ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಜೆಡಿಎಸ್ ಪಕ್ಷ ತಾಲೂಕಿನಲ್ಲಿ ಸದೃಢವಾಗಿ ಉಳಿಯಬೇಕೆಂಬ ನಿಟ್ಟಿನಲ್ಲಿ ರಾಜ್ಯ ಜೆಡಿಎಸ್ ಕಾರ್ಯದರ್ಶಿಯಾಗಿ ಕೆಲ ಸಂದರ್ಭಗಳಲ್ಲಿ ಕಾಂಗ್ರೆಸ್ ಜೊತೆಗೂಡಿ ಪಕ್ಷ ಸ್ಥಳೀಯ ಚುನಾವಣೆಗಳಲ್ಲಿ ಅಧಿಕಾರದಲ್ಲಿರುವಂತೆ ಮಾಡಿದ್ದೇನೆ ಹೊರತು ಪಕ್ಷಕ್ಕೆ ದ್ರೋಹ ಬಗೆದಿಲ್ಲ ಎಂದು ಜೆಡಿಎಸ್ ಮುಖಂಡ ಹುಸ್ಕೂರ್ ಆನಂದ್ ಹೇಳಿದರು.
ನಗರದಲ್ಲಿ ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಆನಂದ್ ಮಾತನಾಡಿ ಕಳೆದ ಕೆಲವು ದಿನಗಳಿಂದ ನನ್ನ ಮೇಲೆ ಕೆಲವರು ವಿನಾಕಾರಣ ಅಪ ಪ್ರಚಾರ ಮಾಡುತ್ತಿದ್ದಾರೆ. ಅವರೆಲ್ಲ ಯಾರು, ಏನು, ಯಾವ ಸಂದರ್ಭದಲ್ಲಿ ಯಾರ ಜೊತೆ ಸೇರಿ ಪಕ್ಷದ ವರ್ಚಸ್ಸನ್ನು ಹಾಳು ಮಾಡಲು ಪ್ರಯತ್ನಿಸಿದ್ದರೆಂದು ಇಡೀ ತಾಲೂಕಿಗೆ ಗೊತ್ತಿದೆ.
ನಾನು ಒಬ್ಬ ನಿಷ್ಠಾವಂತ ದಳದ ಸಾಮಾನ್ಯ ಕಾರ್ಯಕರ್ತ. ಸಾಮಾನ್ಯ ಕಾರ್ಯಕರ್ತರ ಜೊತೆ ಕೆಲಸ ಪಕ್ಷಕ್ಕಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಇದು ತಾಲೂಕು ಅಧ್ಯಕ್ಷ ಎನಿಸಿಕೊಂಡ ಹರೀಶ್ ಗೌಡ ಮತ್ತವರ ಬೆಂಬಲಿಗರಿಗೆ ಅರ್ಥವಾಗಬೇಕು. ಆದರೆ ನಾನು ಕಾಂಗ್ರೆಸ್ ಜೊತೆ ಸೇರಿಕೊಂಡು ಕೆಸ್ತೂರು ವಿ. ಎಸ್. ಎಸ್ ಎನ್. ನಲ್ಲಿ ದಳದ ಮುಖಂಡ ರಾಮಮೂರ್ತಿ ಅಧ್ಯಕ್ಷರಾಗದಂತೆ ಮಾಡಿದ್ದೇನೆ ಎನ್ನುವ ಆರೋಪ ಮಾಡಿದ್ದಾರೆ.
