ಚಂದ್ರವಳ್ಳಿ ನ್ಯೂಸ್, ಮಂಗಳೂರು:
ರಾಜ್ಯದಲ್ಲಿ ಆಡಳಿತ ನಡೆಸಿದ ಹಾಗೂ ಪ್ರಸ್ತುತ ಆಡಳಿತ ನಡೆಸುತ್ತಿರುವ ಸಾಂಪ್ರದಾಯಿಕ ರಾಜಕೀಯ ಪಕ್ಷಗಳು ಸಮಾಜದ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಹೀಗಾಗಿ ರಾಜ್ಯಕ್ಕೆ ಹೊಸ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಬರುವ ಜನವರಿಯಲ್ಲಿ ನೂತನ ಪ್ರಾದೇಶಿಕ ರಾಜಕೀಯ ಪಕ್ಷವನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಲಾಗುವುದು ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ತಿಳಿಸಿದ್ದಾರೆ.
ಕರಾವಳಿ ಪ್ರವಾಸದಲ್ಲಿರುವ ಅವರು ಶನಿವಾರ ಮಂಗಳೂರಿನ ಲೇಡಿಹಿಲ್ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, "ನೂತನ ಪಕ್ಷದ ನೋಂದಣಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಸಂವಿಧಾನಾತ್ಮಕ ಮೌಲ್ಯಗಳಾದ ಸಮಾನತೆ, ಸಾಮಾಜಿಕ ನ್ಯಾಯ, ಜಾತ್ಯತೀತತೆ ಹಾಗೂ ವೈಜ್ಞಾನಿಕ ಮನೋಭಾವವನ್ನು ಆಧಾರವಾಗಿಟ್ಟುಕೊಂಡು, ಸಂವಿಧಾನಿಕ ಪದಗಳನ್ನು ಒಳಗೊಂಡ ಹೆಸರಿನೊಂದಿಗೆ ಬೃಹತ್ ಸಮಾವೇಶ ನಡೆಸಿ ಪಕ್ಷವನ್ನು ಲಾಂಚ್ ಮಾಡಲಿದ್ದೇವೆ" ಎಂದರು.
ಸಿದ್ದಾಂತ ಆಧಾರಿತ ಪ್ರಾದೇಶಿಕ ಚಳವಳಿ:
"ನಾವು ಯಾವುದೇ ಒಬ್ಬ ನಟನ 'ಸ್ಟಾರ್ ಪವರ್' ಅಥವಾ 'ಅಭಿಮಾನಿ ಬಳಗ' ನೆಚ್ಚಿಕೊಂಡು ಪಕ್ಷ ಕಟ್ಟುತ್ತಿಲ್ಲ. ಡಾ. ಬಿ.ಆರ್. ಅಂಬೇಡ್ಕರ್, ಪೆರಿಯಾರ್ ಹಾಗೂ ಕಾನ್ಶೀರಾಮ್ ಅವರ ಆಶಯಗಳಡಿಯಲ್ಲಿ ಹೋರಾಟ ನಡೆಸುತ್ತಿರುವ ರೈತರು, ಚಳವಳಿಗಾರರು, ಬುದ್ಧಿಜೀವಿಗಳು ಹಾಗೂ ಯುವಕರನ್ನು ಸಂಘಟಿಸಿ ಸೈದ್ಧಾಂತಿಕ ನೆಲೆಯಲ್ಲಿ ಅಖಂಡ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸುತ್ತೇವೆ" ಎಂದು ಸ್ಪಷ್ಟಪಡಿಸಿದರು.
ನೀಟ್ ರದ್ದತಿಗೆ ಒತ್ತಾಯ:
ನೀಟ್ ಪರೀಕ್ಷೆಯ ಅಕ್ರಮಗಳ ಕುರಿತು ಪ್ರತಿಕ್ರಿಯಿಸಿದ ಚೇತನ್, "ನೀಟ್ ಎನ್ನುವ ಪರಿಕಲ್ಪನೆಯೇ ದೋಷಪೂರಿತವಾಗಿದೆ. ಇದು ಗ್ರಾಮೀಣ, ಬಡ ಹಾಗೂ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಮಾರಕವಾಗಿದ್ದು, ದುಬಾರಿ ಕೋಚಿಂಗ್ ಪಡೆಯುವ ಧನಿಕರಿಗೆ ಮಾತ್ರ ಲಾಭ ತಂದುಕೊಡುತ್ತಿದೆ. ಹಾಗಾಗಿ ದೇಶಾದ್ಯಂತ ನೀಟ್ ಸಂಪೂರ್ಣ ರದ್ದುಗೊಳಿಸಿ, ರಾಜ್ಯಗಳ ಮಟ್ಟದಲ್ಲೇ ಸಿಇಟಿ ಮಾದರಿಯ ಪರೀಕ್ಷೆಗಳ ಮೂಲಕ ವೈದ್ಯಕೀಯ ಸೀಟುಗಳನ್ನು ಹಂಚಿಕೆ ಮಾಡಬೇಕು" ಎಂದು ಆಗ್ರಹಿಸಿದರು.
ಬಿಡದಿ ಟೌನ್ಶಿಪ್ ಹಾಗೂ ಸರ್ಕಾರದ ವಿರುದ್ಧ ವಾಗ್ದಾಳಿ:
ಬಿಡದಿಯಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ 'ಸ್ಮಾರ್ಟ್ ಸಿಟಿ/ಟೌನ್ಶಿಪ್' ಮಾಡಿ ಸುಮಾರು 9,600 ಎಕರೆ ಫಲವತ್ತಾದ ರೈತರ ಭೂಮಿ ಕಬಳಿಸಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದ ಚೇತನ್, "ಇದು ರಿಯಲ್ ಎಸ್ಟೇಟ್, ಲ್ಯಾಂಡ್ ಮಾಫಿಯಾ ಹಾಗೂ ಕಾಂಟ್ರಾಕ್ಟರ್ಗಳ ಲಾಭಕ್ಕಾಗಿಯೇ ಹೊರತು ರೈತರ ಹಿತಕ್ಕಲ್ಲ. ಕಾಂಗ್ರೆಸ್ ಸರ್ಕಾರ ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳದೆ ಕೇವಲ ಬೆಂಗಳೂರನ್ನು ಮಾತ್ರ ಕೇಂದ್ರೀಕರಿಸುತ್ತಿದೆ" ಎಂದು ಟೀಕಿಸಿದರು.
ಇದೇ ವೇಳೆ ನಟ ಉಪೇಂದ್ರ ಅವರ 'ಪ್ರಜಾಕೀಯ' ಪಕ್ಷದ ಕುರಿತು ಮಾತನಾಡುತ್ತಾ, "ಬರಿ ಸೋಶಿಯಲ್ ಮೀಡಿಯಾ ಅಥವಾ ಟಿವಿ ಮಾಧ್ಯಮಗಳಲ್ಲಿದ್ದರೆ ಸಾಲದು, ಜನಸಾಮಾನ್ಯರ ಮಧ್ಯೆ ನಿಂತು ಹೋರಾಡುವ ಪ್ರತ್ಯಕ್ಷ ಎಮೋಷನಲ್ ಕನೆಕ್ಷನ್ ಬೇಕು. ಆ ಕನೆಕ್ಷನ್ ಪ್ರಜಾಕೀಯದಲ್ಲಿ ಕಾಣಿಸುತ್ತಿಲ್ಲ" ಎಂದರು.



