ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಗುಣಮಟ್ಟದ ಹಾಲನ್ನು ಡೈರಿಗೆ ಹಾಕುವ ಮೂಲಕ ಸಹಕಾರ ನೀಡುವಂತೆ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ನಿರ್ದೇಶಕ ಜಿ.ಬಿ.ರೇವಣಸಿದ್ದಪ್ಪ ಅಧ್ಯಕ್ಷರು, ಕಾರ್ಯದರ್ಶಿಗಳಲ್ಲಿ ಮನವಿ ಮಾಡಿದರು.
ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಶುಕ್ರವಾರ ಕರೆಯಲಾಗಿದ್ದ ಅಧ್ಯಕ್ಷರು, ಕಾರ್ಯದರ್ಶಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆರು ತಿಂಗಳಿಗೊಮ್ಮೆ ಕಾರ್ಯದರ್ಶಿ, ಅಧ್ಯಕ್ಷರುಗಳ ಸಭೆ ಕರೆದು ಕುಂದುಕೊರತೆಗಳನ್ನು ಆಲಿಸಿಕೊಂಡು ಬರುತ್ತಿದ್ದೇವೆ. ಒಕ್ಕೂಟದಿಂದ ಸಂಘಗಳಿಗೆ ಏನು ಕೊಡುತ್ತೇವೆನ್ನುವುದು ಅಧ್ಯಕ್ಷರುಗಳ ಗಮನದಲ್ಲಿರಬೇಕು. ಹಾಗಾಗಿ ಮುಂದಿನ ಸಲ ಅಧ್ಯಕ್ಷರುಗಳನ್ನು ಸಭೆಗೆ ಕರೆತರುವಂತೆ ಕಾರ್ಯದರ್ಶಿಗಳಿಗೆ ತಾಕೀತು ಮಾಡಿದರು.
ಎಂಟು ಲಕ್ಷ ಲೀಟರ್ ಸಾಮರ್ಥ್ಯದ ಡೈರಿಯನ್ನು ಚಿತ್ರದುರ್ಗದಲ್ಲಿ ಮಾಡುತ್ತೇವೆ. ದಾವಣಗೆರೆಯಲ್ಲಿಯೂ ಕೂಡ ಡೈರಿ ನಿರ್ಮಾಣವಾಗಲಿದೆ. ಇದರಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಿದಂತಾಗುತ್ತದೆ. ಒಗ್ಗಟ್ಟಾಗಿ ಸಂಘವನ್ನು ನಡೆಸಿಕೊಂಡು ಹೋಗಿ ನಾವುಗಳು ಹಸ್ತಕ್ಷೇಪ ಮಾಡುವುದಿಲ್ಲ. ಒಂಬತ್ತುವರೆ ಲಕ್ಷ ಲೀಟರ್ ಹಾಲು ಪ್ರತಿನಿತ್ಯವೂ ನಮಗೆ ಬರುತ್ತದೆ. ಇದರಲ್ಲಿ ಖರ್ಚಾಗುವುದು ಕೇವಲ ಮೂರು ಲಕ್ಷ ಲೀ.ಮಾತ್ರ. ಉಳಿದ ಹಾಲನ್ನು ಬೇರೆ ಬೇರೆ ಘಟಕಗಳಿಗೆ ಕಳಿಸಿ ಬೆಣ್ಣೆ, ತುಪ್ಪ, ಹಾಲಿನ ಪೌಡರ್ ಹಾಗೂ ಇತರೆ ಸಿಹಿ ಉತ್ಪನ್ನಗಳನ್ನು ತಯಾರಿಸಲಾಗುವುದು. ಹಾಲನ್ನು ಪುಡಿಯಾಗಿ ಪರಿವರ್ತಿಸಲು ಒಂದು ಲೀಟರ್ಗೆ ಆರು ರೂ.ಗಳ ಖರ್ಚಾಗುತ್ತದೆ. ಮೂರು ತಾಲ್ಲೂಕಿನಿಂದ ಸೇರಿ ೫೭ ಕಂಪ್ಯೂಟರ್ಗಳು ಬೇಕು. ಇನ್ನು ಮೂರು ತಿಂಗಳಲ್ಲಿ ಪೂರೈಸಲಾಗುವುದೆಂದು ಹೇಳಿದರು.
ಶಿಮುಲ್ ನಿರ್ದೇಶಕ ಜಿ.ಬಿ.ಶೇಖರ್ ಮಾತನಾಡಿ ನಿಮ್ಮ ಕುಂದುಕೊರತೆಗಳನ್ನು ಆಲಿಸಿದ್ದೇವೆ. ೬೮ ಸಂಘಗಳಿಂದ ದಿನವಹಿ ಐವತ್ತು ಲಕ್ಷ ಲೀ.ಹಾಲು ಸಂಗ್ರಹವಾಗುತ್ತಿದೆ. ರೈತರಿಗೆ ತೊಂದರೆಯಾಗಬಾರದೆಂದು ಮ್ಯಾಟ್, ಮೆಷಿನ್ ಹಾಗೂ ಕ್ಯಾನ್ಗಳನ್ನು ಕೊಡುತ್ತಿದ್ದೇವೆ. ಚಿತ್ರದುರ್ಗದಲ್ಲಿ ಹಾಲಿನ ಡೈರಿ ಮಾಡುತ್ತೇವೆ. ಮುಂದೆ ದಾವಣಗೆರೆಯಲ್ಲಿಯೂ ಮಾಡುವುದಾಗಿ ತಿಳಿಸಿದರು.