ಹರೀಶ್ ಗೌಡರು ಮಾತ್ರ ತಮ್ಮ ವೈಯುಕ್ತಿಕ ಹಿತಾಸಕ್ತಿಗಾಗಿ ಕಾಂಗ್ರೆಸ್ ಅನ್ನು ಬೆಂಬಲಿಸಬಹುದು. ಆದರೆ ನಾನು ಪಕ್ಷದ ಉಳಿವಿಗೆ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಅದು ಪಕ್ಷವಿರೋಧಿ ಚಟುವಟಿಕೆ ಎಂಬಂತೆ ಪತ್ರಿಕಾ ಗೋಷ್ಠಿ ನಡೆಸಿ ನನ್ನ ಮೇಲೆ ಸಲ್ಲದ ಅಪ ಪ್ರಚಾರ ಮಾಡಿದ್ದಾರೆ. ವಾಸ್ತವವಾಗಿ ಕೆಸ್ತೂರು ವಿ. ಎಸ್. ಎಸ್. ಎನ್. ವಿಚಾರದಲ್ಲಿ ರಾಮಾಮೂರ್ತಿಯವರು ಅಧ್ಯಕ್ಷರಾಗಬೇಕೆಂದು ನಾನೂ ಬಯಸಿದ್ದೆ. ಆದರೆ ಹರೀಶ್ ಗೌಡ ರಾಮ ಮೂರ್ತಿಯವರನ್ನು ದಿಕ್ಕು ತಪ್ಪಿಸಿದ್ದಾರೆ. ರಾಮಾಮೂರ್ತಿಯವರು ಸಹ ಈ ವಿಚಾರದಲ್ಲಿ ನನ್ನ ಬಳಿ ಬರಲೇ ಇಲ್ಲಾ.ಸ್ಥಳೀಯ ಪರಿಸ್ಥಿತಿಗಳ ಅನಿವಾರ್ಯವಾಗಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕಾಯಿತು. ಇದನ್ನೇ ತಾಲೂಕು ಅಧ್ಯಕ್ಷ ಎನಿಸಿಕೊಂಡ ಹರೀಶ್ ಗೌಡ ನನ್ನ ಮೇಲೆ ಆರೋಪ ಮಾಡಿದ್ದಾರೆ.
ವಾಸ್ತವವಾಗಿ ಹರೀಶ್ ಗೌಡರ ಕೊಡುಗೆ ತಾಲೂಕು ಜೆಡಿಎಸ್ ಗೆ ಏನು ಎಂಬುದನ್ನು ತಿಳಿಸಲಿ. ಎಷ್ಟು ವರ್ಷಗಳಿಂದ ತಾಲೂಕಿನಲ್ಲಿ ಜೆಡಿಎಸ್ ಅನ್ನು ಸಂಗಟಿಸಿದ್ದಾರೆ ಎನ್ನುವುದನ್ನು ಹೇಳಲಿ. ತಾಲೂಕಿನಲ್ಲಿ ಸ್ಥಳೀಯ ನಾಯಕತ್ವ ಇಲ್ಲದಿದ್ದಾಗ ಮುನೇಗೌಡರು ತಾಲೂಕಿಗೆ ಬಂದು ಪಕ್ಷವನ್ನು ಸಂಘಟಿಸಿ ಸದೃಢವನ್ನಾಗಿ ಮಾಡುವಲ್ಲಿ ಸುಮಾರು ಇಪ್ಪತ್ತು ವರ್ಷಗಳ ಕಾಲ ಶ್ರಮಿಸಿದ್ದಾರೆ. ಅಂತವರನ್ನೇ ಮೂಲೆಗುಂಪು ಮಾಡಲು ಜಿಲ್ಲಾಧ್ಯಕ್ಷರ ಅಣತಿಯಂತೆ ಹರೀಶ್ ಗೌಡ ಪ್ರಯತ್ನಿಸಿದ್ದಾರೆ. ಅವರು ಅಧ್ಯಕ್ಷರಾಗಲು ತಾಲೂಕಿನ ಜೆಡಿಎಸ್ ಕಾರ್ಯಕರ್ತ ರನ್ನಾಗಲಿ ಅಥವಾ ಪಕ್ಷಕ್ಕಾಗಿ ದುಡಿದ ಮುಖಂಡರನ್ನಾಗಲಿ ಸಂಪರ್ಕ ಮಾಡಿಲ್ಲ.
ಬೆರಳೆಣಿಕೆಯ ಜನರನ್ನು ಮುಂದಿಟ್ಟುಕೊಂಡು ಜಿಲ್ಲಾಧ್ಯಕ್ಷರ ಸಂಚಿನಿಂದ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರು ನನ್ನ ಮೇಲೆ ಎಷ್ಟಾದರೂ ಆರೋಪ ಮಾಡಲಿ ನಾನು ಸಹಿಸಿಕೊಳ್ಳುತ್ತೇನೆ.
