ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಾರ್ವಜನಿಕರ ಕುಂದುಕೊರತೆಗಳಿಗೆ ಕಾಲಮಿತಿಯಲ್ಲಿ ಪರಿಹಾರ ಒದಗಿಸುವ ಉದ್ದೇಶದಿಂದ ಜಾರಿಗೆ ತರಲಾದ 'ಪ್ರಜಾ ಸೇವಾ ಇಲಾಖೆ' ಯೋಜನೆಯಡಿ, ಚಿತ್ರದುರ್ಗ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ 'ಪ್ರಜಾ ಸೇವಾ ಶಾಖೆ'ಯನ್ನು ಪ್ರಾರಂಭಿಸಲಾಗಿದೆ. ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ, ‘ಗ್ರಾಮ ಫೋನ್’ ಗ್ರಾಮೀಣ ಉಚಿತ ಸಹಾಯವಾಣಿ ಸಂಖ್ಯೆ 1800-425-1978 ನ್ನು ಪ್ರಜಾ ಸೇವಾ ಶಾಖೆ ಸಂಯೋಜನೆ ಗೊಳಿಸಲಾಗಿದೆ ಎಂದು ಜಿ.ಪಂ.ಸಿಇಓ ಡಾ.ಆಕಾಶ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, 'ಪ್ರಜಾ ಸೇವಾ ಶಾಖೆ' ಮೂಲಕ ಗ್ರಾಮೀಣ ಭಾಗದ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಿ, ಉತ್ತಮವಾಗಿ ಸೇವೆಗಳನ್ನು ಒದಗಿಸಲಾಗುವುದು. ಇದಕ್ಕಾಗಿ ಕಾರ್ಯಾಚರಿಸುತ್ತಿರುವ ‘ಗ್ರಾಮ ಫೋನ್’ ಗ್ರಾಮೀಣ ಉಚಿತ ಸಹಾಯವಾಣಿ ಸಂಖ್ಯೆ: 1800-425-1978 ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ.
ಕಳೆದ ವರ್ಷದ ನವೆಂಬರ್ನಿಂದ ಕಾರ್ಯಾರಂಭ ಮಾಡಿರುವ ಗ್ರಾಮಪೋನ್ ಸಹಾಯವಾಣಿಗೆ ಚಿತ್ರದುರ್ಗ ಜಿಲ್ಲೆಯ ಗ್ರಾಮೀಣ ಭಾಗದ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 2,747 ಕರೆಗಳು ದಾಖಲಾಗಿವೆ.
ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿ ನೇಮಕ:
ಈ ಉಚಿತ ಸಹಾಯವಾಣಿಯ ಕಾರ್ಯಾಚರಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಆಡಳಿತಾತ್ಮಕ ವ್ಯವಸ್ಥೆಯನ್ನು ಬಲಪಡಿಸಲಾಗಿದೆ. ಪ್ರತಿಯೊಂದು ತಾಲೂಕಿನಲ್ಲಿಯೂ ಒಬ್ಬರು ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಸಹಾಯವಾಣಿ ಮೂಲಕ ದಾಖಲಾಗುವ ದೂರುಗಳ ಕುರಿತು ಇವರು ಕ್ರಮ ಕೈಗೊಳ್ಳಲಿದ್ದಾರೆ. ಬಂದಂತಹ ದೂರುಗಳನ್ನು ಸಂಬಂಧಿಸಿದ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿ ಲಾಗಿನ್ಗೆ ರವಾನಿಸಿ ಪರಿಹಾರ ಕಂಡುಕೊಳ್ಳಲಾಗುತ್ತದೆ.
ಸೇವೆಯು ಪ್ರಾರಂಭವಾದಂದಿನಿಂದ ಇಲ್ಲಿಯವರೆಗೆ ಸ್ವೀಕರಿಸಲಾದ ಒಟ್ಟು 2,747 ಕರೆಗಳ ಪೈಕಿ, ಇ-ಸ್ವತ್ತು ಯೋಜನೆಗೆ ಸಂಬಂಧಿಸಿದಂತೆ ಅತ್ಯಧಿಕ ಅಂದರೆ, 948 ದೂರುಗಳು ದಾಖಲಾಗಿವೆ.
ಉಳಿದಂತೆ ಮನರೇಗಾ (VB GRAM G) ಯೋಜನೆಯಡಿ 444 ಕರೆಗಳು, ಗ್ರಾಮೀಣ ಕುಡಿಯುವ ನೀರು ಇಲಾಖೆಗೆ ಸಂಬಂಧಿಸಿದಂತೆ 402 ಕರೆಗಳು ಹಾಗೂ ನೈರ್ಮಲ್ಯ ವಿಷಯಕ್ಕೆ ಸಂಬಂಧಿಸಿದಂತೆ 204 ಕರೆಗಳನ್ನು ಸ್ವೀಕರಿಸಲಾಗಿದೆ. ಇದಲ್ಲದೆ ಇತರ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಒಟ್ಟು 749 ಕರೆಗಳು ದಾಖಲಾಗಿವೆ.
ಕಡಿಮೆ ಅವಧಿಯಲ್ಲಿಯೇ ಜಿಲ್ಲೆಯ ಗ್ರಾಮೀಣ ಜನತೆ ಈ ಉಚಿತ ಸಹಾಯವಾಣಿಯ ಸೇವೆಯನ್ನು ಯಶಸ್ವಿಯಾಗಿ ಬಳಸಿಕೊಂಡಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿಯೂ ‘ಪ್ರಜಾ ಸೇವಾ ಶಾಖೆ’ ಅಡಿಯಲ್ಲಿ 'ಗ್ರಾಮ ಫೋನ್' ಸೇವೆ ಮುಂದುವರಿಯಲಿದ್ದು, ಗ್ರಾಮೀಣ ಭಾಗದ ಸಾರ್ವಜನಿಕರು ತಮ್ಮ ಯಾವುದೇ ಕುಂದುಕೊರತೆ ಅಥವಾ ಅಹವಾಲುಗಳಿದ್ದಲ್ಲಿ ಈ ಉಚಿತ ಸಹಾಯವಾಣಿಯನ್ನು ಸದುಪಯೋಗಪಡಿಸಿಕೊಂಡು ಪರಿಹರಿಸಿಕೊಳ್ಳಬಹುದು ಎಂದು ಜಿ.ಪಂ.ಸಿಇಓ ಡಾ.ಆಕಾಶ್ ತಿಳಿಸಿದ್ದಾರೆ.



