ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ಮಾಜಿ ಸಚಿವ ಬಿ. ನಾಗೇಂದ್ರ, ಸಂಸದ ಇ. ತುಕಾರಾಂ ಹಾಗೂ ಶಾಸಕ ಭರತ್ರೆಡ್ಡಿ ವಿರುದ್ಧ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಮತ್ತು ಬಿಜೆಪಿ ಬೆಂಬಲಿತ ಜನಾರ್ದನ ರೆಡ್ಡಿ ಬಣದ ಪ್ರಮುಖ ನಾಯಕರಾದ ಮಾಜಿ ಸಂಸದ ಸಣ್ಣ ಫಕೀರಪ್ಪ, ಮಾಜಿ ಶಾಸಕರಾದ ಸೋಮಶೇಖರ್ರೆಡ್ಡಿ ಹಾಗೂ ಸುರೇಶ್ಬಾಬು ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಸರಣಿ ಆರೋಪಗಳನ್ನು ಮಾಡಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಚಿವ ಸ್ಥಾನ ಕಳೆದುಕೊಂಡ ಹತಾಶೆಯಲ್ಲಿ ನಾಗೇಂದ್ರ: ಸಣ್ಣ ಫಕೀರಪ್ಪ ಆರೋಪ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಂಸದ ಸಣ್ಣ ಫಕೀರಪ್ಪ, "ಸಚಿವ ಸ್ಥಾನ ಕಳೆದುಕೊಂಡ ಹತಾಶೆಯಿಂದ ನಾಗೇಂದ್ರ ಅವರು ಬಿಜೆಪಿ ನಾಯಕರ ವಿರುದ್ಧ ಮನಬಂದಂತೆ ಮಾತನಾಡುತ್ತಿದ್ದಾರೆ. ಎರಡು ಬಾರಿ ಶಾಸಕರಾಗಿದ್ದರೂ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿ ಮಾಡದೆ, ಕುಡಿಯುವ ನೀರಿನ ಸಮಸ್ಯೆ ಪರಿಹರಿಸದೆ ರಾಜಕೀಯ ಆರೋಪಗಳಲ್ಲಿ ತೊಡಗಿದ್ದಾರೆ. ಧೈರ್ಯವಿದ್ದರೆ 2028ರ ಚುನಾವಣೆಯಲ್ಲಿ ಗೆದ್ದು ತೋರಿಸಲಿ" ಎಂದು ಸವಾಲು ಎಸೆದರು. ಅಲ್ಲದೆ, ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣದ ಬಗ್ಗೆ ನಾಗೇಂದ್ರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ನಮ್ಮ ಅಭಿವೃದ್ಧಿ ಕೆಲಸಕ್ಕೆ ತಾಯಿಯ ಹೆಸರು: ಸೋಮಶೇಖರ್ರೆಡ್ಡಿ ಆಕ್ರೋಶ ಮಾಜಿ ಶಾಸಕ ಸೋಮಶೇಖರ್ರೆಡ್ಡಿ ಶಾಸಕ ಭರತ್ರೆಡ್ಡಿ ವಿರುದ್ಧ ಹರಿದಾಯ್ದು, "ನಮ್ಮ ಆಡಳಿತಾವಧಿಯಲ್ಲಿ ಕೈಗೊಂಡಿದ್ದ ಸುವರ್ಣ ಬಳ್ಳಾರಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಭರತ್ ರೆಡ್ಡಿ ಅವರು ತಮ್ಮ ತಾಯಿಯ ಹೆಸರಿಟ್ಟು ಶ್ರೇಯಸ್ಸು ಪಡೆಯಲು ಯತ್ನಿಸುತ್ತಿದ್ದಾರೆ" ಎಂದು ಆರೋಪಿಸಿದರು.
ಬಳ್ಳಾರಿಯಲ್ಲಿ ಓಸಿ, ಮರಳು ಮತ್ತು ಗಾಂಜಾ ಅಕ್ರಮ ಮಾಫಿಯಾಗಳು ವಿಜೃಂಭಿಸುತ್ತಿದ್ದು, ಗುತ್ತಿಗೆ ಕಾಮಗಾರಿಗಳಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯುತ್ತಿದೆ ಎಂದು ದೂರಿದ ಅವರು, ತಾವೇ ಮುಂದಿನ 2028ರ ಚುನಾವಣೆಯಲ್ಲಿ ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದರು.
ಸಂಸದ ತುಕಾರಾಂಗೆ ರಾಜೀನಾಮೆ ನೀಡಲು ಸುರೇಶ್ಬಾಬು ಸವಾಲು: ಸಂಸದ ಇ. ತುಕಾರಾಂ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಶಾಸಕ ಸುರೇಶ್ಬಾಬು, "ವಾಲ್ಮೀಕಿ ಹಗರಣದ ಹಣದಿಂದಲೇ ಲೋಕಸಭಾ ಚುನಾವಣೆಯಲ್ಲಿ ತುಕಾರಾಂ ಗೆದ್ದಿದ್ದಾರೆ. ಧೈರ್ಯವಿದ್ದರೆ ತುಕಾರಾಂ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿ, ಜನಾರ್ದನ ರೆಡ್ಡಿ ಕೂಡ ರಾಜೀನಾಮೆ ನೀಡುತ್ತಾರೆ. ಮರುಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂದು ನೋಡೋಣ," ಎಂದು ನೇರ ಸವಾಲು ಹಾಕಿದರು.
ಕುಟುಂಬದ ಒಳಗಿನ ಭಿನ್ನಾಪ್ರಾಯದಿಂದಾಗಿ ಕಳೆದ ಚುನಾವಣೆಯಲ್ಲಿ ಹಿನ್ನಡೆಯಾಗಿತ್ತು, ಆದರೆ ಈಗ ರೆಡ್ಡಿ ಬೆಂಬಲಿತ ನಾಯಕರೆಲ್ಲರೂ ಒಗ್ಗೂಡಿದ್ದು, ಈ ಬಾರಿ ನಮ್ಮನ್ನು ಸೋಲಿಸಿ ನೋಡಲಿ ಎಂದು ಸುರೇಶ್ ಬಾಬು ಸವಾಲು ಎಸೆದಿದ್ದಾರೆ. ಈ ಮೂಲಕ ಬಳ್ಳಾರಿ ರಾಜಕಾರಣದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯ ಮುನ್ನವೇ ರಾಜಕೀಯ ಕಾವು ಏರತೊಡಗಿದೆ.




