ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಲಿಕಾನ್ ಸಿಟಿಯಲ್ಲಿ ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕೈಗೊಂಡಿರುವ 'ಸುರಕ್ಷಿತ ಪಾದಚಾರಿ ಮಾರ್ಗ' ಅಭಿಯಾನದ ವಿರುದ್ಧ ಈಗ ವಿರೋಧ ಪಕ್ಷಗಳು ತೀವ್ರ ಆಕ್ರೋಶ ಹೊರಹಾಕಿವೆ. ಪಾದಚಾರಿಗಳ ಹಿತರಕ್ಷಣೆಯ ಸರ್ಕಾರದ ಕಳಕಳಿಯನ್ನು ಒಪ್ಪುತ್ತಲೇ, ಬಡ ವ್ಯಾಪಾರಿಗಳ ಹೊಟ್ಟೆಯ ಮೇಲೆ ಹೊಡೆಯುತ್ತಿರುವ ಸರ್ಕಾರದ "ದ್ವಂದ್ವ ಮತ್ತು ಎಡಬಿಡಂಗಿ ಧೋರಣೆ"ಯನ್ನು ಕಟುವಾಗಿ ಟೀಕಿಸಲಾಗಿದೆ.
ಫುಟ್ಪಾತ್ ತೆರವು ಕಾರ್ಯಾಚರಣೆ ಹೆಸರಿನಲ್ಲಿ ಬಡವರ ಬದುಕನ್ನು ಬೀದಿಗೆ ತಳ್ಳುತ್ತಿರುವುದನ್ನು ಪ್ರಶ್ನಿಸಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಹತ್ತು ಪ್ರಮುಖ ಪ್ರಶ್ನೆಗಳ ಬಾಣವನ್ನು ಬಿಡಲಾಗಿದೆ.
ಬಡವರ ಹೊಟ್ಟೆಮೇಲೆ ಗದಾಪ್ರಹಾರ: ಪ್ರಮುಖ ಪ್ರಶ್ನೆಗಳು
ತೋರಿಕೆಯ ಬಡವರ ಕಾಳಜಿ: ದಿನದ ಆದಾಯ ನಂಬಿ ಬದುಕುವ ಲಕ್ಷಾಂತರ ಬೀದಿಬದಿ ವ್ಯಾಪಾರಿಗಳನ್ನು ಏಕಾಏಕಿ ತೆರವುಗೊಳಿಸುತ್ತಿರುವುದು ಕಾಂಗ್ರೆಸ್ ಸರ್ಕಾರದ ಬಡವರ ಕಾಳಜಿ ಕೇವಲ ತೋರಿಕೆ ಎಂಬುದನ್ನು ಸಾಬೀತುಪಡಿಸುತ್ತಿಲ್ಲವೇ?
ಪುನರ್ವಸತಿ ಎಲ್ಲಿ?: ವ್ಯಾಪಾರಿಗಳನ್ನು ತೆರವುಗೊಳಿಸುವ ಮುನ್ನ ಅವರಿಗೆ ಸೂಕ್ತ ಪುನರ್ವಸತಿ ಅಥವಾ ಪರ್ಯಾಯ ವ್ಯವಸ್ಥೆಯನ್ನು ಸರ್ಕಾರ ಏಕೆ ಕಲ್ಪಿಸಿಲ್ಲ?
ಅಧಿಕಾರಿಗಳಿಗೆ ಶಿಕ್ಷೆ ಏನು?: ಇಷ್ಟು ದಿನಗಳ ಕಾಲ ಫುಟ್ಪಾತ್ಗಳಲ್ಲಿ ವ್ಯಾಪಾರ ಮಾಡಲು ಬಿಟ್ಟು, ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದ್ದ ಅಧಿಕಾರಿಗಳ ವಿರುದ್ಧ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ?
ಮಾರುಕಟ್ಟೆಗಳ ಕೊರತೆ: ಇಡೀ ಬೆಂಗಳೂರಿನಲ್ಲಿ ತರಕಾರಿ ವ್ಯಾಪಾರ ರಸ್ತೆ ಬದಿಯಲ್ಲೇ ನಡೆಯುತ್ತಿದೆ. ಇವರಿಗಾಗಿ ಸುಸಜ್ಜಿತ ತರಕಾರಿ ಮಾರುಕಟ್ಟೆಗಳನ್ನು ನಿರ್ಮಿಸುವುದು ಸರ್ಕಾರದ ಕರ್ತವ್ಯ ಅಲ್ಲವೇ?
ಆರ್ಥಿಕತೆಗೆ ಪೆಟ್ಟು: ದೇಶದ ಆರ್ಥಿಕತೆಗೆ ಶೇ. ೫೦ ರಷ್ಟು ಕೊಡುಗೆ ನೀಡುವ ಸಣ್ಣ ಮತ್ತು ಅತಿಸಣ್ಣ ವ್ಯಾಪಾರಿಗಳ ಮೇಲೆ ಇಂತಹ ಕ್ರಮ ಕೈಗೊಂಡರೆ, ಈಗಾಗಲೇ ಹದಗೆಟ್ಟಿರುವ ರಾಜ್ಯದ ಆರ್ಥಿಕತೆ ಮತ್ತಷ್ಟು ಪಾತಾಳಕ್ಕೆ ಕುಸಿಯುವುದಿಲ್ಲವೇ?
ಬಲಾಢ್ಯರ ಒತ್ತುವರಿಗೇಕೆ ವಿನಾಯಿತಿ?: ಬಡವರ ಮೇಲೆ ಪ್ರತಾಪ ತೋರುವ ಸರ್ಕಾರ, ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಬಲಾಢ್ಯರ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಮಳೆಗಾಲದಲ್ಲಿ ಬೆಂಗಳೂರು ಮುಳುಗಲು ಉಳ್ಳವರ ಒತ್ತುವರಿಯೇ ಕಾರಣವಲ್ಲವೇ?
ಕೇವಲ ಪಬ್ಲಿಸಿಟಿ ಸ್ಟಂಟ್?: ಫುಟ್ಪಾತ್ ತೆರವು ಕಾರ್ಯಾಚರಣೆಯ ಹೆಸರಿನಲ್ಲಿ ಸರ್ಕಾರಕ್ಕೆ ಕೇವಲ ಉಚಿತ ಪ್ರಚಾರ (ಮುನ್ನೆಲೆ ಸುದ್ದಿ) ಸಿಗಬಹುದೇ ವಿನಃ, ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲು ಸಾಧ್ಯವೇ?
"ಪಾದಚಾರಿಗಳ ಸುರಕ್ಷಿತ ಸಂಚಾರಕ್ಕೆ ಫುಟ್ಪಾತ್ ತೆರವು ಮಾಡಲೇಬೇಕು, ಅದಕ್ಕೆ ನಮ್ಮ ಸಹಮತವಿದೆ. ಆದರೆ, ಸ್ವಚ್ಛ ಬೆಂಗಳೂರಿನ ಹೆಸರಿನಲ್ಲಿ ದಿನದ ದುಡಿಮೆಯನ್ನೇ ನಂಬಿರುವ ಬಡ ಕುಟುಂಬಗಳ ಅನ್ನದ ದಾರಿಯನ್ನು ಬಂದ್ ಮಾಡುವುದು ಎಷ್ಟು ಸರಿ? ಬಡವರ ಬದುಕು ನಲುಗಲು ಬಿಡಲು ಸಾಧ್ಯವಿಲ್ಲ." ವಿರೋಧ ಪಕ್ಷದ ನಾಯಕರ ಆಕ್ರೋಶ.



