ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿರುವುದು ತೀವ್ರ ಹೃದಯ ವಿದ್ರಾವಕ ಸಂಗತಿಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ಅವರ ರಾಜೀನಾಮೆ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪತ್ರ ಬರೆದಿರುವ ಅವರು, ಮಾಜಿ ಸಿಎಂ ಕೊಡುಗೆಗಳು ಹಾಗೂ ಅವರೊಂದಿಗಿನ ರಾಜಕೀಯ ಒಡನಾಟವನ್ನು ನೆನೆದಿದ್ದಾರೆ.
ಬಜೆಟ್ ತಜ್ಞ, ಜನಪ್ರಿಯ ನಾಯಕ:
"ನುಡಿದಂತೆ ನಡೆದ ಜನನಾಯಕ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿರುವುದು ಹೃದಯವನ್ನು ಭಾರವಾಗಿಸಿದೆ" ಎಂದು ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಅಪರೂಪದ ಸಾಧನೆ: ರಾಜ್ಯದ ಇತಿಹಾಸದಲ್ಲೇ ಅತಿ ಹೆಚ್ಚು ಅಂದರೆ 17 ಬಜೆಟ್ಗಳನ್ನು ಮಂಡಿಸಿದ ಅಪರೂಪದ ಸಾಧನೆ ಅವರದ್ದಾಗಿದ್ದು, ತಾವೊಬ್ಬ ಆರ್ಥಿಕ ತಜ್ಞ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಐತಿಹಾಸಿಕ ಯೋಜನೆಗಳು: ಸುಮಾರು 8 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಸಿದ್ದರಾಮಯ್ಯ ಅವರು ರೈತರ ಸಾಲಮನ್ನಾ, ಅನ್ನಭಾಗ್ಯ, ಕ್ಷೀರಭಾಗ್ಯ ಹಾಗೂ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೂಲಕ ನಾಡಿಗೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಬಸವ ತತ್ವಕ್ಕೆ ಸಿಕ್ಕ ಗೌರವ:
ವಿಶ್ವಗುರು ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕನನ್ನಾಗಿ ಘೋಷಿಸುವ ಮೂಲಕ ಎಲ್ಲ ಬಸವ ಭಕ್ತರ ಹೃದಯದಲ್ಲಿ ಸಿದ್ದರಾಮಯ್ಯ ಚಿರಸ್ಥಾಯಿಯಾಗಿದ್ದಾರೆ. ಬಜೆಟ್ನಲ್ಲಿ 'ವಚನ ವಿಶ್ವವಿದ್ಯಾಲಯ' ಸ್ಥಾಪನೆಗೆ ಅನುಮೋದನೆ ನೀಡಿ, ಶರಣರ ತತ್ವ ಹಾಗೂ ಸಮಾನತೆಯ ಸಂದೇಶವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಐತಿಹಾಸಿಕ ಕಾರ್ಯಕ್ಕೆ ಅವರು ಅಡಿಗಲ್ಲು ಹಾಕಿದ್ದಾರೆ ಎಂಬುದನ್ನು ಪಾಟೀಲ್ ಸ್ಮರಿಸಿದ್ದಾರೆ.
ಸಿದ್ದರಾಮಯ್ಯ ನೀಡಿದ ಬೆಂಬಲ ಸದಾ ಸ್ಮರಣೀಯ:
ತಮ್ಮ ರಾಜಕೀಯ ಬೆಳವಣಿಗೆಗೆ ಸಿದ್ದರಾಮಯ್ಯ ನೀಡಿದ ಮುಕ್ತ ಸ್ವಾತಂತ್ರ್ಯ ಮತ್ತು ಬೆಂಬಲವನ್ನು ಎಂ.ಬಿ. ಪಾಟೀಲ್ ಕೃತಜ್ಞತೆಯಿಂದ ನೆನೆದಿದ್ದಾರೆ:
ಜಲಸಂಪನ್ಮೂಲ ಖಾತೆ: "ನನ್ನ ಮೇಲೆ ಸಂಪೂರ್ಣ ಭರವಸೆ ಇಟ್ಟು, ರಾಜ್ಯದ ಎಲ್ಲ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಾದ ಆರ್ಥಿಕ ಸಂಪನ್ಮೂಲಗಳನ್ನು ಒದಗಿಸಿ, ಖಾತೆಯನ್ನು ಯಶಸ್ವಿಯಾಗಿ ನಿರ್ವಹಿಸಲು ಅವಕಾಶ ಕಲ್ಪಿಸಿದ್ದರು."
ಗೃಹ ಖಾತೆ: ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಗೃಹಖಾತೆ ಸಚಿವನಾಗಿದ್ದಾಗಲೂ ಅಮೂಲ್ಯ ಮಾರ್ಗದರ್ಶನ ನೀಡಿದ್ದರು.
ಕೈಗಾರಿಕಾ ಖಾತೆ: ‘ಇನ್ವೆಸ್ಟ್ ಕರ್ನಾಟಕ’ ಮೂಲಕ ವಿದೇಶಿ ನೇರ ಬಂಡವಾಳವನ್ನು ರಾಜ್ಯಕ್ಕೆ ಹರಿಸಲು ನನಗೆ ಸಂಪೂರ್ಣ ಸ್ವಾತಂತ್ರ್ಯ ಮತ್ತು ಶಕ್ತಿ ನೀಡಿದ್ದು ನನ್ನ ಸೌಭಾಗ್ಯ.
ಅಧಿಕಾರ ವೈಭವಕ್ಕಲ್ಲ, ಜನಸೇವೆಗೆ!:
"ಸಂವಿಧಾನದ ಮೇಲಿನ ಅಚಲ ಬದ್ಧತೆ, ಸಾಮಾಜಿಕ ನ್ಯಾಯದ ಹೋರಾಟ ಹಾಗೂ ಬುದ್ಧ, ಬಸವ, ಅಂಬೇಡ್ಕರ್ ತತ್ವಗಳ ಮೇಲಿನ ನಿಷ್ಠೆ ನಮಗೆಲ್ಲರಿಗೂ ದಾರಿದೀಪವಾಗಿದೆ. ಬಡವರು, ರೈತರು, ಕಾರ್ಮಿಕರ ಕಣ್ಣೀರಿನ ಭಾಷೆ ಬಲ್ಲ ಅವರು, ಅಧಿಕಾರವನ್ನು ವೈಭವಕ್ಕಾಗಿ ಬಳಸದೆ ಜನಸೇವೆಯ ಸಾಧನವಾಗಿ ಬಳಸಿದ ಅಪರೂಪದ ಮುತ್ಸದ್ಧಿ," ಎಂದು ಎಂ.ಬಿ. ಪಾಟೀಲ್ ಬಣ್ಣಿಸಿದ್ದಾರೆ.
ಅಧಿಕಾರಕ್ಕಿಂತ ಮೌಲ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ ಸಿದ್ದರಾಮಯ್ಯ ಅವರ ನಡೆ ಸಾರ್ವಜನಿಕ ಜೀವನಕ್ಕೆ ಆದರ್ಶವಾಗಿದೆ. ಅವರು ಸಕ್ರಿಯ ರಾಜಕಾರಣದಲ್ಲಿ ಮುಂದುವರಿದು ನಾಡು, ರಾಷ್ಟ್ರ ಹಾಗೂ ಪಕ್ಷಕ್ಕೆ ಸದಾ ಮಾರ್ಗದರ್ಶನ ನೀಡುತ್ತಿರಲಿ ಎಂದು ಎಂ.ಬಿ. ಪಾಟೀಲ್ ಆಶಿಸಿದ್ದಾರೆ.