ಗುಣಮಟ್ಟದ ಹಾಲು ಹಾಕಿದರೆ ಮುಂದಿನ ದಿನಗಳಲ್ಲಿ ಕಡಿಮೆ ಲಾಭಾಂಶವನ್ನು ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದರು.
ನಿರ್ದೇಶಕ ಬಿ.ಸಿ.ಸಂಜೀವಮೂರ್ತಿ ಮಾತನಾಡಿ ಹಿಂದಿನ ಆಡಳಿತ ಮಂಡಳಿ ಸರಿಯಾಗಿ ಸಭೆಗಳನ್ನು ನಡೆಸುತ್ತಿರಲಿಲ್ಲ. ಅನೇಕ ಕೆಲಸಗಳು ಸ್ಥಗಿತಗೊಂಡಿದ್ದವು. ಈ ವರ್ಷ ಹದಿನೈದು ಕೋಟಿ ರೂ.ಲಾಭ ಗಳಿಸಿದ್ದು, ಬೋನಸ್ ರೂಪದಲ್ಲಿ ಲಾಭಾಂಶವನ್ನು ನೀಡಿದ್ದೇವೆ. ಉಳಿದ ಹಣ ಹೊಂದಿಸಲು ಆಗುತ್ತಿಲ್ಲ. ಬೇರೆ ಬೇರೆ ಘಟಕಗಳಿಗೆ ಹಾಲನ್ನು ಕಳಿಸಿ ಇತರೆ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ ೨೮೦ ಸಂಘಗಳಿದ್ದವು. ಈಗ ೩೬೦ ರಿಂದ ೩೮೦ ಕ್ಕೆ ಏರಿಕೆಯಾಗಿದೆ.
ಚಳ್ಳಕೆರೆ, ಹೊಸದುರ್ಗ ಭಾಗಗಳಲ್ಲಿಯೂ ಹೊಸ ಸಂಘಗಳಾಗಿವೆ. ಚಿತ್ರದುರ್ಗ ತಾಲ್ಲೂಕಿನಲ್ಲಿ ೫೨೧೨ ಹಸುಗಳಿಗೆ ಇನ್ಸೂರೆನ್ಸ್ ಮಾಡಿಸಿದ್ದೇವೆ. ಎರಡು ಲಕ್ಷ ಲೀ.ಸಾಮರ್ಥ್ಯದ ಡೈರಿ ಚಿತ್ರದುರ್ಗದಲ್ಲಿ ಆಗಬೇಕು. ಕಾಲ ವ್ಯಯ ಮಾಡಬೇಡಿ. ಅಭಿವೃದ್ದಿಗೆ ಸಹಕರಿಸಿ ಎಂದು ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಲ್ಲಿ ಮನವಿ ಮಾಡಿದರು.
ನಿರ್ದೇಶಕ ರವಿಕುಮಾರ್ ಮಾತನಾಡಿ ತುಂಬಾ ಸಮಸ್ಯೆಗಳಿಗೆ ಪರಿಹಾರವೇ ಸಿಗುತ್ತಿಲ್ಲ. ಮಿಲ್ಕಿಂಗ್ ಮೆಷಿನ್, ಮ್ಯಾಟನ್ನು ಅವಸರವಾಗಿ ಖರೀದಿಸುವುದು ಬೇಡ. ಮೊದಲು ದಾವಣಗೆರೆ, ಶಿವಮೊಗ್ಗದವರು ಖರೀದಿಸಲಿ ಅವುಗಳ ಗುಣಮಟ್ಟ ನೋಡಿ ನಾವುಗಳು ಖರೀದಿ ಮಾಡೋಣ. ಲೇಟಾಗಿ ಡೈರಿಗೆ ಹಾಲು ತೆಗೆದುಕೊಂಡು ಹೋದರೆ ನಾವುಗಳು ಹೊಣೆಯಲ್ಲ. ಕಲ್ಯಾಣ ಟ್ರಸ್ಟ್ನಲ್ಲಿರುವ ಹಣವನ್ನು ಮುಂದಿನ ದಿನಗಳಲ್ಲಿ ಹೆಚ್ಚು ಮಾಡೋಣ ಎಂದು ಹೇಳಿದರು.
ವ್ಯವಸ್ಥಾಪಕ ಸತೀಶ್, ಉಪ ವ್ಯವಸ್ಥಾಪಕ ಮುಕುಂದ, ಅಶ್ವಿನಿ, ರಂಜಿತ ಇವರುಗಳು ವೇದಿಕೆಯಲ್ಲಿದ್ದರು.



