ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಭಗವಾನ್ ಶ್ರೀಕೃಷ್ಣನು ಅರ್ಜುನನಿಗೆ ಶ್ರೀಮದ್ ಭಗವದ್ಗೀತೆಯ ಪುರುಷೋತ್ತಮ ಯೋಗದ ಮೂರನೇ ಶ್ಲೋಕದಲ್ಲಿ ತಿಳಿಸಿದಂತೆ ನಮ್ಮ ವಿಷಯಾಸಕ್ತಿಯನ್ನು ಅಸಂಗ ಮತ್ತು ಅನಾಸಕ್ತಿಯ ಶಸ್ತ್ರದಿಂದ ಕಡೆದು ಹಾಕಬೇಕು ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯೆ ಹಾಗೂ ನಿವೃತ್ತ ಶಿಕ್ಷಕಿ ಪುಷ್ಪಲತಾ ವಿಜಯ್ ತಿಳಿಸಿದರು.
ನಗರದ ತ್ಯಾಗರಾಜನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು "ಶ್ರೀಮದ್ ಭಗವದ್ಗೀತೆಯ ಪುರುಷೋತ್ತಮ ಯೋಗದ ಮೂರನೇ ಶ್ಲೋಕದ ಪಠಣ-ಅರ್ಥ-ವಿವರಣೆ" ನೀಡುತ್ತ ಅವರು ಮಾತನಾಡಿದರು.
ಶ್ರೀಮದ್ ಭಗವದ್ಗೀತೆಯ ಸಾರರೂಪವೇ ಪುರುಷೋತ್ತಮ ಯೋಗ, ಅಶ್ವತ್ಥ ವೃಕ್ಷವನ್ನು ಭೌತಿಕ ಜಗತ್ತು ಮತ್ತು ದೇಹಕ್ಕೆ ಹೋಲಿಸಲಾಗಿದೆ.ಅಶ್ವತ್ಥ ವೃಕ್ಷದ ಆದಿ-ಅಂತ್ಯ-ಅಸ್ತಿಭಾರ-ರೂಪ-ಆಕಾರಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಮನುಷ್ಯನು ಅಶ್ವತ್ಥ ವೃಕ್ಷದ ಬೇರಿನಲ್ಲಿಂತೆ ನಮ್ಮಲ್ಲಿ ಆಳವಾಗಿ ಬೇರೂರಿರುವ ವಿಷಯಾಸಕ್ತಿಯನ್ನು ದೃಢ ಮನಸ್ಸಿನಿಂದ ಮತ್ತು ಅನಾಸಕ್ತಿ,ಅಸಂಗದಿಂದ ಕಡೆದು ಹಾಕಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಎಚ್ ಲಕ್ಷ್ಮೀದೇವಮ್ಮ, ಕೆ.ಎಸ್.ತಿಪ್ಪಮ್ಮ ನಾಗರಾಜ್, ಎಂ ಲಕ್ಷ್ಮೀದೇವಮ್ಮ, ಗೀತಾ ಪ್ರಕಾಶ್, ವಿಜಯಲಕ್ಷ್ಮೀ, ಅನಂತಮ್ಮ, ಅನುಸೂಯ ರಾಘವೇಂದ್ರ, ಯತೀಶ್ ಎಂ ಸಿದ್ದಾಪುರ, ಸರಸ್ವತಿ, ಸುನೀತಾ, ತಿಪ್ಪಮ್ಮ ಉಮಾಶಂಕರ್, ನೇತ್ರಾ ಮಂಜುನಾಥ, ಪ್ರಮೀಳಾ ಜಗದೀಶ್, ಪ್ರೇಮಾ ಸೇರಿದಂತೆ ಸದ್ಭಕ್ತರು ಉಪಸ್ಥಿತರಿದ್ದರು.



