ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ಸರ್ಕಾರದ ಹಾಲಿ ಅರಣ್ಯ, ಜೈವಿಕ ಮತ್ತು ಪರಿಸರ ಇಲಾಖೆ ಸಚಿವರಾದ ಶ್ರೀ ಈಶ್ವರ ಬಿ. ಖಂಡ್ರೆ ಅವರಿಗೆ ರಾಜ್ಯ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಹಾಗೂ ವೀರಶೈವ ಲಿಂಗಾಯತ ಸಮಾಜಕ್ಕೆ ಹೆಚ್ಚಿನ ಸಚಿವ ಸ್ಥಾನಗಳನ್ನು ನೀಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಚಿತ್ರದುರ್ಗ ಜಿಲ್ಲಾ ಘಟಕವು ಒತ್ತಾಯಿಸಿದೆ.
ಈ ಕುರಿತು ಮಹಾಸಭಾದ ಜಿಲ್ಲಾಧ್ಯಕ್ಷರಾದ ಮಹಡಿ ಶಿವಮೂರ್ತಿ ಅವರು ಮಾಧ್ಯಮಗಳಿಗೆ ಪ್ರಕಟಣೆ ಬಿಡುಗಡೆ ಮಾಡಿ ಆಗ್ರಹ ಮಾಡಿದ್ದಾರೆ.
ಖಂಡ್ರೆ ಅವರ ಸೇವೆಗೆ ಶ್ಲಾಘನೆ: ಈಶ್ವರ ಬಿ ಖಂಡ್ರೆ ಅವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾ ಇಡೀ ಸಮಾಜದ ಪ್ರೀತಿಗೆ ಪಾತ್ರರಾಗಿದ್ದಾರೆ.
ಈ ಹಿಂದೆ 5 ವರ್ಷಗಳ ಕಾಲ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷರಾಗಿಯೂ ಸಾರ್ಥಕ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅರಣ್ಯ ಇಲಾಖೆ ಸಚಿವರಾಗಿ ಉತ್ತಮ ಸೇವೆ ಸಲ್ಲಿಸುತ್ತಾ, ಇಲಾಖೆಗೆ ಹೆಚ್ಚಿನ ಮೆರುಗು ತಂದಿದ್ದಾರೆ. ಇವರ ಅವಿರತ ಸೇವೆ ಪರಿಗಣಿಸಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಮಹಾಸಭೆ ಮನವಿ ಮಾಡಿದೆ.
ಚುನಾವಣೆಯಲ್ಲಿ ಸಮುದಾಯದ ಪಾತ್ರ: ವೀರಶೈವ ಲಿಂಗಾಯತ ಸಮಾಜದ ಬಾಂಧವರು ಪ್ರತಿ ಸಾರ್ವತ್ರಿಕ ಚುನಾವಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಕಳೆದ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದಿಂದ 36 ಶಾಸಕರು ಆಯ್ಕೆಯಾಗಿದ್ದು, ಈ ಆಯ್ಕೆಯಲ್ಲಿ ಸಮಾಜದ ಬಾಂಧವರು ಮತ್ತು ನಾಯಕರ ಪಾತ್ರ ದೊಡ್ಡದಾಗಿದೆ ಎಂದು ಪ್ರಕಟಣೆಯಲ್ಲಿ ನೆನಪಿಸಲಾಗಿದೆ.
ಪರಿಷತ್ ಹಾಗೂ ರಾಜ್ಯಸಭಾ ಸ್ಥಾನಗಳಿಗೆ ಒತ್ತಾಯ: ಕಳೆದ 20 ವರ್ಷಗಳಿಂದ ರಾಜ್ಯಸಭಾ ಮತ್ತು ಕಳೆದ 2 ವರ್ಷಗಳಿಂದ ವಿಧಾನಪರಿಷತ್ ಸದಸ್ಯ ಸ್ಥಾನಗಳಿಗೆ ವೀರಶೈವ ಲಿಂಗಾಯತ ಸಮಾಜದವರನ್ನು ಪರಿಗಣಿಸಿರುವುದಿಲ್ಲ. ಆದ್ದರಿಂದ, ಈಗ ಅವಧಿ ಮುಕ್ತಾಯದ ಕಾರಣ ತೆರವಾಗುತ್ತಿರುವ ರಾಜ್ಯಸಭಾ ಮತ್ತು ವಿಧಾನಪರಿಷತ್ ಸದಸ್ಯ ಸ್ಥಾನಗಳಿಗೆ ನಮ್ಮ ಸಮುದಾಯದವರನ್ನು ಪರಿಗಣಿಸಬೇಕು ಎಂದು ಮಹಾಸಭೆ ಸರ್ಕಾರವನ್ನು ಕೋರಿದೆ.