ಆದರೆ ವಿ. ಎಸ್. ಎಸ್. ಎನ್. ವಿಚಾರದಲ್ಲಿ ವಯಸ್ಸಾದ ನನ್ನ ತಾಯಿಯನ್ನು ವಿನಾ ಕಾರಣ ಟೀಕಿಸಿದ್ದಾರೆ ಎಂದು ಬಾವುಕರಾದ ಆನಂದ್ ನಂತರ ಮಾತನಾಡಿ ಡೈರಿ ಚುನಾವಣೆಯಲ್ಲಿ ಖುದ್ದು ದೇವೇಗೌಡರು ಹೇಳಿದರೂ ಸಹಾ ಕೇಳದೆ ಬಿಜೆಪಿ ಅಭ್ಯರ್ಥಿ ಪರವಾಗಿ ಸ್ವಾರ್ಥಕ್ಕೋಸ್ಕರ ಕೆಲಸ ಮಾಡಿದ್ದು ಪಕ್ಷ ವಿರೋಧಿ ಚಟುವಟಿಕೆ ಅಲ್ಲವೇ. ಇದನ್ನು ವರಿಷ್ಟರು ಗಮನಿಸಬೇಕು. ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಮುನೇಗೌಡರು ಸ್ಪರ್ದಿಸಿದರೆ ಅವರಿಗೆ ಬೆಂಬಲವಾಗಿ ನಿಲ್ಲುತ್ತೇವೆ. ಒಂದು ವೇಳೆ ಮುನೇಗೌಡರು ಚುನಾವಣೆಗೆ ನಿಲ್ಲುವುದಿಲ್ಲ ಎಂದರೆ ತಾಲೂಕಿನಲ್ಲಿ ಮಹಿಳೆಯೊಬ್ಬರನ್ನು ನಿಲ್ಲಿಸಿ ಗೆಲ್ಲಿಸುತ್ತೇವೆ. ಒಟ್ಟಾರೆ ಮುಂಬರುವ ದಿನಗಳಲ್ಲಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರು ಇರಬೇಕೆಂದು ನನ್ನ ಗುರಿ. ಒಂದು ವೇಳೆ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರ ಮಾತು ಕೇಳಿ ರಾಜ್ಯ ವರಿಷ್ಟರು ನನ್ನನ್ನು ಪಕ್ಷದಿಂದ ಉಚ್ಚಾಟಿಸಿದರು ಏಕಾಂಗಿಯಾಗಿ ಪಕ್ಷದ ಗೆಲುವಿಗಾಗಿ ಕೆಲಸ ಮಾಡುತ್ತೇನೆ.
ಇನ್ನು ಮುಂದಾದರು ಯಾರನ್ನೂ ವಿಶ್ವಾಸಕ್ಕೆ ಪಡೆಯದೇ ಕೆಲವರನ್ನಿಟ್ಟುಕೊಂಡು ತಾಲೂಕು ಅಧ್ಯಕ್ಷರಾಗಿರುವ ಹರೀಶ್ ಗೌಡರು ತನ್ನ ಸ್ಥಾನದ ಜವಾಬ್ದಾರಿ ಅರಿತು ಕೆಲಸ ಮಾಡಲಿ ಅದು ಬಿಟ್ಟು ವಿನಾ ಕಾರಣ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸುವ ಕೆಲಸ ಮಾಡಿದರೆ ಮುಂಬರುವ ದಿನಗಳಲ್ಲಿ ಹರೀಶ್ ಗೌಡರಿಗೆ ತಾಲೂಕಿನ ಜೆಡಿಎಸ್ ಕಾರ್ಯಕರ್ತರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹುಸ್ಕೂರ್ ಆನಂದ್ ಹೇಳಿದರು.
ಸುದ್ದಿ ಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಪುಟ್ಟರಾಜು, ಶ್ರೀನಿವಾಸ್ ಗೌಡ, ರಾಮದಾಸ್, ವಕೀಲರಾದ ಸತೀಶ್, ಚನ್ನೇ ಗೌಡ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.



