ಚಂದ್ರವಳ್ಳಿ ನ್ಯೂಸ್, ಭೋಪಾಲ್:
ಮಧ್ಯಪ್ರದೇಶದ ರಾಜ್ಯಸಭಾ ಚುನಾವಣೆ ದಿನದಿಂದ ದಿನಕ್ಕೆ ಭಾರೀ ಕುತೂಹಲ ಮೂಡಿಸುತ್ತಿದೆ. ಆಡಳಿತಾರೂಢ ಬಿಜೆಪಿ ಅನಿರೀಕ್ಷಿತವಾಗಿ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ವಿರೋಧ ಪಕ್ಷ ಕಾಂಗ್ರೆಸ್, ತನಗೆ ಎದುರಾಗಿರುವ 'ಅಡ್ಡ ಮತದಾನ' ಹಾಗೂ ರೆಸಾರ್ಟ್ ರಾಜಕೀಯದ ಭೀತಿಯಿಂದಾಗಿ ತನ್ನ ಶಾಸಕರನ್ನು ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಸ್ಥಳಾಂತರಿಸಲು ತುರ್ತು ಸಿದ್ಧತೆ ನಡೆಸಿದೆ. ಜೂನ್ 18 ರಂದು ಚುನಾವಣೆ ನಡೆಯಲಿದ್ದು, ಮಧ್ಯಪ್ರದೇಶದ ರಾಜಕೀಯ ವಲಯದಲ್ಲಿ ಈಗ ಹೈಡ್ರಾಮಾ ಶುರುವಾಗಿದೆ.
ಸಂಖ್ಯಾಬಲದ ಲೆಕ್ಕಾಚಾರ ಹೀಗಿದೆ:
ಒಟ್ಟು ವಿಧಾನಸಭೆ ಬಲ: 229 ಶಾಸಕರು. ಗೆಲುವಿಗೆ ಬೇಕಾದ ಕನಿಷ್ಠ ಮತಗಳು: ಒಬ್ಬ ಅಭ್ಯರ್ಥಿಗೆ 58 ಪ್ರಥಮ ಪ್ರಾಶಸ್ತ್ಯದ ಮತಗಳು.
ಬಿಜೆಪಿ ಬಲ: 164 ಶಾಸಕರು (ಮೊದಲ 2 ಸ್ಥಾನಗಳು ಸುಲಭವಾಗಿ ಜಯ) ಕಾಂಗ್ರೆಸ್ ಬಲ: 1 ಸ್ಥಾನ ಗೆಲ್ಲಲು ಅಗತ್ಯವಿರುವ ಸಂಖ್ಯಾಬಲ ಹೊಂದಿದೆ.
ಕಣ ರಂಗೇರಿಸಿದ ಬಿಜೆಪಿ 'ಮಾಸ್ಟರ್ ಸ್ಟ್ರೋಕ್':
ಬಿಜೆಪಿ ಈಗಾಗಲೇ ತರುಣ್ ಚುಗ್ ಮತ್ತು ರಜನೀಶ್ ಅಗರ್ವಾಲ್ ಅವರನ್ನು ಕಣಕ್ಕಿಳಿಸಿ ಮೊದಲ ಎರಡು ಸ್ಥಾನಗಳನ್ನು ಗಟ್ಟಿ ಮಾಡಿಕೊಂಡಿತ್ತು. ಇತ್ತ ಕಾಂಗ್ರೆಸ್, ರಾಹುಲ್ ಗಾಂಧಿ ಅವರ ಆಪ್ತೆ ಹಾಗೂ ಮಾಜಿ ಸಂಸದೆ ಮೀನಾಕ್ಷಿ ನಟರಾಜನ್ ಅವರನ್ನು ತನ್ನ ಏಕೈಕ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿ ನಿರಾಳವಾಗಿತ್ತು. ಆದರೆ, ನಾಮಪತ್ರ ಸಲ್ಲಿಕೆಯ ಕೊನೆಯ ದಿನದಂದು ಬಿಜೆಪಿ ಮಹೇಶ್ ಕೇವತ್ ಅವರನ್ನು ಮೂರನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್ ಪಾಳಯದಲ್ಲಿ ನಡುಕ ಹುಟ್ಟಿಸಿದೆ. ಮೂರನೇ ಸೀಟು ಗೆಲ್ಲಲು ಬಿಜೆಪಿಗೆ ಕೇವಲ 8 ಮತಗಳ ಕೊರತೆಯಿದ್ದು, ಇದುವೇ ಈಗ 'ಆಪರೇಷನ್ ಕಮಲ'ದ ಆತಂಕಕ್ಕೆ ಕಾರಣವಾಗಿದೆ.
