ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಧಾನಿಯ ರಸ್ತೆ ಗುಂಡಿಗಳು ಹಾಗೂ ಕಸದ ಸಮಸ್ಯೆಯನ್ನು ಮುಂದಿಟ್ಟುಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಭಾರಿ ಆಕ್ರೋಶ ವ್ಯಕ್ತಪಡಿಸಿದೆ. ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಟ್ವಿಟರ್ (X) ಮೂಲಕ ನೇರ ವಾಗ್ದಾಳಿ ನಡೆಸಿರುವ ಜೆಡಿಎಸ್, "ಮೊದಲು ನಿಮ್ಮ ಮುಖ್ಯಮಂತ್ರಿ ಇಮೇಜ್ನ ರೋಡ್ ಶೋ ನಿಲ್ಲಿಸಿ, ರಸ್ತೆ ಗುಂಡಿಗಳನ್ನು ಮುಚ್ಚಿಸಿ" ಎಂದು ಆಗ್ರಹಿಸಿದೆ.
ಯಮಗುಂಡಿಗಳ ರಾಜಧಾನಿ: ಜೆಡಿಎಸ್ ಆಕ್ರೋಶ-
ಬೆಂಗಳೂರಿನ ಸದ್ಯದ ಪರಿಸ್ಥಿತಿಯನ್ನು ಕಟುವಾಗಿ ಟೀಕಿಸಿರುವ ಜೆಡಿಎಸ್, ನಗರದಲ್ಲಿ ಸುಮಾರು 5,000ಕ್ಕೂ ಹೆಚ್ಚು ರಸ್ತೆ ಗುಂಡಿಗಳಿದ್ದು, ಅವುಗಳನ್ನು ತಕ್ಷಣವೇ ಮುಚ್ಚಿಸುವ ಮೂಲಕ ನಾಗರಿಕರಿಗೆ 'ಯಮಗುಂಡಿ'ಗಳಿಂದ ಮುಕ್ತಿ ಕೊಡಿಸಬೇಕೆಂದು ಒತ್ತಾಯಿಸಿದೆ.
"ಸಣ್ಣ ಮಳೆಗೇ ಸಿಲಿಕಾನ್ ಸಿಟಿಯ ರಸ್ತೆಗಳು ನದಿಯಾಗುತ್ತಿವೆ. ವಾಹನ ಸವಾರರು ಪ್ರತಿದಿನ ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಮೂರು ವರ್ಷಗಳಿಂದ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದರೂ ನಗರದ ಗುಂಡಿಗಳನ್ನು ಮುಚ್ಚಲು ನಿಮ್ಮಿಂದ ಸಾಧ್ಯವಾಗಿಲ್ಲ" ಎಂದು ಜೆಡಿಎಸ್ ನೇರವಾಗಿ ಡಿ.ಕೆ. ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
2,000 ಕೋಟಿ ರೂ. ಹಣ ಯಾರ ಜೇಬು ಸೇರುತ್ತಿದೆ?
ರಾಜಧಾನಿಯ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತು ಪ್ರಶ್ನೆ ಎತ್ತಿರುವ ಪಕ್ಷವು, "ಬೆಂಗಳೂರು ರಸ್ತೆ ಅಭಿವೃದ್ಧಿಗೆ ಬಿಡುಗಡೆಯಾದ 2,000 ಕೋಟಿ ರೂಪಾಯಿ ಹಣ ಯಾರ ಜೇಬು ಸೇರುತ್ತಿದೆ? ವೈಟ್ ಟಾಪಿಂಗ್ ಹೆಸರಿನಲ್ಲಿ ಆಮೆಗತಿಯಲ್ಲಿ ಲೂಟಿ ನಡೆಯುತ್ತಿದ್ದು, ಇದು ಇನ್ಯಾವಾಗ ನಿಲ್ಲುತ್ತದೆ?" ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
'ಕಸದ ನಗರ'ವಾದ ಬೆಂಗಳೂರು; GBA ವಿರುದ್ಧ ಕಿಡಿ
ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿತನದಿಂದಾಗಿ ಬೆಂಗಳೂರು ಇವತ್ತು "ಗುಂಡಿಗಳ ನಗರ" ಮತ್ತು "ಕಸದ ನಗರ"ವಾಗಿ ಮಾರ್ಪಟ್ಟಿದೆ ಎಂದು ಜೆಡಿಎಸ್ ದೂರಿದೆ. ರಸ್ತೆ ಬದಿ ಹಾಗೂ ಫುಟ್ಪಾತ್ಗಳಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದು ದುರ್ವಾಸನೆ ಬೀರುತ್ತಿದ್ದರೂ, ಬೃಹತ್ ಬೆಂಗಳೂರು ಪ್ರಾಧಿಕಾರ (GBA) ಕಣ್ಣು ಮುಚ್ಚಿ ಕುಳಿತಿದೆ ಎಂದು ಆಪಾದಿಸಿದೆ.
ಅಧ್ಯಯನ ಪ್ರವಾಸ ಶೂನ್ಯ, ಸಾಧನೆ ಶೂನ್ಯ!
ಕಸದ ಸಮಸ್ಯೆ ಪರಿಹರಿಸುವ ನೆಪದಲ್ಲಿ ಸಚಿವರು ನಡೆಸಿದ ವಿದೇಶಿ ಹಾಗೂ ಹೊರರಾಜ್ಯಗಳ ಪ್ರವಾಸವನ್ನು ಜೆಡಿಎಸ್ ಲೇವಡಿ ಮಾಡಿದೆ. "ಚೆನ್ನೈ, ಹೈದರಾಬಾದ್, ದೆಹಲಿ ಸೇರಿದಂತೆ ಹಲವೆಡೆ ಅಧ್ಯಯನ ಪ್ರವಾಸದ ನೆಪದಲ್ಲಿ ಟೂರ್ ಮಾಡಿದ್ದಷ್ಟೇ ನಿಮ್ಮ ಸಾಧನೆ, ಆದರೆ ಅದರಿಂದ ಸಿಕ್ಕ ಪರಿಹಾರ ಮಾತ್ರ ಶೂನ್ಯ. ಬೆಂಗಳೂರನ್ನು 'ಬ್ರ್ಯಾಂಡ್ ಬೆಂಗಳೂರು' ಮಾಡುವ ಬದಲಿಗೆ, ಜನಸಾಮಾನ್ಯರ ಪಾಲಿಗೆ 'ಬ್ಯಾಡ್ ಬೆಂಗಳೂರು' ಮಾಡಿದ್ದೇ ನಿಮ್ಮ ಸಾಧನೆಯಾಗಿದೆ" ಎಂದು ಜೆಡಿಎಸ್ ಲೇವಡಿ ಮಾಡಿದೆ.
ರಾಜಧಾನಿಯ ಮೂಲಸೌಕರ್ಯಗಳ ಕುಸಿತ ಮತ್ತು ಆಡಳಿತದ ವೈಫಲ್ಯವನ್ನು ಮುಂದಿಟ್ಟುಕೊಂಡು ಜೆಡಿಎಸ್ ನಡೆಸಿರುವ ಈ ವಾಗ್ದಾಳಿ ಸದ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.



