ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ ಸತತ ಮೂರನೇ ಬಾರಿಗೆ ಐತಿಹಾಸಿಕ ಜಯ ದಾಖಲಿಸಿರುವುದಕ್ಕೆ ಜೆಡಿಎಸ್ ಯುವ ಘಟಕದ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅವರು, "ಅಸ್ಸಾಂನಲ್ಲಿ ಸತತ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಎನ್ಡಿಎ ಮೈತ್ರಿಕೂಟದ ಸಾಧನೆ ಅಭೂತಪೂರ್ವ. ಈ ಗೆಲುವು ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವಕ್ಕೆ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಪ್ರತಿಮ ಚುನಾವಣಾ ತಂತ್ರಗಾರಿಕೆಗೆ ಸಂದ ಜಯವಾಗಿದೆ," ಎಂದು ಬಣ್ಣಿಸಿದ್ದಾರೆ.
ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಜನಪರ ಆಡಳಿತವನ್ನು ಶ್ಲಾಘಿಸಿರುವ ಅವರು, "ಅಸ್ಸಾಂನ ಜನತೆ ಮತ್ತೊಮ್ಮೆ ಎನ್ಡಿಎ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಐತಿಹಾಸಿಕ ವಿಜಯಕ್ಕಾಗಿ ಹಗಲಿರುಳು ಶ್ರಮಿಸಿದ ಪ್ರತಿಯೊಬ್ಬ ಎನ್ಡಿಎ ಕಾರ್ಯಕರ್ತನಿಗೂ ನನ್ನ ಅಭಿನಂದನೆಗಳು," ಎಂದು ತಿಳಿಸಿದ್ದಾರೆ.
ಈ ಗೆಲುವಿನೊಂದಿಗೆ ಈಶಾನ್ಯ ರಾಜ್ಯದಲ್ಲಿ ಎನ್ಡಿಎ ತನ್ನ ಬಲವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದ್ದು, ಹ್ಯಾಟ್ರಿಕ್ ಸಾಧನೆಯ ಸಂಭ್ರಮದಲ್ಲಿದೆ.


