ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಾಜ್ಯ ಮಾದಾರ ಮಹಾಸಭಾದ ದೊಡ್ಡಬಳ್ಳಾಪುರ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ತಳವಾರ ನಾಗರಾಜ್ ಆಯ್ಕೆಯಾಗಿದ್ದಾರೆಂದು ಮಾದಾರ ಮಹಾಸಭಾದ ಜಿಲ್ಲಾಧ್ಯಕ್ಷ ಹೆಚ್. ಎಂ. ಸುಬ್ಬರಾಜು ತಿಳಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಾದಾರ ಮಹಾಸಭಾದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಸುಬ್ಬರಾಜು ಮಾತನಾಡಿ ಸ್ವತಂತ್ರ ಬಂದು 75ವರ್ಷಗಳಾದರು ಮಾದಿಗ ಸಮುದಾಯ ಇನ್ನೂ ಹಿಂದುಳಿದ ಸಮುದಾಯವಾಗಿದೆ. ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಲು ಶಿಕ್ಷಣ, ರಾಜಕೀಯ, ಆರ್ಥಿಕವಾಗಿ ಮುನ್ನಡೆಯಲು ಸಂಘಟಿತರಾಗಿ ಹೋರಾಟ ಮಾಡಬೇಕಿದೆ. ಇದಕ್ಕೆ ಎಲ್ಲರ ಸಹಕಾರ ಬಹು ಮುಖ್ಯವಾಗಿದೆ. ಹಾಗಾಗಿ ಸಮುದಾಯದ ಸಂಘಟನೆಗಾಗಿ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ನೂತನ ಪದಾಧಿಕಾರಿಗಳು ಸಮುದಾಯವನ್ನು ಒಗ್ಗೂಡಿಸುವ ದೃಷ್ಟಿಯಿಂದ ಹೆಚ್ಚಾಗಿ ನೋಂದಣಿ ಮಾಡಿಸಬೇಕಿದೆ. ಹೆಚ್ಚಾಗಿ ಸಂಘಟನೆಯದಾಗ ಮಾತ್ರ ನಮ್ಮ ಸಮುದಾಯ ಎಲ್ಲಾ ರಂಗಗಳಲ್ಲಿಯೂ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.
ನೂತನ ಅಧ್ಯಕ್ಷ ತಳವಾರ ನಾಗರಾಜ್ ಮಾತನಾಡಿ ತಾಲೂಕು ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿರುವುದು ನನಗೆ ಸಂತಸ ತಂದಿದೆ. ತಾಲೂಕಿನಲ್ಲಿ ಜಿಲ್ಲಾಧ್ಯಕ್ಷರ ಆದೇಶದಂತೆ ಹೆಚ್ಚು ನೋಂದಣಿ ಮಾಡಿಸಿ ಸಂಘಟಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ತಾಲೂಕಿನ ಸಮಾಜದ ಎಲ್ಲಾ ಹಿರಿಯರ ಮಾರ್ಗದರ್ಶನದಲ್ಲಿ ಎಲ್ಲರನ್ನು ಒಗ್ಗೂಡಿಸಿ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾದಾರ ಮಹಾಸಭಾದ ತತ್ವಾದರ್ಶಗಳಿಗೆ ದುಡಿಯಲು ಬದ್ಧನಾಗಿರುತ್ತೇನೆ. ಮುಂಬರುವ ದಿನಗಳಲ್ಲಿ ಸಮುದಾಯಕ್ಕೆ ಎಲ್ಲಾ ರಂಗಗಳಲ್ಲೂ ಮೀಸಲಾತಿ ಸಿಗಬೇಕಿದೆ. ನನ್ನ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿ ನೀಡಿದ ಸಮುದಾಯದ ಎಲ್ಲರಿಗೂ ನಾನು ಅಭಾರಿಯಾಗಿದ್ದೇನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತಾಲೂಕು ಮಹಾಸಭಾದ ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷ ತಳವಾರ ನಾಗರಾಜ್, ಉಪಾಧ್ಯಕ್ಷ ಟಿ. ಡಿ. ಮುನಿಯಪ್ಪ, ಖಜಾಂಚಿ ಲಕ್ಕಪ್ಪ ಸೇರಿದಂತೆ ಕಾರ್ಯಕಾರಿ ಸಮಿತಿಯ ಸದಸ್ಯರುಗಳ ಆಯ್ಕೆಯನ್ನು ಜಿಲ್ಲಾಧ್ಯಕ್ಷ ಸುಬ್ಬರಾಜು ಘೋಷಿಸಿದರು.
ಸುದ್ದಿ ಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯ ರಾಮಕೃಷ್ಣಪ್ಪ, ಜಿಲ್ಲಾ ಕಾರ್ಯದರ್ಶಿ ಬಚ್ಚಳ್ಳಿ ನಾಗರಾಜು,ಜಿಲ್ಲಾ ಮುಖಂಡರಾದ ಶಿವಣ್ಣ, ದೊಡ್ಡ ತುಮಕೂರು ವೆಂಕಟೇಶ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.


