ್ಗ ಜಿಲ್ಲಾ ಖೋ-ಖೋ ಸಂಸ್ಥೆಯ ಎಲ್ಲಾ ಅಂಗ ಸಂಸ್ಥೆಗಳ ಅಧ್ಯಕ್ಷರುಗಳು ಮತ್ತು ಕಾರ್ಯದರ್ಶಿಗಳು ಭಾಗವಹಿಸಿದ್ದರು.
ಅಧ್ಯಕ್ಷರ ಅಪ್ಪಣೆಯ ಮೇರೆಗೆ, ಇತರೆ ಯಾವುದೇ ವಿಷಯಗಳು ಚರ್ಚೆಗೆ ಬಾಕಿ ಇಲ್ಲದ ಕಾರಣ ವಂದನಾರ್ಪಣೆಯೊಂದಿಗೆ ಸಭೆ ಮುಕ್ತಾಯಗೊಳಿಸಲಾಯಿತು.



