ಚಂದ್ರವಳ್ಳಿ ನ್ಯೂಸ್, ಕಲಬುರಗಿ:
ಪೊಲೀಸ್ ಠಾಣೆಯ ಲಾಕಪ್ನಿಂದಲೇ ಮಧ್ಯರಾತ್ರಿ ಸಿನಿಮೀಯ ಮಾದರಿಯಲ್ಲಿ ಪರಾರಿಯಾಗಿದ್ದ ಪೋಕ್ಸೋ ಪ್ರಕರಣದ ಆರೋಪಿಯನ್ನು ಕೊನೆಗೂ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಅಫಜಲಪುರ ತಾಲೂಕಿನ ಹಳ್ಳಿಯೊಂದರಲ್ಲಿ ಅಡಗಿದ್ದ ಆರೋಪಿ ಮಂಜುನಾಥ್ನನ್ನು ವಿಶೇಷ ಕಾರ್ಯಾಚರಣೆ ನಡೆಸಿ ಮರುಬಂಧಿಸಲಾಗಿದೆ.
ಇದೇ ವೇಳೆ, ಆರೋಪಿ ತಪ್ಪಿಸಿಕೊಳ್ಳಲು ಕಾರಣರಾದ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಕಠಿಣ ಆದೇಶ ಹೊರಡಿಸಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾಗಿತ್ತು ಆರೋಪಿಯ ಓಟ!:
ಪೋಕ್ಸೋ ಕಾಯ್ದೆಯಡಿ ವಾರದ ಹಿಂದಷ್ಟೇ ಮಂಜುನಾಥ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಆತನನ್ನು ಪತ್ತೆಹಚ್ಚಿ ಬಂಧಿಸಿದ್ದ ಪೊಲೀಸರು, ವಿಚಾರಣೆಗಾಗಿ ಅಫಜಲಪುರ ಪೊಲೀಸ್ ಠಾಣೆಯ ಲಾಕಪ್ನಲ್ಲಿ ಇರಿಸಿದ್ದರು. ಆದರೆ ಗುರುವಾರ ಮಧ್ಯರಾತ್ರಿ ಠಾಣೆಯಲ್ಲಿದ್ದವರೆಲ್ಲರೂ ಮಲಗಿದ್ದ ವೇಳೆ, ಆರೋಪಿ ಚಾಣಾಕ್ಷತನದಿಂದ ಲಾಕಪ್ನಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದನು. ಆರೋಪಿ ಠಾಣೆಯಿಂದ ಓಡುತ್ತಿರುವ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಮೂರು ರಾಜ್ಯಗಳಲ್ಲಿ ತೀವ್ರ ಶೋಧ:
ಲಾಕಪ್ನಿಂದಲೇ ಆರೋಪಿ ಜಾಗ ಖಾಲಿ ಮಾಡಿದ್ದರಿಂದ ಇಲಾಖೆಗೆ ತೀವ್ರ ಮುಖಭಂಗವಾಗಿತ್ತು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತಕ್ಷಣವೇ ವಿಶೇಷ ತಂಡಗಳನ್ನು ರಚಿಸಿದ ಪೊಲೀಸರು ಕರ್ನಾಟಕದ ಗಡಿ ಭಾಗಗಳು ಮಾತ್ರವಲ್ಲದೆ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಲ್ಲೂ ತೀವ್ರ ಶೋಧ ನಡೆಸಿದ್ದರು. ಕೊನೆಗೆ ಸಿಕ್ಕ ಖಚಿತ ಸುಳಿವು ಆಧರಿಸಿ ಅಫಜಲಪುರ ತಾಲೂಕಿನ ಹಳ್ಳಿಯೊಂದರಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಮೂವರು ಕಾನ್ಸ್ಟೇಬಲ್ಗಳು ಸಸ್ಪೆಂಡ್; ಪಿಎಸ್ಐಗೆ ನೋಟಿಸ್:
ಆರೋಪಿ ಪರಾರಿಯಾದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಎಸ್ಪಿ ಅಡ್ಡೂರು ಶ್ರೀನಿವಾಸಲು, ಅಂದು ರಾತ್ರಿ ಪಾಳಿಯಲ್ಲಿದ್ದ ಹೆಚ್ಸಿ/ ಕಾನ್ಸ್ಟೇಬಲ್ಗಳಾದ ರವಿದಾಸ್, ಶಿವಾನಂದ್ ಹಾಗೂ ಪ್ರಶಾಂತ್ ಅವರನ್ನು ಕರ್ತವ್ಯ ನಿರ್ಲಕ್ಷ್ಯದ ಆರೋಪದಡಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ.
ಅಲ್ಲದೆ, ಠಾಣೆಯ ಮೇಲ್ವಿಚಾರಣೆಯಲ್ಲಿ ಲೋಪ ಎಸಗಿರುವ ಹಿನ್ನೆಲೆಯಲ್ಲಿ ಅಫಜಲಪುರ ಪಿಎಸ್ಐ ಮತ್ತು ಸಿಪಿಐ ಅವರಿಗೂ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.