ಬೆಂಗಳೂರಿಗೆ ಶಾಸಕರು?:
ವಿರೋಧ ಪಕ್ಷದ ನಾಯಕ ಉಮಂಗ್ ಸಿಂಘಾರ್ ಅವರ ನಿವಾಸದಲ್ಲಿ ತಡರಾತ್ರಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ತುರ್ತು ಸಭೆಯಲ್ಲಿ ಶಾಸಕರನ್ನು ರಾಜ್ಯದಿಂದ ಹೊರಗೆ ಕಳುಹಿಸುವ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ.
ಕಾಂಗ್ರೆಸ್ ಶಾಸಕರಾದ ವಿಜಯ್ ರೇವನಾಥ್ ಚೌರೆ, ಯಾದವೇಂದ್ರ ಸಿಂಗ್ ಮತ್ತು ಬಾಬು ಜಾಂಡೆಲ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, "ಪಕ್ಷದ ಒಗ್ಗಟ್ಟನ್ನು ಕಾಯ್ದುಕೊಳ್ಳಲು ಎಲ್ಲಾ ಶಾಸಕರನ್ನು ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದ ಬೆಂಗಳೂರಿಗೆ ಸ್ಥಳಾಂತರಿಸಲಾಗುತ್ತಿದೆ," ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
"ನೋಟಿನ ಚೀಲ ಹಿಡಿದು ಬಂದಿದ್ದಾರೆ ಬಿಜೆಪಿಗರು!":
ವಿಪಕ್ಷ ನಾಯಕ ಉಮಂಗ್ ಸಿಂಘಾರ್ ಅವರು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. "ಬಿಜೆಪಿ ನಾಯಕರು ನೋಟುಗಳಿಂದ ತುಂಬಿದ ಚೀಲಗಳೊಂದಿಗೆ ನಮ್ಮ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ ಎಂದು ಕೆಲವು ಶಾಸಕರು ನಮಗೆ ತಿಳಿಸಿದ್ದಾರೆ. ಆದರೆ ನಮ್ಮ ಶಾಸಕರು ಆ ಆಮಿಷಕ್ಕೆ ಬಲಿಯಾಗಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಶಾಸಕರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸುತ್ತಿದ್ದೇವೆ," ಎಂದು ಅವರು ಹೇಳಿದ್ದಾರೆ.
2020ರ ಇತಿಹಾಸ ಮರುಕಳಿಸುವ ಭೀತಿ!:
ಕಾಂಗ್ರೆಸ್ ಇಷ್ಟೊಂದು ಅಲರ್ಟ್ ಆಗಲು ಬಲವಾದ ಕಾರಣವಿದೆ. 2020 ರಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ಬಂಡಾಯವೆದ್ದು ರಾಜೀನಾಮೆ ನೀಡಿದ್ದರಿಂದ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನಗೊಂಡಿತ್ತು. ಹಳೇ ಇತಿಹಾಸ ಮರುಕಳಿಸಬಾರದು ಮತ್ತು ಜೂನ್ 18 ರ ಚುನಾವಣೆಯಲ್ಲಿ ಮೀನಾಕ್ಷಿ ನಟರಾಜನ್ ಅವರ ಗೆಲುವಿಗೆ ಯಾವುದೇ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ಕಾಂಗ್ರೆಸ್ ಈಗ ಹೈಕಮಾಂಡ್ ಸೂಚನೆಯಂತೆ ಶಾಸಕರನ್ನು ಬೆಂಗಳೂರಿನ ರೆಸಾರ್ಟ್ಗೆ ಶಿಫ್ಟ್ ಮಾಡಲು ಮುಂದಾಗಿದೆ.



