ಚಂದ್ರವಳ್ಳಿ ನ್ಯೂಸ್, ಕೊಪ್ಪಳ:
ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ (ಟಿ.ಬಿ. ಡ್ಯಾಂ) ಇತಿಹಾಸದಲ್ಲಿ ಜೂನ್ 25 ಹೊಸ ಸುವರ್ಣ ಅಧ್ಯಾಯ ಬರೆಯಲಾಗುತ್ತಿದೆ. ಡ್ಯಾಂನ ಕ್ರಸ್ಟ್ ಗೇಟ್ ದುರಂತಕ್ಕೆ ಶಾಶ್ವತ ಮುಕ್ತಿ ಹಾಡಿರುವ ಸರ್ಕಾರ, ನೂತನವಾಗಿ ಅಳವಡಿಸಲಾಗಿರುವ ಎಲ್ಲಾ 33 ಕ್ರಸ್ಟ್ ಗೇಟ್ಗಳನ್ನು ನಾಳೆ ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಿದೆ.
ಮಹಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊಪ್ಪಳ ತಾಲೂಕಿನ ಮುನಿರಾಬಾದ್ ವ್ಯಾಪ್ತಿಯ ಎಲ್ಲಾ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲೆಗಳಿಗೆ ನಾಳೆ ರಜೆ ಘೋಷಿಸಲಾಗಿದೆ.
ಈ ಐತಿಹಾಸಿಕ ಕಾರ್ಯಕ್ರಮದ ಪ್ರಮುಖ ವಿವರಗಳು:
ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಮಹಾಸಂಗಮ:
ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಮುಖ್ಯಮಂತ್ರಿಗಳು ಆಗಮಿಸುತ್ತಿದ್ದಾರೆ. ಆಂಧ್ರಪ್ರದೇಶ ಸಿಎಂ ಎನ್. ಚಂದ್ರಬಾಬು ನಾಯ್ಡು ಅವರ ಭೇಟಿ ಈಗಾಗಲೇ ಖಚಿತವಾಗಿದ್ದು, ಅಧಿಕೃತ ಪ್ರವಾಸ ಪಟ್ಟಿ ಬಿಡುಗಡೆಯಾಗಿದೆ.
ಇಂದು ಬೆಳಿಗ್ಗೆ 9.40ಕ್ಕೆ ಚಂದ್ರಬಾಬು ನಾಯ್ಡು ಅವರು ಮುನಿರಾಬಾದ್ಗೆ ಆಗಮಿಸಲಿದ್ದಾರೆ.
ಬೆಳಿಗ್ಗೆ 10 ಗಂಟೆಗೆ ಟಿ.ಬಿ. ಡ್ಯಾಂಗೆ ಭೇಟಿ ನೀಡಿ ಗೇಟ್ಗಳ ಉದ್ಘಾಟನೆ ನೆರವೇರಿಸಲಿದ್ದಾರೆ.
ಮಧ್ಯಾಹ್ನ 2.00 ಗಂಟೆಯವರೆಗೂ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಆಂಧ್ರಕ್ಕೆ ಮರಳಲಿದ್ದಾರೆ.
ಮದುವಣಗಿತ್ತಿಯಂತೆ ಸಿಂಗಾರಗೊಂಡ ಮುನಿರಾಬಾದ್:
ಉದ್ಘಾಟನಾ ಸಮಾರಂಭಕ್ಕಾಗಿ ಮುನಿರಾಬಾದ್ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಭಾರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜರ್ಮನ್ ಮಾದರಿಯ ಬೃಹತ್ ಹವಾಮಾನ ನಿಯಂತ್ರಿತ ಟೆಂಟ್ ಅಳವಡಿಸಲಾಗಿದ್ದು, ಗಣ್ಯರಿಗಾಗಿ ಹೈಟೆಕ್ ವೇದಿಕೆ ಸಜ್ಜಾಗಿದೆ. ಹೈದರಾಬಾದ್ ಕರ್ನಾಟಕ ಭಾಗದ ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಿಂದ ಸಾವಿರಾರು ರೈತರು ಆಗಮಿಸುವ ನಿರೀಕ್ಷೆಯಿದ್ದು, 5 ಸಾವಿರಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ಏನಿದು ಕ್ರಸ್ಟ್ ಗೇಟ್ ಇತಿಹಾಸ?:
ಕಳೆದ 2024ರ ಡಿಸೆಂಬರ್ನಲ್ಲಿ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಚೈನ್ಕಟ್ಆಗಿ ಕೊಚ್ಚಿಹೋಗಿತ್ತು. ಇದರಿಂದಾಗಿ ಲಕ್ಷಾಂತರ ಕ್ಯೂಸೆಕ್ ನೀರು ವ್ಯರ್ಥವಾಗಿ ನದಿಗೆ ಹರಿದು ಹೋಗಿ, ನಾಲ್ಕೂ ಜಿಲ್ಲೆಗಳ ರೈತರು ಆತಂಕಕ್ಕೆ ಒಳಗಾಗಿದ್ದರು.
ಆಗ ರಾಜ್ಯ ಸರ್ಕಾರ ಈ ಸವಾಲನ್ನು ಅತ್ಯಂತ ಗಂಭೀರವಾಗಿ ಸ್ವೀಕರಿಸಿತು. ಕೇವಲ ಒಂದು ಗೇಟ್ ದುರಸ್ತಿ ಮಾಡುವ ಬದಲು, ಭವಿಷ್ಯದ ಸುರಕ್ಷತೆಯ ದೃಷ್ಟಿಯಿಂದ ಇಡೀ ಡ್ಯಾಂನ ಎಲ್ಲಾ ಗೇಟ್ಗಳನ್ನೇ ಬದಲಾಯಿಸಲು ನಿರ್ಧರಿಸಿತು. ಇದೀಗ ಬರೋಬ್ಬರಿ 51 ಕೋಟಿ ರೂ. ವೆಚ್ಚದಲ್ಲಿ, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಒಟ್ಟು 33 ನೂತನ ಕ್ರಸ್ಟ್ ಗೇಟ್ಗಳನ್ನು ಯಶಸ್ವಿಯಾಗಿ ಅಳವಡಿಸಿ ಮುಗಿಸಲಾಗಿದೆ. ಈ ಮೂಲಕ ರೈತರ ಆತಂಕ ದೂರಾಗಿದ್ದು, ಜಲಾಶಯಕ್ಕೆ ಸಂಪೂರ್ಣ ಹೊಸ ಕವಚ ಸಿಕ್ಕಂತಾಗಿದೆ.



